ಅಸ್ಸಾಂ ಗಲಭೆ: 80 ವೆಬ್ ಪುಟ, ಖಾತೆ block
ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಸಂದೇಶ ಹರಡಲು ವೇದಿಕೆಯಾಗಿ ಗಲಭೆ ಹಬ್ಬಲು ಕಾರಣವಾಗಿರುವ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟರ್, ಗೂಗಲ್ ಸೇರಿದಂತೆ 80 ವೆಬ್ ಪುಟಗಳು ಹಾಗೂ ವೆಬ್ ಖಾತೆಗಳನ್ನು ತಡೆ ಹಿಡಿಯಲು ಸರ್ಕಾರ ಆದೇಶ ರವಾನಿಸಲಿದೆ.
ಪ್ರಚೋದನಕಾರಿ ಹೇಳಿಕೆಗಳು, ಕಾಮೆಂಟ್ ಗಳು, ಚಿತ್ರಗಳನ್ನು ಬಳಸುವ ವೆಬ್ ತಾಣಗಳನ್ನು ಗುರುತಿಸಿದ್ದು, ಎಲ್ಲವನ್ನೂ ಬ್ಲಾಕ್ ಮಾಡಲು ಸೂಚನೆ ನೀಡಲಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಶಾನ್ಯ ಭಾರತೀಯರಲ್ಲಿ ಭೀತಿ ಹುಟ್ಟಿಸುವ ಕಾರ್ಯ ಇದರಿಂದ ಆಗುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿದೆ.
ಕೆಲ ದಿನಗಳ ಮಟ್ಟಿಗೆ ಸಾಮಾಜಿಕ ಜಾಲ ತಾಣಗಳನ್ನು ನಿಷೇಧಿಸುವಂತೆ ಮಹಾರಾಷ್ಟ್ರ ಗೃಹ ಸಚಿವ ಆರ್ ಆರ್ ಪಾಟೀಲ್ ಹಾಗೂ ಸಮಾಜವಾದಿ ಪಕ್ಷದ ಸಂಸದ ರಾಮ ಗೋಪಾಲ್ ಯಾದವ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.
ಅಸ್ಸಾಂ ಗಲಭೆ ಹಾಗೂ ಭಾರತದ ಆತರಿಂಕ ಭದ್ರತೆ ಕೆಡಿಸಲು ಪಾಕಿಸ್ತಾನದ ಐಎಸ್ ಐ ಸಂಘಟನೆ ಕಾರಣ ಎಂದು ಗುಪ್ತಚರ ಇಲಾಖೆ ದೃಢಪಡಿಸಿದೆ. ಐಎಸ್ ಐ ಪ್ರೇರಿತ ಸಮಾಜಘಾತುಕ ಶಕ್ತಿಗಳು ಬೆದರಿಕೆ ಕರೆ ಹಾಗೂ ಆತಂಕ ಸೃಷ್ಟಿಸುತ್ತಿದೆ ಎಂಬುದು ದೃಢಪಟ್ಟಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ಹಾರಿಕೆ ಉತ್ತರ ನೀಡಿ ಸುಮ್ಮನಾಗಿದೆ.
ಆಸ್ಸಾಂನಲ್ಲಿ ಕಳೆದ 15 ದಿನಗಳ ಹಿಂದೆ ಬೋಡೋ ಹಾಗೂ ಮುಸ್ಲಿಂ ಸಮುದಾಯದ ನಡುವೆ ತೀರ್ವ ಘರ್ಷಣೆ ಏರ್ಪಟ್ಟಿತ್ತು. ಇದರಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಲಕ್ಷಾಂತರ ಜನರು ನಿರಾಶ್ರಿತರಾದರು.
ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರು ಹಾಗೂ ಸ್ಥಳೀಯ ಬೋಡೋ ಗಳ ನಡುವೆ ನಡೆದ ಜನಾಂಗೀಯ ಘರ್ಷಣೆಯ ಲಾಭವನ್ನು ಪಾಕಿಸ್ತಾನ ಪಡೆದಿದೆ. ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದೆ. ಇದರಿಂದ ಐಎಸ್ ಐ ತನ್ನ ಕಾರ್ಯತಂತ್ರ ರೂಪಿಸಲು ಸಾಧ್ಯವಾಯಿತು ಎಂದು ಗುಪ್ತಚರ ಇಲಾಖೆ ಹೇಳಿದೆ.