ಕಾಳಿಕಾ ಮಠದ ಶ್ರೀಗಳನ್ನು 'ರೌಡಿ'ಯೆಂದರೆ ನಿತ್ಯಾನಂದ?
ನನ್ನ ಮತ್ತು ಹಿರಿಯ ಅಧೀನಂ ಪೀಠದ ಅರುಣಗಿರಿನಾಥರ ನಡುವೆ ಯಾವುದೇ ಮನಸ್ತಾಪವಿಲ್ಲ. ಇದೆಲ್ಲಾ ಮಾಧ್ಯಮಗಳ ಊಹಾಪೋಹಗಳು. ನಮ್ಮಿಬ್ಬರ ಭಕ್ತರ ನಡುವೆ ಯಾವುದೇ ಜಟಾಪಟಿಯಾಗಿಲ್ಲ. ನಾನು ಮತ್ತೆ ಶೀಘ್ರದಲ್ಲೇ ಮದುರೈ ಪೀಠಕ್ಕೆ ತೆರಳುತ್ತೇನೆ. ಅರುಣಗಿರಿನಾಥ ಸ್ವಾಮಿಗಳ ನಡುವೆ ಮಾತುಕತೆ ನಡೆಸುವೆ. ಇದು ಮಠದ ಹೊರಗೆ ಕುಳಿತಿರುವ ಬೇರೆ ಊರಿನಿಂದ ಬಂದ ಕೆಲ ರೌಡಿಗಳ ಕೆಲಸವೆಂದು ಸ್ವಾಮಿ ನಿತ್ಯಾನಂದ ಹೇಳಿಕೆ ನೀಡಿದ್ದಾರೆ.
ನನ್ನ ಮೇಲೆ ಆರೋಪಿಸಲಾಗಿರುವ ಎಲ್ಲಾ ಕೇಸ್ ಗಳಿಂದ ನಾನು ಮುಕ್ತನಾಗುತ್ತೇನೆ. ಈ ಎಲ್ಲಾ ಕೇಸ್ ಗಳಲ್ಲಿ ಯಾವುದೇ ಹುರುಳಿಲ್ಲ, ಇದೆಲ್ಲಾ ಸಾಕ್ಷಿ ತಿರುಚಿದ ಕೇಸ್ ಗಳು. ನನ್ನ ನೇಪಾಳ ಪ್ರವಾಸ ಉತ್ತಮವಾಗಿತ್ತು. ಈಗ ನಾನು ತಿರುವಣ್ಣಾಮಲೈ ಮಠಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಮದುರೈ ಅಧೀನಂ ಮಠಕ್ಕೆ ತೆರಳುತ್ತೇನೆ ಎಂದು ನಿತ್ಯಾನಂದ ವಿಮಾನನಿಲ್ದಾಣದಲ್ಲಿ ಹೇಳಿಕೆ ನೀಡಿದ್ದಾರೆ.
ಅರುಣಗಿರಿನಾಥ ಮತ್ತು ನಿತ್ಯಾನಂದರ ನಡುವಣ ಭಿನ್ನಾಭಿಪ್ರಾಯ ಶಮನಕ್ಕೆ ಇಬ್ಬರೂ ಸ್ವಾಮಿಜಿಗಳ ನಡುವೆ ಮಾತುಕತೆ ನಡೆಸಲು ಕಾಳಿಕಾ ಮಠದ ಯೋಗೇಶ್ವರ ಖುಷಿಕುಮಾರ ಶ್ರೀಗಳು ಮದುರೈ ಅಧೀನಂ ಪೀಠಕ್ಕೆ ತೆರಳಿದ್ದರು. ಆದರೆ ನಿತ್ಯಾನಂದನ ಭಕ್ತರು ಕಾಳಿ ಮಠದ ಶ್ರೀಗಳನ್ನು ಮಠದ ಒಳಗೆ ಪ್ರವೇಶ ನೀಡಲು ನಿರಾಕರಿಸಿದ್ದರು.
ಇದರಿಂದ ಕುಪಿತಗೊಂಡ ಕಾಳಿಕಾ ಶ್ರೀಗಳು ಮಠದ ಹೊರಭಾಗದಲ್ಲೇ ಶಿವಲಿಂಗ ಪೂಜೆ ಮಾಡಿ ಪ್ರತಿಭಟನೆ ನಡೆಸಿದರು. ಮದುರೈಯ ಪತ್ರಕರ್ತರು ಅರುಣಗಿರಿನಾಥ ಅವರನ್ನು ಸಂಪರ್ಕಿಸಿದಾಗ ತಾವು ಕಾಳಿಕಾ ಸ್ವಾಮೀಜಿಯನ್ನು ಆಹ್ವಾನಿಸಿರುವುದನ್ನು ದೃಢ ಪಡಿಸಿದ್ದಾರೆ. ನಿತ್ಯಾನಂದ ಶಿಷ್ಯರು ಕಾಳಿಕಾ ಶ್ರೀಗಳನ್ನು ಭೇಟಿ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಶೈವ ಪಂಥಕ್ಕೆ ಸೇರಿದವನಾದ ನಾನು ಪೀಠದ ಮುಖ್ಯಸ್ಥ ಅರುಣಗಿರಿನಾಥ ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ನಿತ್ಯಾನಂದ ಪೀಠಾಧಿಪತಿಯಾಗಿ ನೇಮಕಗೊಂಡ ನಂತರ ಇಲ್ಲಿ ಹಲವು ಸಮಸ್ಯೆಗಳಿವೆ ಎಂದು ಗೊತ್ತಾಗಿದೆ. ವಿವಾದ ಬಗೆಹರಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಮಠದೊಳಗೆ ಪ್ರವೇಶಿಸಲು ಅನುಮತಿ ನೀಡಲೇ ಬೇಕೆಂದು ಖುಷಿಕುಮಾರ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಕಾಳಿಕಾ ಮಠದ ಖುಷಿಕುಮಾರ ಶ್ರೀಗಳ ಜೊತೆ ಕರ್ನಾಟಕ ನವ ನಿರ್ಮಾಣ ಸೇನೆ ಮತ್ತು ಇತರ ಹಿಂದೂ ಸಂಘಟನೆಯ ಮುಖಂಡರೂ ತೆರಳಿದ್ದರು.