ನಂಜನಗೂಡು ರೈತರ ಹೋರಾಟಕ್ಕೆ ಹಸು ಬೆಂಬಲ
ಉತ್ತರ ಕರ್ನಾಟಕದ ಕಬ್ಬಿನ ಕಾರ್ಖಾನೆಗಳ ಮಾದರಿಯಲ್ಲಿ ಬಣ್ಣಾರಿ ಕಾರ್ಖಾನೆ ಕೂಡರೈತರು ಬೆಳೆಯುವ ಕಬ್ಬಿಗೆ ಎಕ್ಸ್ ಫೀಲ್ಡ್ ದರವನ್ನು ನಿಗದಿಪಡಿಸಬೇಕು. ಮತ್ತು ಕಳೆದೆರಡು ವರ್ಷಗಳಲ್ಲಿ ಅರೆದ ಕಬ್ಬಿಗೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿಯನ್ನು ಕೂಡಲೆ ಪಾವತಿಸಬೇಕು ಎಂದು ರೈತರು ಆಗ್ರಹಿಸಿದರು.
ಅಧಿಕಾರಿಗಳ ನಿರಾಸಕ್ತಿಯನ್ನು ವಿರೋಧಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರು 'ಕಬ್ಬಿಗೆ ಎಕ್ಸ್ ಫೀಲ್ಡ್ ದರ ನಿಗದಿಪಡಿಸಿ', 'ಹಲ್ಲೆ ಮಾಡಿದವರ ಮೇಲೆ ಕ್ರಮ ಜರುಗಿಸಿ', 'ಅನ್ನದಾತ ಆಗದಿರಲಿ ಅನಾಥ', 'ಹಲ್ಲೆ ಮಾಡಿದ ಗೂಂಡಾಗಳಿಗೆ ಧಿಕ್ಕಾರ' ಮುಂತಾದ ಬರಹವಿರುವ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು.
ಮಳೆಯಾಗದೆ ಅಂತರ್ಜಲ ಕುಸಿದಿದ್ದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರಕಾರವೇ ರೈತರ ನೆರವಿಗೆ ಧಾವಿಸಬೇಕಿದೆ. ಅನ್ನದಾತ ಅನಾಥನಾಗಲು ಸರಕಾರ ಬಿಡಬಾರದು ಎಂದು ರೈತರು ಅಲವತ್ತುಕೊಂಡರು. ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಿ, ಹಿಂದಿನ ಬಾಕಿ ವಾಪಸ್ ಕೊಡಿಸದಿದ್ದರೆ ಹೋರಾಟವನ್ನು ಇನ್ನೂ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಕಾರ್ಖಾನೆ ಅಧಿಕಾರಿಗಳು ಮತ್ತು ರೈತರ ನಡುವೆ ಸಂಧಾನ ನಡೆಸಲು ಜಿಲ್ಲಾಧಿಕಾರಿ ಆ.18ರಂದು ಕರೆದಿದ್ದ ಸಭೆ ವಿಫಲವಾಗಿತ್ತು. ಆ ಸಂದರ್ಭದಲ್ಲಿ ಕಾರ್ಖಾನೆ ಮ್ಯಾನೇಜ್ಮೆಂಟ್ ಮತ್ತು ರೈತರ ಬಣಗಳ ನಡುವೆ ಜಟಾಪಟಿ ನಡೆದು ಕೆಲವರ ಮೇಲೆ ಹಲ್ಲೆಗಳು ನಡೆದಿದ್ದವು. ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ರೈತರ ಆಪ್ತಮಿತ್ರರಾದ ಕೆಲ ಹಸುಗಳು ಕೂಡ ಅಲ್ಲಿ ಬಂದು ನೆರೆದಿದ್ದವು.