35,000 ಮರಗಳ ಮಾರಣಹೋಮಕ್ಕೆ ಕೊಡಲಿ ಸಿದ್ಧ
ಸುಮಾರು 35,000 ಮರಗಳನ್ನು ಕಡಿಯುವುದರಿಂದ ಬಿಜಾಪುರ, ಗುಲ್ಬರ್ಗಾ ಹಾಗೂ ಬೀದರ್ ಜಿಲ್ಲೆಗಳ ವಾರ್ಷಿಕ ಮಳೆ ಪ್ರಮಾಣ ಸಂಪೂರ್ಣವಾಗಿ ತಗ್ಗಲಿದೆ. ಬಿಸಿಲು ಇನ್ನಷ್ಟು ಏರಲಿದೆ. ಪ್ರಾಣಿ ಮತ್ತು ಪಕ್ಷಿಗಳು ಜೀವನೋಪಾಯಕ್ಕೆ ಕುತ್ತು ಉಂಟಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ಜಿಲ್ಲೆಗಳಲ್ಲಿ ಸಾಮೂಹಿಕವಾಗಿ ಮರಗಳನ್ನು ಕಡಿಯುವುದರಿಂದ ಹವಾಮಾನದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ. ವಾರ್ಷಿಕವಾಗಿ 50 ರಿಂದ 60 ಸೆಂ.ಮೀ ಮಳೆ ದಾಖಲಿಸುವ ಈ ಪ್ರದೇಶ ಕರ್ನಾಟಕದಲ್ಲಿ ಒಣ ಹವೆಯುಳ್ಳ ಪ್ರದೇಶಗಳಲ್ಲಿ ಒಂದೆನಿಸಿದೆ. ಬರ ಪರಿಸ್ಥಿತಿಯಲ್ಲಿ ಅಳಿದುಳಿದಿರುವ ಹಸಿರು ರಾಶಿಯನ್ನು ಕಳೆದುಕೊಂಡರೆ ಮುಂದೆ ಗತಿ ಏನು. ಈಗಲೇ 45 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲಿನ ತಾಪಮಾನ ತಾಳಲಾರದೆ ಮಂದಿ ಒದ್ದಾಡುತ್ತಿದ್ದಾರೆ.
ಇನ್ನು ಮರಗಳನ್ನು ಕಡಿಯುತ್ತಾ ಹೋದರೆ ಈ ಭಾಗದಲ್ಲಿ ಜೀವಿಸುವುದು ಕಷ್ಟಕರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ದೇಶಿತ ಮರಗಳ ನಾಶದಿಂದ ಸುಮಾರು 2.16 ಹೆಕ್ಟೇರುಗಳಷ್ಟು ಸಂರಕ್ಷಿತ ಅರಣ್ಯ ಭೂಮಿ ಕಳೆದು ಕೊಳ್ಳಬೇಕಾಗುತ್ತದೆ.
ಗುಲ್ಬರ್ಗಾ ಜಿಲ್ಲೆಯೊಂದರಲ್ಲೇ 1.86 ಹೆಕ್ಟೇರು ಅರಣ್ಯ ಭೂಮಿ ನಾಶವಾಗಲಿದೆ. ಬೀದರ್ ನ 0.36 ಹೆಕ್ಟೇರು ಅರಣ್ಯ ನಾಶವಾಗಲಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಶೇ 33 ರಷ್ಟು ಅರಣ್ಯ ಭೂಮಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೊಡಲಿ ಪೆಟ್ಟು ಬೀಳಲಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(NHAI) ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಿಕಂದರಾಬಾದಿನ ವಿಟ್ಯಾ ಕನ್ಸಲ್ಟೆಂಟ್ ಪ್ರೈ.ಲಿ ಗೆ ವಹಿಸಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಬೇಕಿದ್ದು, ಸ್ಥಳೀಯರ ದೂರು ಅಹವಾಲುಗಳನ್ನು ಆಹ್ವಾನಿಸಲಾಗಿದೆ.
ಹೈದರಾಬಾದ್ ಕರ್ನಾಟಕ ಅರಣ್ಯ ಸಂರಕ್ಷಣಾ ಮತ್ತು ಜಾಗೃತಿ ಸಂಘಟನೆಯ ಮುಖ್ಯಸ್ಥ ಜಿ ದೀಪಕ್ ಅವರು ಈ ಯೋಜನೆಗೆ ಪ್ರತಿರೋಧ ವ್ಯಕ್ತಪಡಿಸಿದ್ದು, ಪರಿಸರಕ್ಕೆ ಅತಿ ಕಡಿಮೆ ಹಾನಿ ಉಂಟು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ. ಸಂರಕ್ಷಿತಾ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದು ಮರಗಳನ್ನು ಕಡಿಯುವಲ್ಲಿ ಎನ್ ಎಚ್ ಎಐ ಹಾಗೂ ವಿಟ್ಯಾ ಸಂಸ್ಥೆ ಸಫಲವಾಗುವುದು ನಿಚ್ಚಳವಾಗಿದೆ.