ಲಂಚ: ಪೇದೆ ಇನ್ನೂ ನಾಪತ್ತೆ; ಇನ್ಸ್ಪೆಕ್ಟರ್ ಬಂಧನ
ತಾಜಾ ಸುದ್ದಿ: ಗುರುವಾರ ರಾಜಧಾನಿಯಲ್ಲಿ ನಡೆದಿದ್ದ 2 ವಿಚಿತ್ರ, ವಿಲಕ್ಷಣ ಅಪರಾಧಗಳ ಪೈಕಿ ಒಂದರಲ್ಲಿ ಪಿಳ್ಳಗಾನಗಳ್ಳಿಯ ಕವಿತಾ (10) ಎಂಬ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಲಾಗಿತ್ತು. ಆ ಬಾಲಕಿಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆ ಮಗು ಇಂದು ಶನಿವಾರ ಬೆಳಗ್ಗೆ ಸಾವಿಗೀಡಾಗಿದ್ದಾಳೆ.
ಇದೇ ವೇಳೆ ಅದೇ 5 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದ ಇದೇ ಠಾಣೆಯ ಇನ್ಸ್ಪೆಕ್ಟರ್ ಎಂ. ಪುರುಷೋತ್ತಮ್ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿ ಪೇದೆ ಮಂಜುನಾಥನ ಪತ್ತೆ ಕಾರ್ಯವನ್ನು ಸ್ಥಳೀಯ ಪೊಲೀಸರಿಗೆ ವಹಿಸಲಾಗಿದೆ. ಆದರೆ, ಕಾನ್ಸ್ಟೇಬಲ್ ಕುರಿತು ಸುಳಿವು ಪತ್ತೆ ಹಚ್ಚುವಲ್ಲಿ ಈವರೆಗೂ ಅವರು ಸಫಲರಾಗಿಲ್ಲ.
ಪುರುಷೋತ್ತಮ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಮಧ್ಯಾಹ್ನ ಹಾಜರುಪಡಿಸಲಾಯಿತು. ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರು ಆರೋಪಿಯನ್ನು 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪುರುಷೋತ್ತಮ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಅದಕ್ಕೂ ಮುನ್ನ, ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್ಪಿ ಅಬ್ದುಲ್ ಅಹಮದ್ ಮತ್ತು ಎನ್.ಜಿ. ಶಿವಶಂಕರ್ ನೇತೃತ್ವದ ತಂಡ ಶುಕ್ರವಾರ ಪುರುಷೋತ್ತಮ್ ಅವರನ್ನು ಕರೆತಂದು ದೀರ್ಘಕಾಲ ವಿಚಾರಣೆ ನಡೆಸಿತು. ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಚಂದ್ರಪ್ಪ ಅವರನ್ನೂ ಕರೆಸಿ ಹೇಳಿಕೆ ಪಡೆಯಿತು. ಪ್ರಕರಣದ ಕೇಂದ್ರ ಬಿಂದು, ಮೃತ ನವೀನ್ಕುಮಾರ್ ಪತ್ನಿಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಯಿತು.
ಪ್ರಕರಣವೇನು?: ಏನಾಗಿತ್ತೆಂದರೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನವೀನ್ ಕುಮಾರ್ ಎಂಬುವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬಾಬು ಎಂಬುವರನ್ನು ವಿಚಾರಣೆಗಾಗಿ ಕರೆತಂದಿದ್ದ ಪೊಲೀಸರು ಐದು ದಿನಗಳಾದರೂ ಅವರನ್ನು ಬಿಡುಗಡೆ ಮಾಡಿರುವುದಿಲ್ಲ. ಬಂಧನವನ್ನೂ ಖಚಿತಪಡಿಸಿರಲಿಲ್ಲ.
ಬಾಬು ಅವರನ್ನು ಬಿಡುಗಡೆ ಮಾಡಲು ಠಾಣೆಯ ಇನ್ಸ್ಪೆಕ್ಟರ್ ಪುರುಷೋತ್ತಮ್ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಡಾ. ಗಿರೀಶ್ ಎಂಬುವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಬೆಳಿಗ್ಗೆಯಷ್ಟೇ ದೂರು ನೀಡಿರುತ್ತಾರೆ.
ಗುರುವಾರ ಸಂಜೆ ಡಾ. ಗಿರೀಶ್ ಐದು ಲಕ್ಷ ರೂಪಾಯಿ ನಗದು ಸಮೇತ ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿದ್ದರು. ಅವರ ಹಿಂದೆಯೇ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ತೆರಳಿದ್ದರು. ಆಗಲೇ ಮಂಜುನಾಥ್ ಎಂಬ ಕಾನ್ಸ್ಟೇಬಲ್ ಬೈಕಿನಲ್ಲಿ ಬಂದು ಐದು ಲಕ್ಷ ರೂಪಾಯಿ ಕಿತ್ತುಕೊಂಡು ಪರಾರಿಯಾದ ಪ್ರಹಸನ ನಡೆಯುವುದು.