ರೆಡ್ಡಿಗೆ ಜಾಮೀನು; ಕೆಎಂಎಫ್ ಕೆಚ್ಚಲಿಗೆ ಸೋಮ ಕೊಡಲಿ
ಹೊಸ ಸಮಾಚಾರವೇನೆಂದರೆ ರೆಡ್ಡಿಗೆ ಜಾಮೀನು ದೊರೆಕಿಸಲು ಸೋಮ ರೆಡ್ಡಿ ಗ್ಯಾಂಗ್ ಸರಿ ಸುಮಾರು 20 ಕೋಟಿ ರೂಪಾಯಿಯನ್ನೇ ಖರ್ಚು ಮಾಡಿದೆ. ಆದರೆ ಸಿಬಿಐನವರು ರೆಡ್ಡಿಯ ಅಷ್ಟೂ ಖಾತೆಗಳನ್ನು ಒಂದು ವರ್ಷದ ಹಿಂದೆ ಜಪ್ತಿ ಮಾಡಿಕೊಂಡು ಹೋಗಿರುವಾಗ ಇಷ್ಟೊಂದು ಭಾರಿ ಮೊತ್ತವನ್ನು ಎಲ್ಲಿಂದ ಹೊಂದಿಸಿದರಪ್ಪಾ ಎಂಬ ಪ್ರಶ್ನೆಗೆ ಕೆಎಂಎಫ್ ನತ್ತು ಕಣ್ಣುಬಿಡುವಂತಾಗಿದೆ.
ಹೇಳಿಕೇಳಿ ಸೋಮಶೇಖರ ರೆಡ್ಡಿಯೇ KMF ಅಧಿಪತಿ. ಇನ್ನು KMF ಸಹ ನಿಜಕ್ಕೂ ಹಣದ ಹೊಳೆಯನ್ನೇ ಹರಿಸುವ ಸಾಮರ್ಥ್ಯವಿರುವ ಸಂಸ್ಥೆ. ಅಂತಹುದರಲ್ಲಿ ರೆಡ್ಡಿ ಬ್ರದರ್ಸ್ ಇಂತಹ KMF ಕೆಚ್ಚಲಿಗೇ ಕೈಹಾಕಿದ್ದಾರೆ ಎನ್ನುತ್ತಿವೆ KMF ಮೂಲಗಳು.
ಈ ಬಗ್ಗೆ KMFನಲ್ಲಿ ನಡೆದಿರುವ ದುರ್ವ್ಯವಹಾರದ ಬಗ್ಗೆ ತನಿಖೆ ನಡೆಸಲು ಮತ್ತು ಜೈಲುಪಾಲಾಗಿರುವ ಸೋಮಶೇಖರ ರೆಡ್ಡಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಶೀಘ್ರವೇ KMF ಮಂಡಳಿಯ ಸಭೆ ಕರೆಯುವುದಾಗಿ ಸಹಕಾರ ಸಚಿವ ಬಿಜೆ ಪುಟ್ಟಸ್ವಾಮಿ ನಿನ್ನೆ ಪ್ರಕಟಿಸಿದ್ದಾರೆ.
ಏನದು ಸೋಮ ರೆಡ್ಡಿಯ KMF ದುರ್ವ್ಯವಹಾರ?: KMF ಗೋಪಾಲಕ ಸೋಮಶೇಖರ ರೆಡ್ಡಿ ಕಳೆದ ಮೇ ತಿಂಗಳಲ್ಲಿ ಸಂಸ್ಥೆಗಾಗಿ ಭಾರಿ ಪ್ರಮಾಣದಲ್ಲಿ ಹತ್ತಿ ಬೀಜಗಳನ್ನು ಖರೀದಿಸಿದ್ದಾರೆ. ಈ ಹತ್ತಿ ಬೀಜ ಖರೀದಿಯ ಬಗ್ಗೆಯೇ ಈಗ ಆಂಧ್ರದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ACB) ಕೆಂಗಣ್ಣು ಬೀರಿರುವುದು.
ಏಕೆಂದರೆ ಇತ್ತ ಭಾರಿ ಪ್ರಮಾಣದ ಹತ್ತಿ ಬೀಜ ಖರೀದಿಗೆ ಆಜ್ಞಾಪಿಸಿದ KMF ಸೋಮಶೇಖರ ರೆಡ್ಡಿ ಅದೇ ವೇಳೆ ಅತ್ತ ತಮ್ಮುಡು ಜನಾರ್ದನ ರೆಡ್ಡಿ ಜಾಮೀನಿಗಾಗಿ ಭಾರಿ ರಖಮ್ಮನ್ನು ಹೊಂದಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ ಮಾರುಕಟ್ಟೆಯ ದರಕ್ಕಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಬೀಜ ಖರೀದಿಸಲಾಗಿದೆ. ಇದಕ್ಕೆ ಗುಂಟೂರಿನ ವ್ಯಾಪಾರಿ ದಲ್ಲಾಳಿಯಾಗಿ ರೆಡ್ಡಿಗಳಿಗೆ ನೆರವಾಗಿದ್ದಾನೆ. ತತ್ಫಲವಾಗಿ, KMFಗೆ 25 ಕೋಟಿ ರೂಪಾಯಿ ನಷ್ಟವುಂಟಾಗಿದ್ದರೆ ಅತ್ತ ರೆಡ್ಡಿಗಾರು ಅದೇ ಹಣವನ್ನು ಹೊಂದಿಸಿ, ಜಾಮೀನು ಗಿಟ್ಟಿಸುವಲ್ಲಿ ಯಶಸ್ವಿಯಾದರು ಎಂಬುದು ಈಗ ಕೇಳಿ ಬಂದಿರುವ ಆರೋಪ.
ಹಸುಗಳ ಹೊಟ್ಟೆ ತುಂಬಲು KMFಗೆ ಪ್ರತಿ ತಿಂಗಳೂ 3,500 ಟನ್ ಹತ್ತಿ ಬೀಜ ಬೇಕಾಗುತ್ತದೆ. ಇದರ ಬೆಲೆ ಪ್ರಸಕ್ತ ಸಾಲಿನ ಆರಂಭದಲ್ಲಿ 12 ರಿಂದ 16 ಸಾವಿರ ರೂಪಾಯಿಯಿತ್ತು. ಆದರೆ ಸೋಮ ರೆಡ್ಡಿ ಜುಲೈ ತಿಂಗಳಲ್ಲಿ ಎರಡು ಬಾರಿ 29 ಸಾವಿರ ಟನ್ ಹತ್ತಿ ಬೀಜ ಖರೀದಿಗೆ ಆದೇಶ ನೀಡಿದರು.
ಅದಕ್ಕೂ ಮುನ್ನು ಫೆಬ್ರವರಿಯಲ್ಲಿ ಇದೇ KMF 21 ಸಾವಿರ ಟನ್ ಹತ್ತಿ ಬೀಜ ಖರೀದಿಸಿತ್ತು. ಅದೂ ಕೇವಲ ಟನ್ ಗೆ 12 ಸಾವಿರ ರೂಪಾಯಿ ದರದಲ್ಲಿ. ಆದರೆ ಅಂತಹ ಅಗ್ಗದ ಹತ್ತಿ ಬೀಜ ಖರೀದಿ ಪ್ರಸ್ತಾವನೆಯನ್ನು ಕೈಬಿಟ್ಟ KMF ಗೋಪಾಲಕ ಸೋಮ ರೆಡ್ಡಿ ಜುಲೈ 12ರಂದು 21 ಸಾವಿರ ರೂ. ದರದಲ್ಲಿ 14,100 ಟನ್ ಹತ್ತಿ ಬೀಜ ಖರೀದಿಸುತ್ತಾರೆ. ಆದರೆ ಆಗ ಹತ್ತಿ ಬೀಜದ ಬೆಲೆ ಮಾರುಕಟ್ಟೆಯಲ್ಲಿ ಕೇವಲ 13 ಸಾವಿರ ರೂಪಾಯಿಯಿರುತ್ತದೆ.
ಇದಾದನಂತರವೂ ಜುಲೈ 27ರಂದು ಟನ್ ಗೆ 27,100 ರೂಪಾಯಿಯಂತೆ 15,000 ಟನ್ ಖರೀದಿಗೆ ಅಂಕಿತ ಹಾಕುತ್ತಾರೆ. ಆಗ ಮಾರುಕಟ್ಟೆ ದರ 15,500 ರೂ. ಇರುತ್ತದೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ KMF ಆಡಳಿತ ಮಂಡಳಿಯ ಇತರೆ ನಿರ್ದೇಶಕರುಗಳೇನು ತೌಡು ಕುಟ್ಟುತ್ತಿದ್ದಾರಾ ಅಂದರೆ ಹಾಗೇನೂ ಇಲ್ಲ.
ಕೆಲವರು ತಕ್ಷಣ ಸರಕಾರದ ಮಟ್ಟದಲ್ಲಿ ಉನ್ನತಾಧಿಕಾರೊಯೊಬ್ಬರನ್ನು ಕಂಡು ಹೀಗೀಗೆ ಅವ್ಯವಹಾರ ನಡೆಯುತ್ತಿದೆ ಎಂದಿದ್ದಾರೆ. ಆದರೆ ಅದು ಆ ಅಧಿಕಾರಿಯ ಕಿವಿಗೆ ಬಿದ್ದಿಲ್ಲ. ಇತ್ತ KMF ಗೋಪಾಲಕ ಸೋಮ ರೆಡ್ಡಿ 25 ಕೋಟಿ ರಖಮ್ಮು ತೆಗೆದುಕೊಂಡು ಹೈದರಾಬಾದಿನತ್ತ ಹೊರಟರು ಎಂದು KMF ಆಡಳಿತ ಮಂಡಳಿ ಮೂಲಗಳು ಈಗ ಬಾಯ್ಬಿಡುತ್ತಿವೆ.
ಇದು ನಿಜವೇ ಆಗಿದ್ದಲ್ಲಿ ದುಡ್ಡಿಗಾಗಿ ಭೂತಾಯಿಯ ಒಡಲನ್ನೇ ಬರಿದಾಗಿಸಿದ ರೆಡ್ಡಿ ಸೋದರರಿಗೆ, ಕಾಮಧೇನು ಕೆಚ್ಚಲಿಗೂ ಕೊಡಲಿಯಿಟ್ಟ ಕೆಟ್ಟ ಅಪವಾದ ಸುತ್ತುಕೊಳ್ಳುತ್ತದೆ.