ಕೋಟಾ ಕೆಟರಾಕ್ಟ್ ದುರಂತ: 1ಸಾವು, 7ಮಂದಿಗೆ ದೃಷ್ಟಿನಾಶ
ಆಗಸ್ಟ್ 1ರಿಂದ 3 ರ ಮಧ್ಯೆ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ ವೇಳೆ ಕಲುಷಿತಗೊಂಡಿದ್ದ ದ್ರಾವಣ ಬಳಿಸಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
CNSL Eye Hospital ನಲ್ಲಿ ಒಟ್ಟು 38 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರಲ್ಲಿ 7 ಮಂದಿಗೆ ಸೋಂಕು ತಗುಲಿತು. ಇನ್ನು, ಐರೊಡಿ ಗ್ರಾಮದ ನರಸಿಂಹ ಶೆಟ್ಟಿ (72) ಎಂಬುವವರು ಆಗಸ್ಟ್ 2ರಂದು ಸಾವನ್ನಪ್ಪಿದ್ದಾರೆ.
ಹೃದಯಾಘಾತಕ್ಕೆ ತುತ್ತಾದ ಇವರನ್ನು ತಕ್ಷಣ ಮಣಿಪಾಲದಲ್ಲಿ ಕಸ್ತೂರ್ ಬಾ ಆಸ್ಪತ್ರೆಗೆ ಸೇರಿಸಲಾಗಿ, ಅಲ್ಲಿ ಮೃತಪಟ್ಟರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ ತಿಳಿಸಿದ್ದಾರೆ.
ದೃಷ್ಟಿ ಕಳೆದುಕೊಂಡವರ ವಿವರ: ಗಿಳಿಯಾರು ಗ್ರಾಮದ ಶಿವರಾಂ ಜೋಗಿ (60), ಸಾಲಿಗ್ರಾಮದ ಗಿರಿಜಾ (50), ಬ್ರಹ್ಮಾವರ ಹೆರೂರಿನ ಪಂಜು ಪೂಜಾರಿ (68), ಕುಂದಾಪುರದ ಸೀತಾ ಬಿ ಪೂಜಾರಿ (52), ಅಂಪಾರದ ಮಂಜುನಾಥ ಉಡುಪ (75), ಕೋಟೇಶ್ವರದ ನರಸ ಪೂಜಾರಿ (62) ಮತ್ತು ನರಸಿಂಗ ಶೆಟ್ಟಿ. ಇವರೆಲ್ಲ ಬಡ ಕುಟುಂಬಗಳಿಂದ ಬಂದವರು ಎನ್ನಲಾಗಿದೆ.
'ಇವರಿಗೆಲ್ಲಾ ತುರ್ತು ಚಿಕಿತ್ಸೆ ನಿಡಲಾಗುತ್ತಿದೆ. ಆದರೆ ದೃಷ್ಟಿ ಮರಳಿ ಬರುವ ಸಾಧ್ಯತೆ ತುಂಬ ಕಡಿಮೆ. CNSL Eye Hospitalನಲ್ಲಿ ಕೆಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಎಲ್ಲರಿಗೂ ಹೀಗಾಗಿದೆ ಎನ್ನುವ ಹಾಗಿಲ್ಲ.
ಮೆದುಳಿಗೆ ಸೋಂಕು ತಲುಪುವುದನ್ನು ತಡೆಗಟ್ಟಲು ಕಣ್ಣುಗುಡ್ಡೆ ಮೇಲಿನ ನಿರ್ಜೀವ ಅಂಗಾಂಶವನ್ನು ತೆಗೆಯಲು ಈ ದ್ರಾವಣ ಬಳಸಲಾಗಿತ್ತು. ಯಾರೆಲ್ಲ ಕಲುಷಿತ ದ್ರಾವಣ ಬಳಿಸಿದ್ದಾರೋ ಅವರಿಗೆ ದೃಷ್ಟಿ ಹೋಗಿದೆ' ಎಂದು ಡಾ. ಬಾಯಾರಿ ಹೇಳಿದ್ದಾರೆ.
'ಒಬ್ಬರ ಸಾವು ಮತ್ತು 7 ಮಂದಿಯ ದೃಷ್ಟಿ ನಾಶಕ್ಕೆ ಕಾರಣವಾಗಿರುವ ಕಲುಷಿತ ದ್ರಾವಣವನ್ನು ಇಂದು (ಆಗಸ್ಟ್ 17) ಹೆಚ್ಚಿನ ಪರೀಕ್ಷೆ ಮತ್ತು ತನಿಖೆಗಾಗಿ ಕಳಿಸಲಾಗುವುದು. ಇಡೀ CNSL Eye Hospitalಯನ್ನು ಪರಿವೀಕ್ಷಿಸಲಾಗುವುದು. ವರದಿಯ ಆಧಾರದ ಮೇಲೆ ತಪ್ಪಿತಸ್ಥರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಎಂ ಟಿ ರೇಜು ಹೇಳಿದ್ದಾರೆ.