ಈದ್ ಖುಷಿ ಕದ್ದ ಮೆಹಂದಿಗೆ ಯಾರು ಬಲಿಯಾಗಿಲ್ಲ
ಕಳೆದ ಎರಡು ದಿನಗಳಿಂದ ಕಿಡಿಗೇಡಿಗಳು ಹಬ್ಬಿಸಿದ ಈ ಸುಳ್ಳು ವದಂತಿ ಗಾಳಿಗಿಂತ ವೇಗವಾಗಿ ಎಲ್ಲೆಡೆ ಹರಡಿ, ಮುಸ್ಲಿಂ ಜನಾಂಗ ಸಮೂಹ ಸನ್ನಿಗೆ ಒಳಗಾದವರಂತೆ ವರ್ತಿಸತೊಡಗಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಎಸ್ ಎಂಎಸ್ ಈ ರೀತಿ ಇತ್ತು: "A girl applied Mehandi (sic) called red cone ... her hands and legs got infected, so doctors suggested to cut off her hands and legs..."
ವೈದ್ಯರ ಹೇಳಿಕೆ: ಇದೊಂದು ಕಿಡಿಗೇಡಿಗಳ ಕುಚೋದ್ಯ. ಮೆಹಂದಿ ಹಾಕಿಕೊಳ್ಳುವುದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ತೀರಾ ಹಳೆ ಸ್ಟಾಕ್ ಮೆಹಂದಿ ಇದ್ದರೆ ಅದನ್ನು ಬಳಸಬೇಡಿ. ಆದರೆ, ಮೆಹಂದಿ ಹಾಕಿಕೊಂಡ ತಕ್ಷಣ ಮೈ ಕೈ ಉರಿ ಬಂದರೂ ಯಾರೂ ಸಾವನ್ನಪ್ಪುವುದಿಲ್ಲ. ಸುಳ್ಳು ವದಂತಿಗಳನ್ನು ನಂಬಬೇಡಿ ಸರ್ಕಾರಿ ವೈದ್ಯರು ಹೇಳಿದ್ದಾರೆ.
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹುಬ್ಬಳ್ಳಿ ಧಾರವಾಡ, ಹಾಸನ, ಸಕಲೇಶಪುರ, ಶಿಡ್ಲಘಟ್ಟ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ ಪ್ರದೇಶ, ಹೊರ ರಾಜ್ಯಗಳಲ್ಲಿ ಚೆನ್ನೈ, ವಿಜಯವಾಡ, ಕರ್ನೂಲುಗಳಲ್ಲಿ ಕಿಲ್ಲರ್ ಮೆಹಂದಿ ಮೆಸೇಜ್ ಹರಿದಾಡಿ ಆತಂಕ ಸೃಷ್ಟಿಸಿತ್ತು. ಆಂಧ್ರಪ್ರದೇಶದಲ್ಲಿ ರಾಸಾಯನಿಕ ಬಳಸಿದ ಮೆಹಂದಿ ಬದಲಿಗೆ ಹಲವರು ನೈಸರ್ಗಿಕ ಗೋರಂಟಿ ಬಳಸಲು ಆರಂಭಿಸಿದರು ಎಂದು ತಿಳಿದುಬಂದಿದೆ.
ಈ ಸಮೂಹ ಸನ್ನಿಗೆ ಒಳಗಾದ ಸಾವಿರಾರು ಮಂದಿ ಮೆಹಂದಿ ಹಾಕಿದ್ದ ತಮ್ಮ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡರು. ಆದರೆ, ಜನರಿಗೆ ದೈಹಿಕ ತೊಂದರೆಗಿಂತ ಭಯ ಆತಂಕಕ್ಕೆ ಒಳಗಾಗಿ ಮಾನಸಿಕವಾಗಿ ತಾಳ್ಮೆ ಕಳೆದುಕೊಂಡು ಮೋಡಿಗೆ ಒಳಗಾದವರಂತೆ ವರ್ತಿಸುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಚೆನ್ನೈನ ಸ್ಟಾನ್ಲಿ ಆಸ್ಪತ್ರೆಯಲ್ಲಿ ಸುಮಾರು 800 ಮಂದಿ ಇದೇ ಮೆಹಂದಿ ಮೋಡಿಗೆ ತುತ್ತಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಅಂಬೂರ್ ಅಥವಾ ಕೃಷ್ಣಗಿರಿ ಕಡೆಯಿಂದ ಮೆಸೇಜ್ ಬಂದಿದೆ ಎಂದು ಚೆನ್ನೈ ಪೊಲೀಸ್ ಕಮೀಷನರ್ ಜೆಕೆ ತ್ರಿಪಾಠಿ ಶಂಕೆ ವ್ಯಕ್ತಪಡಿಸಿದ್ದಾರೆ.,
ಇತ್ತ ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಹಾಸನದಲ್ಲಿ ಈದ್ ದಿನದ ಸಂಭ್ರಮ ಕೆಡಸಲು ಹಾಲಿನಲ್ಲಿ ವಿಷ ಹಾಗೂ ಮೆಹಂದಿಯಲ್ಲಿ ವಿಷ ಇದೆ ಎಂದು ವದಂತಿ ಹಬ್ಬಿಸಿದ ದುಷ್ಕರ್ಮಿಗಳ ಹುಡುಕಾಟ ನಡೆದಿದ್ದು, ಕೇರಳದ ಕಾಸರಗೋಡಿನ ಕಡೆಯಿಂದ ಎರಡೂ ವದಂತಿ ಮೆಸೇಜ್ ಗಳು ಬಂದಿದೆ ಎನ್ನಲಾಗಿದೆ.