ಮಂಗಳೂರು ಹೋಂಸ್ಟೇ ದಾಳಿ ಸಿಐಡಿ ತನಿಖೆಗೆ?
ವಿದ್ಯಾರ್ಥಿಗಳು ನಡೆಸುತ್ತಿದ್ದ ಬರ್ತ್ ಡೇ ಪಾರ್ಟಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿ ಅಲ್ಲಿದ್ದ ಯುವತಿಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣದ ಬಗ್ಗೆ ಈಗಾಗಲೇ ರಾಜ್ಯ ಮಹಿಳಾ ಆಯೋಗದ ವರದಿ ಪಡೆಯಲಾಗಿದೆ. ವಿದ್ಯಾರ್ಥಿಗಳ, ಮಹಿಳೆಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ಪರ ವಕೀಲರು ಕೋರ್ಟಿನಲ್ಲಿ ಹೇಳಿದರು.
ವಕೀಲ ವಾಸುದೇವ್ ಮಂಗಳೂರಿನ ಹೋಂ ಸ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗುರುವಾರ(ಆ.16) ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ವಿಕ್ರಂ ಜೀತ್ ಸೇನ್ ಅವರ ಪೀಠಕ್ಕೆ ಹೋಂ ಸ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖಾ ವರದಿಯನ್ನು ಸಲ್ಲಿಸಿತು.
ಈ ವೇಳೆ ಮಾತನಾಡಿದ ಸರ್ಕಾರಿ ಪರ ವಕೀಲರು, ಮಂಗಳೂರಿನ ಹೋಂ ಸ್ಟೇನಲ್ಲಿ ನಡೆದ ಯುವತಿಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಪೊಲೀಸ್ ಗಿರಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿರುದ್ಧ ಕಠಣ ಕ್ರಮ ಕೈಗೊಳ್ಳಲಿದೆ. ಅಗತ್ಯ ಬಿದ್ದರೆ ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ಸಿದ್ದವಿದೆ ಎಂದು ವಿವರ ನೀಡಿದರು.
ಅಲ್ಲದೆ ಈ ಪ್ರಕರಣದಲ್ಲಿ ಇಬ್ಬರು ಮಾಧ್ಯಮದವರು ಸೇರಿದಂತೆ 22 ಮಂದಿಯನ್ನು ಬಂಧಿಸಲಾಗಿದೆ. ತಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಬಳಿಕ ಪೀಠ ಈ ಪ್ರಕರಣದ ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿತು.
ಈ ಹಿಂದೆ ರೇವ್ ಪಾರ್ಟಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಂಗಳೂರು ಸಮೀಪ ಇರುವ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ-ಯುವತಿಯರ ಮೇಲೆ ಹಲ್ಲೆ ನಡೆಸಿದ್ದರು.
ಸಿಐಡಿ ಬೇಡ ಸಿಬಿಐಗೆ ವಹಿಸಿ: ಜು.28ರಂದು ಹಿಂದೂ ಸಂಘಟನೆಗಳ ಕಾರ್ಯಕರ್ತರ ದಾಳಿಗೆ ತುತ್ತಾದ ವಿದ್ಯಾರ್ಥಿಗಳು ಸಿಐಡಿ ತನಿಖೆ ಬದಲಿಗೆ ಸಿಬಿಐ ತನಿಖೆಗೆ ಒಪ್ಪಿಸಿ ಎಂದಿದ್ದಾರೆ. ನಾವು ಮದ್ಯಪಾನ ಮಾತ್ರ ಮಾಡುತ್ತಿದ್ದೆವು. ಆದರೆ, ಡ್ರಗ್ಸ್ ಹಾಗೂ ಇತರೆ ಅನೈತಿಕ ಚಟುವಟಿಕೆಗಳು ನಡೆದಿಲ್ಲ. ಪಡಿಲ್ ನ ಹೋಂಸ್ಟೇ ಲೈಸನ್ಸ್ ಬಗ್ಗೆ ನಮಗೆ ಗೊತ್ತಿಲ್ಲ.
ಗೆಳೆಯನೊಬ್ಬನ ಮುಖಾಂತರ ನಮಗೆ ಈ ಹೋಂಸ್ಟೇ ಸಂಪರ್ಕ ಸಿಕ್ಕಿತ್ತು ಎಂದು ವಿದ್ಯಾರ್ಥಿಗಳ ಪೈಕಿ ಕಾಮತ್ ಎಂಬುವರು ಹೇಳಿದ್ದಾರೆ. ಸ್ಥಳೀಯ ಪೊಲೀಸರು ಅಥವಾ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆಯಿದೆ. ಮಹಿಳಾ ಆಯೋಗ ನೀಡಿರುವ ವರದಿಯಲ್ಲಿ ಒದೆ ತಿಂದವರ ಮೇಲೆ ಗೂಬೆ ಕೂರಿಸಲಾಗಿದೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಮೀನಾ ಶಫೀಕ್ ಅವರು ಗುರುವಾರ(ಆ.16) ಮಂಗಳೂರಿಗೆ ಭೇಟಿ ನೀಡಿದ್ದರು. ಘಟನೆ ನಡೆದ ಹೋಂಸ್ಟೇಗೆ ಭೇಟಿ ನೀಡಿದ್ದಲ್ಲದೆ, ವಿದ್ಯಾರ್ಥಿಗಳನ್ನು, ಸ್ಥಳೀಯರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದರು. ಸಿ ಮಂಜುಳಾ ನೇತೃತ್ವದ ರಾಜ್ಯ ಮಹಿಳಾ ಆಯೋಗ ಸಲ್ಲಿಸಿರುವ ವರದಿ ತಲುಪಿದೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ಶಫೀಕ್ ಹೇಳಿದರು.