ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೋರ್ಟಿನಿಂದ ಶುಭ ಸುದ್ದಿ
ವಿಟಿಯು ನಿಯಮದ ಪ್ರಕಾರ ಸ್ವಾಯುತ್ತತೆ (non-autonomous) ಪಡೆಯದ ಎಲ್ಲಾ ಕಾಲೇಜುಗಳಲ್ಲಿ ಐದನೇ ಸೆಮಿಸ್ಟರ್ ಇಂಜಿನಿಯರಿಂಗ್ ತರಗತಿಗೆ ವಿದ್ಯಾರ್ಥಿ ಅರ್ಹತೆ ಪಡೆಯಬೇಕಾದರೆ ಮೊದಲ ಎರಡು ಸೆಮಿಸ್ಟರ್ ಗಳ ಎಲ್ಲಾ ಪಠ್ಯ ವಿಷಯಗಳಲ್ಲಿ ಪಾಸಾಗಿರಬೇಕು. ಹಾಗೂ ನಾಲ್ಕನೇ ಮತ್ತು ಐದನೇ ಸೆಮಿಸ್ಟರ್ ನ ಎಲ್ಲಾ ವಿಷಯಗಳಲ್ಲಿ ಪಾಸ್ ಆದರೆ ಮಾತ್ರ 7 ನೇ ಸೆಮಿಸ್ಟರ್ ತರಗತಿಗೆ ಹಾಜರಾಗಬಹುದಾಗಿದೆ.
ಈ ನಿಯಮವನ್ನು ವಿರೋಧಿಸಿ ಬೆಂಗಳೂರು ಮೂಲದ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹೈಕೊರ್ಟ್ ಮೆಟ್ಟಿಲೇರಿದ್ದರು. ವಿದ್ಯಾರ್ಥಿಗಳ ಪರ ಎಸ್ ಆರ್ಮುಗಂ ಸಮರ್ಥವಾಗಿ ವಾದಿಸಿದರು. ವಿದ್ಯಾರ್ಥಿಗಳ ಅಳಲಿಗೆ ಸ್ಪಂದಿಸಿದ ನ್ಯಾ. ಎಎಸ್ ಬೋಪಣ್ಣ, ವಿಟಿಯು ನಿಯಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎರಡು ವರ್ಷಗಳ ಕೆಳಗೆ ಜಾರಿಗೊಂಡ ಈ ಕ್ಯಾರಿ ಓವರ್ ಪದ್ಧತಿಗೆ ವ್ಯಾಪಕ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಈ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಯಾವುದೇ ಘಟ್ಟದಲ್ಲಿ ಕಳೆದ ವರ್ಷದ 4 ವಿಷಯಕ್ಕಿಂತ ಅಧಿಕ ಬ್ಯಾಕ್ ಲಾಗ್ ಹೊಂದಿರುವಂತಿಲ್ಲ. ಹೆಚ್ಚಿನ ಬ್ಯಾಕ್ ಲಾಗ್ ಹೊಂದಿದ್ದರೆ ಆ ಸೆಮಿಸ್ಟರ್ ಮತ್ತೊಮ್ಮೆ ಓದಬೇಕಾಗುತ್ತದೆ.
ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ ವೃಂದ ಸಂಪ್ಲಿಮೆಂಟರಿ ಪರೀಕ್ಷೆಯಲ್ಲಿ ಬ್ಯಾಕ್ ಲಾಗ್ ವಿಷಯಗಳನ್ನು ಪೂರ್ಣಗೊಳಿಸುತ್ತೇವೆ. ಆಗಸ್ಟ್ ಮೊದಲ ವಾರ ಹೊಸ ಸೆಮಿಸ್ಟರ್ ಶುರುವಾಗುತ್ತದೆ. ನಾವು ಕ್ಲಾಸ್ ಅಡೆಂಟ್ ಮಾಡೋಕೆ ಅಡ್ಡಿ ಪಡಿಸಿದರೆ ಒಂದು ವರ್ಷ ಹಾಳಾಗುತ್ತದೆ ಎಂದು ಗೋಳಾಡಿದ್ದಾರೆ.
ಹೈಕೋರ್ಟಿನ ತೀರ್ಪಿನಿಂದ ಸುಮಾರು 19,000 ವಿದ್ಯಾರ್ಥಿಗಳು ನೆಮ್ಮದಿಯ ದಿನಗಳನ್ನು ಕಾಣಬಹುದಾಗಿದೆ. ಕೋರ್ಟ್ ಮಧ್ಯಂತರ ಆದೇಶಕ್ಕೆ ತಲೆಬಾಗಿ ವಿಟಿಯು ವರ್ಷಕ್ಕೆ ಒಂದು ಸಂಪ್ಲಿಮೆಂಟರಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಏಳಿಗೆಗೆ ಪೂರಕವಾಗಿ ನಿಲ್ಲುತ್ತದೆಯೋ ಅಥವಾ ಹಠಮಾರಿತನ ಮುಂದುವರೆಸಿ ಮೇಲ್ಮನವಿ ಸಲ್ಲಿಸುತ್ತದೆಯೋ ಕಾದು ನೋಡಬೇಕಿದೆ.