ಬೀದಿನಾಯಿ, ಸಾಕುನಾಯಿ ಮಧ್ಯೆ ಹುಚ್ಚುನಾಯಿ ಯಾರು?
ಮುಖ್ಯಮಂತ್ರಿ ಖುರ್ಚಿ ಬಿಟ್ಟುಕೊಡಪ್ಪಾ ಎಂದಿದ್ದಕ್ಕೆ ಸದಾನಂದ ಗೌಡರು ಯಡಿಯೂರಪ್ಪ ಪಟಾಲಂ ಅನ್ನು ಬೀದಿ ನಾಯಿಗಳಿಗೆ ಹೋಲಿಸಿದ ಬಳಿಕ ಈಗ ಅದೇ ಬಿಜೆಪಿ ಪಕ್ಷದ ಸಚಿವ ಬಿಜೆಪಿ, ರಾಜ್ಯದ ಕಾಂಗ್ರೆಸ್ ಮಂದಿಯನ್ನು ಸಾಕು ನಾಯಿ ಅಂದಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯಲ್ಲಿ ಕೆಮ್ಮಿದರೆ ಇಲ್ಲಿಂದಲೇ ಬಾಲ ಅಲ್ಲಾಡಿಸುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಕಾಂಗ್ರೆಸ್ಸಿನ ಸಾಕು ನಾಯಿಗಳು ಎಂದು ಸಹಕಾರ ಖಾತೆಯ ಸಚಿವ ಮಾನ್ಯ ಬಿಜೆಪಿ ಪುಟ್ಟಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ನಾಯಿಯನ್ನು ಬಾಲ ಹಿಂಬಾಲಿಸುವ ರೀತಿ ಮಾಜಿ ಸಿ ಎಂ ಯಡಿಯೂರಪ್ಪ ಅವರನ್ನು ಬಿಜೆಪಿಯ ಸಚಿವರು, ಶಾಸಕರು ಹಿಂಬಾಲಿಸುತ್ತಾರೆ ಎಂದು ಸಿದ್ದರಾಮಯ್ಯನವರು ಮಾಡಿರುವ ಟೀಕೆಗೆ ಪತ್ರಿಕಾಗೋಷ್ಠಿಯನ್ನೇ ಕರೆದು ಪುಟ್ಟಸ್ವಾಮಿಯವರು ನೀಡಿರುವ ಪ್ರತಿಕ್ರಿಯೆ ಇದು.
ಪ್ರತಿಪಕ್ಷಗಳಿಗೆ ನಾವೂ ಗೌರವ ನೀಡುತ್ತೇವೆ. ಅವರು ಬಾಯಿಗೆ ಬಂದಂತೆ ಮಾತನಾಡಿದರೆ ನಮಗೆ ಅವರದೇ ಶೈಲಿಯಲ್ಲಿ ಉತ್ತರ ನೀಡುವುದು ಗೊತ್ತು. ಮನೆಯಲ್ಲಿ ಕುಳಿತು ಜನರ ಪರವಾಗಿ ಮಾತನಾಡುವ ಅವರ ನೈತಿಕ ಶಕ್ತಿ ಏನು ಎಂಬುದು ತಿಳಿದಿದೆ ಎಂದು ಸಚಿವ ಬಿಜೆಪಿ ಟೀಕಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷಗಿರಿಗೆ ಲಾಬಿ ಮಾಡುತ್ತಿರುವ ಸಿದ್ದರಾಮಯ್ಯನವರು ವರುಣಾ ವಿಧಾನಸಭೆ ಕ್ಷೇತ್ರ ಹಾಗೂ ಈಗಿನ ಹುದ್ದೆ ಉಳಿಸಿಕೊಳ್ಳಲು ಶತಪ್ರಯತ್ನ ಪಡುತ್ತಿದ್ದಾರೆ. ಇನ್ನು ಪರಮೇಶ್ವರ ಅವರು ಬೆಂಗಳೂರಿನಲ್ಲಿ ಕುಳಿತು ಆರ್ಭಟಿಸುತ್ತಿದ್ದಾರೆ. ಇವರಿಗೆ ತಾಕತ್ತಿದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರ 19,135 ಕೋಟಿ ರೂ. ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.