ವಿಜ್ಞಾನಿ ದಿನೇಶ್ ಅಪಹರಣಕ್ಕೆ ಸುಪಾರಿ ಕಿಲ್ಲರ್ಸ್
ತುಮಕೂರಿನಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಬೆಂಗಳೂರಿಗೆ ವಾಪಸಾಗಲು ನಗರದ ತುಮಕೂರು ವಿಶ್ವವಿದ್ಯಾನಿಲಯದ ಬಳಿಯ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7:30ರ ಸುಮಾರಿಗೆ ನಿಂತಿದ್ದರು. ಇಲ್ಲಿನ ಅಶೋಕನಗರ 3ನೇ ಕ್ರಾಸಿನ ಬಳಿ ಇದ್ದ ದಿನೇಶ್ ಅವರನ್ನು ಅಪಹರಿಸಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ್ದರು. ಈ ಘಟನೆಯಿಂದ ಶಾಕ್ ಗೆ ಒಳಗಾದ ದಿನೇಶ್ ಅವರನ್ನು ಸಾರ್ವಜನಿಕರು ಕಾಪಾಡಿದ್ದಾರೆ.
ತುಮಕೂರು ಜಿಲ್ಲೆಯವರಾದ ಡಾ.ದಿನೇಶ್ ಬೆಂಗಳೂರಿನ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಮಕೂರಿನಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದರು. ಇವರಿಗೆ ಪೀಣ್ಯದಲ್ಲೂ ಒಂದು ಮನೆಯಿದ್ದು, ವಾರದಲ್ಲಿ ಎರಡು ಮೂರು ದಿನ ಬೆಂಗಳೂರಿನಲ್ಲಿ ಉಳಿದ ದಿನ ತುಮಕೂರಿನಲ್ಲಿರುತ್ತಿದ್ದರು.
ಕಿಡ್ನಾಪ್ ಸನ್ನಿವೇಶ: ವಿವಿ ನಿಲ್ದಾಣದಲ್ಲಿದ್ದ ದಿನೇಶ್ ಅವರನ್ನು ಕಿಡ್ನಾಪ್ ಮಾಡಲು ಎಸ್ ಎಸ್ ಪುರಂ ಕಡೆಯಿಂದ ಟಾಟಾ ಸುಮೋ(KA 03 B 7925)ದಲ್ಲಿ ಬಂದ ಎಂಟು ಜನರ ಗುಂಪು ಬಂದಿದೆ. ಅವರಲ್ಲಿ ನಾಲ್ಕು ಜನರು ದಿನೇಶ್ ಅವರನ್ನು ಸುಮೋದೊಳಗೆ ಹಾಕಿದ್ದಾರೆ.
ಈ ಸಂದರ್ಭದಲ್ಲಿ ದಿನೇಶ್ ಕೂಗಿಕೊಂಡಾಗ ಜನರು ಸೇರಿದ್ದರಿಂದ ನಾಲ್ವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಇದೇ ಸಮಯಕ್ಕೆ ಟಾಟಾ ಸುಮೋ ಬಿ.ಎಚ್. ರಸ್ತೆ ಮೂಲಕ ಟೌನ್ವೃತ್ತದತ್ತ ಹೋಗಿದೆ. ನಗರದ ಕೃಷ್ಣ ಹೋಟೆಲ್ ಬಳಿ ವಾಹನದ ದಟ್ಟಣೆಯಿಂದ ವಾಹನ ವೇಗ ನಿಧಾನವಾದಾಗ ದಿನೇಶ ಕೂಗಿಕೊಂಡಿದ್ದಾರೆ.
ಸುತ್ತಮುತ್ತಲ ಜನರು ವಾಹನವನ್ನು ಅಡ್ಡಗಟ್ಟಿ ದಿನೇಶ್ರನ್ನು ಕೆಳಗೆ ಇಳಿಸಿದ್ದಾರೆ. ಈ ಸಂದರ್ಭದಲ್ಲಿ ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ವಾಹನದ ಚಾಲಕ ಮುಹಮ್ಮದ್ ಖಾನ್ ಹಾಗೂ ಹರ್ಷದ್ ಎಂಬವರು ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಟಾಟಾ ಸುಮೋ ವಾಹನ, ವಾಹನದಲ್ಲಿದ್ದ ಮಾರಾಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ವಿಚಾರಣೆಗೆ ಒಳಪಡಿ ಸಿದಾಗ ತಾವು ಇಸ್ರೋ ವಿಜ್ಞಾನಿ ದಿನೇಶ್ ಅಪಹರಣಕ್ಕೆ ಸುಪಾರಿ ಪಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅಪಹರಣಕ್ಕೆ ಒಳಗಾಗಿದ್ದ ದಿನೇಶ ಅವರಿಗೆ ತುಮಕೂರು ಜಿಲ್ಲೆ ಶಿರಾ ತಾಲೂಕು ಸೀಬಿ ಬಳಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ 28 ಎಕರೆ ಭೂಮಿಯಿದ್ದು, ಅದರಲ್ಲಿ 5 ಎಕರೆಯನ್ನು ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ರಾಮಲಿಂಗೇಗೌಡ ಎಂಬವರ ಮೂಲಕ ಸುರಭಿ ಮಿನರಲ್ ವಾಟರ್ ಪ್ರೈವೆಟ್ ಲಿ. ಕಂಪೆನಿಗೆ ಮಾರಾಟ ಮಾಡಿ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.
ಪೂರ್ಣ ಹಣ ಪಡೆದರೂ ನೋಂದಣಿ ಮಾಡಿಕೊಟ್ಟಿರಲಿಲ್ಲ. ಆದರೆ ಕಳೆದ ಕೆಲ ತಿಂಗಳುಗಳಿಂದ ತಮ್ಮ ಭೂಮಿಯನ್ನು ತಮಗೆ ಬಿಟ್ಟುಕೊಡುವುದು ಇಲ್ಲವೇ, ಇಂದಿನ ಮಾರುಕಟ್ಟೆ ದರವನ್ನು ನೀಡಿದರೆ ಮಾತ್ರ ನೋಂದಣಿ ಮಾಡಿಸಿಕೊಡುವಂತಾಗಿ ದಿನೇಶ್ ತಗಾದೆ ತೆಗೆದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಸುಪಾರಿ ಕಿಲ್ಲರ್ ಗಳಿಗೆ ಹಣ ನೀಡಿ ದಿನೇಶ್ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಎನ್.ಇ.ಪಿ.ಎಸ್. ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಪ್ರಕರಣದ ತನಿಖೆಗೆ ಮುಂದಾಗಿ ತಪ್ಪಿಸಿ ಕೊಂಡಿರುವ ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.