ಅಯೋಧ್ಯಾ ಶ್ರೀರಾಮ ಹುಟ್ಟಿದ್ದು ಕ್ರಿ.ಪೂ ಜ.10
ವೇದಗಳ ವೈಜ್ಞಾನಿಕ ಸಂಶೋಧನಾ ಸಂಸ್ಥೆ(ಐ-ಸರ್ವ್) ತಾರಾಲಯ ತಂತ್ರಾಂಶದ ಲೆಕ್ಕಾಚಾರದಂತೆ ರಾಮನ ಜನ್ಮ ದಿನಾಂಕವನ್ನು ವೈಜ್ಞಾನಿಕ ವಿಧಾನದಿಂದ ನಿಶ್ಚಿತವಾಗಿ ಹೇಳಬಹುದಾಗಿದೆ.
ದಶರಥ ಪುತ್ರ ಶ್ರೀರಾಮ ಅಯೋಧ್ಯೆಯಲ್ಲಿ ಕ್ರಿ. ಪೂ. 5114 ಜನವರಿ 10 ರಂದು ಹುಟ್ಟಿರುವುದಾಗಿ ಪತ್ತೆ ಮಾಡಿದೆ. ಭಾರತೀಯ ಕ್ಯಾಲೆಂಡರ್ ಪ್ರಕಾರ ರಾಮ ಚೈತ್ರ ಮಾಸದ ಶುಕ್ಲ ಪಕ್ಷದ ಮಧ್ಯಾಹ್ನ 12ರಿಂದ 1 ಗಂಟೆ ನಡುವೆ ಜನಿಸಿದ್ದಾನೆ ಎಂದು ತಂತ್ರಾಂಶ ಫಲಿತಾಂಶ ನೀಡಿದೆ
ಈ ತಂತ್ರಾಂಶದ ಮೂಲಕ ಭಾರತೀಯ ಪುರಾಣಗಳಲ್ಲಿ ಕ್ರಿ.ಪೂ. 2000ಕ್ಕಿಂತ ಮೊದಲು ಸಂಭವಿಸಿರುವ ಹಲವಾರು ಘಟನೆಗಳನ್ನು ಸಾಬೀತು ಮಾಡಬಹುದಾಗಿದೆ. ನಾಸಾ ಮತ್ತು ನೆಹರೂ ಪ್ಲಾನೆಟೆರಿಯಂ ಸಹ ತಾರಾಲಯ ವಿವಿಧ ನಕ್ಷತ್ರ ಹಾಗೂ ಗ್ರಹಗಳನ್ನು ಕಂಡುಹಿಡಿಯಲು ಇದೇ ತಂತ್ರಾಂಶವನ್ನು ಉಪಯೋಗಿಸುತ್ತಿದೆ.
ವಾಲ್ಮೀಕಿ ತನ್ನ ರಾಮಾಯಣದಲ್ಲಿ ಬಣ್ಣಿಸಿರುವ ಗ್ರಹಗಳ ಸ್ಥಿತಿಗತಿಯನ್ನು ಪರಿಗಣಿಸಿ ಈ ತಂತ್ರಾಂಶ ರಾಮನ ಜನ್ಮದಿನಾಂಕವನ್ನು ಕಂಡುಕೊಂಡಿದೆ ಎಂದು ಐ-ಸರ್ವ್ ನ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ರೇಡಿಯೋ ಕಾರ್ಬನ್ ಡೇಟಿಂಗ್, ಜಲಾಂತರ್ಗತ ಸಂಶೋಧನೆಗಳು, ಕಂಪ್ಯೂಟರ್ ಗಳು, ಬಾಹ್ಯಾಕಾಶ ವೀಕ್ಷಕ ಮತ್ತು ಈ ತಂತ್ರಾಂಶವನ್ನು ಉಪಯೋಗಿಸಿ ರಾಮಾಯಣದ ಇನ್ನೂ ಅನೇಕ ಸನ್ನಿವೇಶಗಳ ಮತ್ತು ಪಾತ್ರಗಳ ಅಸ್ತಿತ್ವವನ್ನು ನಿಖರವಾಗಿ ಹೇಳಲು ಸಾಧ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಶ್ರೀರಾಮನ ಜನ್ಮದಿನಾಂಕ, ಆತನ ಅಸ್ತಿತ್ವ ಮತ್ತು ಆತನ ವನವಾಸದ 13ನೇ ವರ್ಷದ ವೇಳೆ ನಡೆದ ಖರದೂಷಣನ ಜತೆಗೆ ನಡೆದ ಯುದ್ಧ ಈ ತಂತ್ರಾಂಶದಿಂದಾಗಿ ಪತ್ತೆ ಹಚ್ಚಲಾಗಿದೆ. ಇದೇ ರೀತಿ ರಾಮನ ಅನುಯಾಯಿಗಳು ಅನುಜರಾದ ಭರತ, ಲಕ್ಷ್ಮಣ, ಶತ್ರುಘ್ನರಾದಿಯಾಗಿ ರಾವಣನ ತನಕ ಎಲ್ಲರ ಜಾತಕ ಬಿಡಿಸಲು ತಂತ್ರಾಂಶವನ್ನು ಬಳಸಲಾಗುತ್ತಿದೆಯಂತೆ.
ಪುರಾತನ ಕಾಲದ ಘಟನೆಗಳು, ಆ ಕಾಲಮಾನದ ಘಟನೆಗಳನ್ನು ನಿಖರವಾಗಿ ತಿಳಿಯಲು ಪ್ಲಾನಿಟೇರಿಯಂ ಸಾಫ್ಟ್ ವೇರ್, ಉನ್ನತ ತಂತ್ರಜ್ಞಾನವುಳ್ಳ ಗಣಕಗಳು, ಸ್ಪೇಸ್ ಇಮೇಜರಿ, ಅಂಡರ್ ವಾಟರ್ ಹುಡುಕಾಟ, ರೇಡಿಯೋ ಕಾರ್ಬನ್ ಡೇಟಿಂಗ್ ವಿಧಾನಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಖಚಿತವಾಗಿ ರಾಮಾಯಣ, ಮಹಾಭಾರತ ಕಾಲ ಹಾಗೂ ಮಹಾನ್ ಪುರುಷರು ಜೀವಿಸಿದ್ದ ಅವಧಿಯ ಸರಿಚಿತ್ರಣ ಸಿಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸೂಚನೆ: ರಾಮನ ಹುಟ್ಟುಹಬ್ಬದ ದಿನ ಹಾಗೂ ಕಾಲಾವಧಿಯ ಬಗ್ಗೆ 2003ರಲ್ಲೇ ಸರೋಜ್ ಬಾಲಾ ಹಾಗೂ ಕೃಷ್ಣನ ಹುಟ್ಟಿದದಿನ (ಜು.21, ಕ್ರಿ.ಪೂ3228 ) ದ ಬಗ್ಗೆ ಅರುಣ್ ಕೆ. ಬನ್ಸಾಲ್ ಹೇಳಿದ್ದರು. ಆದರೆ, ಅವರ ಬಳಿ ಇದ್ದ ಪುಸ್ತಕದ ದಾಖಲೆಗೆ ಅಷ್ಟು ಮಾನ್ಯತೆ ಸಿಕ್ಕಿರಲಿಲ್ಲ. ಸಂಘ ಪರಿವಾರದ ದಾಖಲೆಗಳ ಕಡತಗಳಲ್ಲಿ ಈ ಮಹತ್ವದ ವಿಷಯ ಸೇರಿತ್ತು ಅಷ್ಟೇ.