ರೆಡ್ಡಿಗೆ ಬಳ್ಳಾರಿ ಜೈಲು: ಕೋರ್ಟ್ ತಥಾಸ್ತು ಅನ್ನುತ್ತದಾ?
ಗಣಿ ಗುರುತು ನಾಶ ಮಾಡಿ, ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ವಿಚಾರಣೆ ಮುಗಿಯುವವರೆಗೆ ಜನಾರ್ದನ ರೆಡ್ಡಿಯವರನ್ನು ಬಳ್ಳಾರಿ ಜೈಲಿನಲ್ಲಿರಿಸಿ ವಿಚಾರಣೆ ನಡೆಸಬೇಕು ಎಂದು ರೆಡ್ಡಿ ಪರವಾಗಿ ವಾದಿಸಿದ ಎಸ್ ವಿ ಸುಬ್ಬಾರೆಡ್ಡಿ 'ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಇಲ್ಲಿಗಂಟ ತಮ್ಮ ಕಕ್ಷಿದಾರ ಪ್ರಯಾಣ ಮಾಡುವುದು, ಭದ್ರತೆ, ದೇಹಾರೋಗ್ಯ ಇತ್ಯಾದಿಯ ನೆಪವೊಡ್ಡಿ' ನಿನ್ನೆ JMFC ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಅಂಗೀಕರಿಸಿದ ನ್ಯಾ. ಶಿವಾನಂದ ಮಾರುತಿ ಜಪಾರೆ ಅವರು ಸೆ. 20ರೊಳಗೆ ತಕರಾರು ಅರ್ಜಿ ಸಲ್ಲಿಸುವಂತೆ ಸರಕಾರಿ ಅಭಿಯೋಜಕ ಕೆ. ಶರಣಬಸಪ್ಪ ಅವರಿಗೆ ಸೂಚಿಸಿದ್ದಾರೆ.
ಜತೆಗೆ, ವಿಚಾರಣೆಯ ವೇಳೆ ಖುದ್ದಯ ಜನಾರ್ದನ ರೆಡ್ಡಿಯೇ 'ಶೀಘ್ರವೇ ಪ್ರಕರಣ ಇತ್ಯರ್ಥಗೊಳಸಿಬೇಕು. ನನ್ನನ್ನು ವಿಚಾರಣೆಗೆ ಕರೆತರಲು ಪೊಲೀಸ್ ಬಂದೋಬಸ್ತ್ ಮಾಡುವುರಿಂದ ಸಾರ್ವಜನಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಮಾನ್ಯ ನ್ಯಾಯಾಲಯ ನನ್ನಿಂದ ಜನರಿಗಾಗುವ ತೊಂದರೆ ತಪ್ಪಿಸಬೇಕು' ಎಂದು ನ್ಯಾಯಾಧೀಶರಿಗೆ ಮೊರೆಹೋದರು.
ರೆಡ್ಡಿಗೆ ಕೋರ್ಟ್ ತಥಾಸ್ತು ಅನ್ನುತ್ತದಾ?: ಹೇಗೂ ಮೂರು ಜೈಲುಗಳ ವಾಸ್ತವ್ಯ ಕಂಡಿರುವ ಜನಾರ್ದನ ರೆಡ್ಡಿ ಮೂರನೆಯದಕ್ಕೆ ಮುಕ್ತಾಯವಾಗಲಿ ಎಂದು ತವರು ಜೈಲನ್ನೇ ಆಯ್ಕೆ ಮಾಡಿಕೊಂಡಿರುವುದು ಸೂಕ್ತವಾಗಿದೆ. ಬಹುಶಃ ರೆಡ್ಡಿ ಬಳ್ಳಾರಿ ಜೈಲಿನಲ್ಲಿ ಉಳಿಯುವುದಕ್ಕೆ ಕೋರ್ಟ್ ತಥಾಸ್ತು ಅನ್ನಲೂಬಹುದು. ಅದಕ್ಕೂ ಮುನ್ನ ಬೆಂಗಳೂರು ಸಿಬಿಐ ತಂಡದ ತನಿಖಾ ವೈಖರಿಯನ್ನು ಗಮನಿಸಿದಾಗ...
ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ A1 ಜನಾರ್ದನ ರೆಡ್ಡಿಯನ್ನು ಹೈದರಾಬಾದಿನ ಚಂಚಲಗೂಡ ಜೈಲಿನಿಂದ ಕರೆತಂದು ಪರಪ್ಪನ ಅಗ್ರಹಾರದಲ್ಲಿ ಕೂಡಿಹಾಕಿದ ಬೆಂಗಳೂರು ಸಿಬಿಐ ತನಿಖೆಯಲ್ಲಿ ಮಹತ್ವದ ಪ್ರಗತಿಯನ್ನೇನು ಸಾಧಿಸಿಲ್ಲ.
ಖುದ್ದು ಜನಾರ್ದನ ರೆಡ್ಡಿಯೇ ಇದನ್ನು ಸಂಡೂರು ಕೋರ್ಟಿನ ಗಮನಕ್ಕೆ ತಂದಿದ್ದಾರೆ. ಅವರೇನು ಪ್ರಕರಣದಲ್ಲಿ ನನ್ನ ವಿಚಾರಣೆ ಮಾಡುತ್ತಿಲ್ಲ. ಸಿಬಿಐ ಕೋರ್ಟಿನಲ್ಲಿ ನನ್ನ ವಿರುದ್ಧ ಯಾವುದೇ ತಕರಾರೂ ಸಲ್ಲಿಸುತ್ತಿಲ್ಲ. ಇನ್ನೂ ದೋಷಾರೋಪ ಪಟ್ಟಿಯೂ ದಾಖಲಿಸಿಲ್ಲ. ಇನ್ನು ವಿಚಾರಣೆ ನಡೆಸುವುದು ಯಾವ ಕಾಲಕ್ಕೋ. ಅಲ್ಲಿವರೆಗೂ ಪರಪ್ಪನ ಅಗ್ರಹಾರದಲ್ಲಿರುವುದಕ್ಕಿಂತ ನನ್ನದೇ ಅಗ್ರಹಾರದಲ್ಲಿರಲು ನನಗೆ ಅವಕಾಶ ಕೊಡಿ' ಎಂಬ ಧಾಟಿಯಲ್ಲಿ ಕೋರ್ಟಿಗೆ ಮೊರೆ ಹೋಗಿದ್ದಾರೆ.
ಇದು ನಿಜವೂ ಹೌದು. ಏಕೆಂದರೆ ಸಂಡೂರು ಕೋರ್ಟ್ ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಶರಣಬಸಪ್ಪ ಅವರು ತಕರಾರು ಅರ್ಜಿ ಸಲ್ಲಿಸುವಾಗ ಬೆಂಗಳೂರು ಸಿಬಿಐನ ಅಭಿಪ್ರಾಯವನ್ನು ಕೇಳಲೇಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ, ಜಡತ್ವವನ್ನೇ ಹಾಸುಹೊದ್ದಿರುವ ಬೆಂಗಳೂರು ಸಿಬಿಐನವರು 'ರೆಡ್ಡಿಯನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯಲು ನಮ್ಮದೇನೂ ಅಭ್ಯಂತರವಿಲ್ಲ' ಅಂದುಬಿಟ್ಟರೆ ಮುಗೀತು.
ಮೊನ್ನೆಯಷ್ಟೇ ರಾಷ್ಟ್ರಪತಿ ಪದಕ ಗಿಟ್ಟಿಸಿರುವ ಬೆಂಗಳೂರು ಸಿಬಿಐನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಮುಖಸ್ಥರಾಗಿರುವ ಡಿಐಜಿ ಆರ್ ಹಿತೇಂದ್ರ ಅವರು ಇನ್ನೂ ಒಂದು high profile ಕೇಸಿನಲ್ಲೂ ಹೀಗೇ ಜಡತ್ವ ತೋರಿದ್ದಾರೆ. ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಸುಮ್ಮನೆ ರಗಳೆ ಮಾಡಿಕೊಂಡಿದ್ದಾರೆಯೇ ಹೊರತು ಪ್ರಗತಿ ಅಂಥೇನೂ ಸಾಧಿಸಿಲ್ಲ. ಹೈದರಾಬಾದಿನ ಸಿಬಿಐ ಲಕ್ಷ್ಮಿನಾರಾಯಣಗೆ ಇರುವ ಚಾಕಚಕ್ಯತೆ ಇವರಿಗಿಲ್ಲವಾಗಿದೆ.
ಇದನ್ನು ಮನಗಂಡೇ ರೆಡ್ಡಿಗಾರು ಬಳ್ಳಾರಿ ಜೈಲಿನಲ್ಲೇ ಇರಲು ಬಿಡಿ ಎಂದಿರುವುದ. ಎಷ್ಟೇ ಆಗಲಿ ಅವರಿಗದು homely feeling ಕೊಡುವ ಸ್ಥಳ. ಅಲ್ಲಿನ್ನೂ ಅವರ ಅಧಿಕಾರವಾಣಿ ನಡೆಯುತ್ತದೆ ಎಂಬುದಕ್ಕೆ ಬಳ್ಳಾರಿ ಜೈಲಿನ ಅಧೀಕ್ಷ ಆನಂದ ರೆಡ್ಡಿ ನಡೆದುಕೊಂಡ ರೀತಿ ಸಾಕ್ಷಿಯಾಗಿದೆ. ಸೋ, ಮುಂದೆ ಬಳ್ಳಾರಿ ಜೈಲಿನಲ್ಲಿದ್ದರೆ 'ಅಲ್ಲಿದೆ ನಮ್ಮನೆ, ಇಲ್ಲಿರುವೆ ಸುಮ್ನೆ' ಎಂದು ಸ್ವಾತಂತ್ರ್ಯ ಅನುಭವಿಸಬಹುದು ಎಂಬುದು ರೆಡ್ಡಿಯ ಲೆಕ್ಕಾಚಾರವಾಗಿರಬಹುದು.
ಎಲ್ಲವೂ ರೆಡ್ಡಿ ಅಂದುಕೊಂಡತೆ ನಡೆದರೆ ಸೆ. 20ರ ನಂತರ ಆತ ಬಳ್ಳಾರಿ ಜೈಲಿನಲ್ಲಿರುವುದಕ್ಕೆ ಏನೂ ಅಡ್ಡಿಯಿಲ್ಲ ಅನ್ನಬಹುದು.