ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು
ದುರಂತ ಸಾವನ್ನಪ್ಪಿದ ಮಗುವನ್ನು ಪೂರ್ವಜ್ (2) ಎಂದು ಗುರುತಿಸಲಾಗಿದೆ. ಮಧ್ಯಾಹ್ಮ 12.30ರ ಸುಮಾರಿಗೆ ನೆರೆಮನೆಯ ಮಗುವಿನೊಂದಿಗೆ ಚೆಂಡಿನಾಟವಾಡುತ್ತಿದ್ದ ಪೂರ್ವಜ್ ಅಪಾರ್ಟ್ಮೆಂಟಿನ 2ನೇ ಮಹಡಿಯ ಮೇಲಿಂದ ಕೆಳಗೆಬಿದ್ದ ಚೆಂಡನ್ನು ನೋಡಲು ಬಾಲ್ಕನಿಯ ಗ್ರಿಲ್ ಮೂಲಕ ಬಾಗಿದಾಗ ಕೆಳಗೆ ಬಿದ್ದಿದ್ದಾನೆ. ಮಗು ತೂರುವಷ್ಟು ಗ್ರಿಲ್ ಅಗಲವಾಗಿದ್ದುದೇ ದುರಂತಕ್ಕೆ ಕಾರಣವಾಗಿದೆ.
ಆ ಸಂದರ್ಭದಲ್ಲಿ ಮಗುವಿನ ತಾಯಿ ಲಕ್ಷ್ಮಮ್ಮ ಮತ್ತು ಪಕ್ಕದ ಮನೆಯ ಮಹಿಳೆ ಮಾತಿನಲ್ಲಿ ಮೈಮರೆತಿದ್ದರು. ಪೂರ್ವಜ್ ಕೆಳಗೆ ಬಿದ್ದ ಸಂಗತಿಯನ್ನು ಅವನೊಂದಿಗೆ ಆಟವಾಡುತ್ತಿದ್ದ ಮಗು ತಾಯಂದಿರಿಗೆ ಹೇಳಿದೆ. ಕೂಡಲೆ ಕೆಳಗೆ ಬಂದು ಪೂರ್ವಜ್ನನ್ನು ಫೋರ್ಟಿಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೆ 3.30ರ ಸುಮಾರಿಗೆ ಪೂರ್ವಜ್ ಇಹಲೋಕವನ್ನು ತ್ಯಜಿಸಿದ್ದಾನೆ. ಹನಿವೆಲ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪೂರ್ವಜ್ ತಂದೆ ಗಿರಿಬಾಬು ಎಂಬುವವರು ಮಗು ಬಿದ್ದ ಕ್ಷಣದಲ್ಲಿ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಮಗು ಹೇಗಿದ್ದರೂ ತನ್ನಷ್ಟಕ್ಕೆ ತಾನು ಆಟವಾಡಿಕೊಂಡಿರುತ್ತದೆ ಬಿಡು ಎಂದು ನಿರ್ಲಕ್ಷ್ಯ ವಹಿಸಿದ್ದಕ್ಕೆ ಮಗುವನ್ನೇ ಕಳೆದುಕೊಂಡಂತಾಗಿದೆ.
ಬೆಂಗಳೂರಿನಲ್ಲಿ ಬಹುಸಂಖ್ಯೆಯಲ್ಲಿ ಜನತೆ ಇಂದು ಗಗನಚುಂಬಿ ಅಪಾರ್ಟ್ಮೆಂಟಿನಲ್ಲಿ ವಾಸಿಸುತ್ತಿದ್ದಾರೆ. ಕಟ್ಟಡ ನಿರ್ಮಿಸುವಾಗಲೆ ಹಲವೆಡೆಗಳಲ್ಲಿ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡಿರುತ್ತಾರಾದರೂ ಇಂಥಲ್ಲಿ ವಾಸಿಸುವ ಪಾಲಕರು ತಮ್ಮ ಮಕ್ಕಳನ್ನು ಸಾಕಷ್ಟು ಎಚ್ಚರಿಕೆಯಿಂದಲೇ ನೋಡಿಕೊಳ್ಳಬೇಕು. ಪೂರ್ವಜ್ ಪಾಲಕರು ಮಗುವನ್ನು ಕಳೆದುಕೊಂಡಿದ್ದರೂ ಆತನ ಕಣ್ಣನ್ನು ದಾನ ಮಾಡಿ, ಬೇರೆಯವರು ಪಡೆದ ದೃಷ್ಟಿಯಲ್ಲಿಯೇ ತಮ್ಮ ಮಗನನ್ನು ನೋಡಬೇಕೆಂದು ಬಯಸಿದ್ದಾರೆ.