ವಿಚ್ಛೇದಿತರಲ್ಲಿ ಮಗು ಅಮ್ಮನ ಬಳಿಯೇ ಏಕೆ ಇರ್ಬೇಕು?
ಬೆಂಗಳೂರು ಮೂಲದ CRISP (Children's Rights Initiative for Shared Parenting) ಸ್ಥಾಪಕ ಅಧ್ಯಕ್ಷ ಕುಮಾರ್ ವಿ ಜಹಗೀರ್ ದಾರ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಉದ್ದೇಶಿತ ವೈವಾಹಿಕ ತಿದ್ದುಪಡಿ ಮಸೂದೆಗೆ ನಮ್ಮ ವಿರೋಧವಿದೆ. ಇದು ವಿವಾಹಿತ ಪುರುಷ ಹಾಗೂ ಸ್ತ್ರೀ ನಡುವೆ ಕದಂಕ ಮೂಡಿಸುವುದಲ್ಲದೆ, ಸಮಾನತೆಗೆ ಭಂಗ ತರುತ್ತದೆ. ಇದನ್ನು ವಿರೋಧಿಸಿ ನಮ್ಮ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ವೈವಾಹಿಕ ತಿದ್ದುಪಡಿ ಮಸೂದೆ (Marriage Law (Amendment Bill2010) ) ಮಂಡನೆಯಾಗಲಿದೆ. ಈ ಮಸೂದೆ ಜಾರಿಗೊಂಡರೆ ಮದುವೆ ನಂತರ ಪತಿ ಹೊಂದಿರುವ ಸ್ವಯಾರ್ಜಿತ ಆಸ್ತಿ ಬಹುಪಾಲು ಎಲ್ಲವೂ ಪತ್ನಿಯ ಪಾಲಾಗಲಿದೆ.
ಆದರೆ, CRISP ಆಕ್ಷೇಪ ಇಲ್ಲಿಗೆ ನಿಲ್ಲುವುದಿಲ್ಲ. ಮಕ್ಕಳ ಪಾಲನೆ ಪೋಷಣೆ ಮಾಡಲು ತಾಯಿಗೆ ಸೂಕ್ತ ಎಂಬ ಪೂರ್ವಾಗ್ರಹ ಹೊಂದಿದೆ. ಈ ಮೂಲಕ ಮಕ್ಕಳ ಪಾಲನೆ ಹಾಗೂ ತಂದೆ ತನ್ನ ಮಕ್ಕಳನ್ನು ವೀಕ್ಷಿಸಲು ನಿರ್ಬಂಧ ಹೇರುತ್ತದೆ.
ಮಹಿಳಾ ಕೇಂದ್ರಿತ ಮಸೂದೆ ಇದಾಗಿದ್ದು, ವಿವಾಹ ವಿಚ್ಛೇದನದ ನಂತರ ಪುರುಷ ತನ್ನ ಸ್ವಯಾರ್ಜಿತ ಆಸ್ತಿ ಅಲ್ಲದೆ ಮಕ್ಕಳ ಪೋಷಣೆಯ ಹೊಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ತಂದೆ ಇಲ್ಲದೆ ಮಕ್ಕಳನ್ನು ಎಲ್ಲಾ ಹೆಣ್ಣು ಮಕ್ಕಳು ಬೆಳೆಸಬಲ್ಲರು ಎಂಬ ಪೂರ್ವಾಗ್ರಹ ಸಿದ್ಧಾಂತಕ್ಕೆ ನಮ್ಮ ವಿರೋಧವಿದೆ ಎಂದು ಜಹಗೀರದಾರ್ ಹೇಳಿದ್ದಾರೆ.
ಸುಮಾರು 2,500 ಸದಸ್ಯರನ್ನು ಹೊಂದಿರುವ CRISP ಸಂಸ್ಥೆ ವಿಚ್ಛೇದನದ ಸಂದರ್ಭದಲ್ಲಿ ಮಕ್ಕಳ ಪಾಲನೆ ಪೋಷಣೆ ಹೊಣೆಯನ್ನು ಜಂಟಿಯಾಗಿ ಅಪ್ಪ ಅಮ್ಮ ಇಬ್ಬರಿಗೂ ನೀಡುವುದು ಸೂಕ್ತ ಎಂದು ಸಂಸ್ಥೆ ಆಗ್ರಹಿಸಿದೆ.