ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಬಾಲಕಿ ಕವಿತಾ ಸಾವು

By Srinath
|
Google Oneindia Kannada News

kavitha succumbed to burn injuries bangalore
ಬೆಂಗಳೂರು, ಆ. 18: ಗುರುವಾರ ರಾಜಧಾನಿಯಲ್ಲಿ ನಡೆದಿದ್ದ 2 ವಿಚಿತ್ರ, ವಿಲಕ್ಷಣ ಅಪರಾಧಗಳ ಪೈಕಿ ಒಂದರಲ್ಲಿ ಪಿಳ್ಳಗಾನಗಳ್ಳಿಯ ಕವಿತಾ (10) ಎಂಬ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಲಾಗಿತ್ತು. ಆ ಬಾಲಕಿಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆ ಮಗು ಇಂದು ಶನಿವಾರ ಬೆಳಗ್ಗೆ ಸಾವಿಗೀಡಾಗಿದ್ದಾಳೆ.

ಶುಕ್ರವಾರ ಪ್ರಕಟವಾದ ಸುದ್ದಿ: ಕರ್ನಾಟಕದ ರಾಜಧಾನಿ ಅಪರಾಧಗಳಿಗೂ ರಾಜಧಾನಿಯಾಗುತ್ತಿದೆಯಾ ಎಂಬ ಆತಂಕ ಮನೆ ಮಾಡುತ್ತಿದೆ. ಈ ಆಗಸ್ಟ್ ತಿಂಗಳಂತೂ ಈಗಾಗಲೇ ಅತ್ಯಧಿಕ ಅಪರಾಧಗಳನ್ನು ಕಂಡ ಮಾಸವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಇದಕ್ಕೆ ನಿನ್ನೆ ಮತ್ತೆರಡು ಸೇರ್ಪಡೆಯಾಗಿವೆ. ಎರಡೂ ವಿಚಿತ್ರ ಮತ್ತು ವಿಲಕ್ಷಣವಾಗಿವೆ.

ಬನ್ನೇರುಘಟ್ಟ ಸಮೀಪ ಗೊಟ್ಟಿಗೆರೆಯಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಪಿಳ್ಳಗಾನಗಳ್ಳಿಯಲ್ಲಿ ಕವಿತಾ (10) ಎಂಬ ಬಾಲಕಿಯ ಮೇಲೆ ಗುರುವಾರ ಬೆಳಗ್ಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವುದು. ಕ್ಯಾಬ್ ಚಾಲಕ ವೆಂಕಟೇಶ್ ಅವರ ಮಗಳು ಕವಿತಾ ವೀವರ್ಸ್‌ ಕಾಲನಿಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ.

ಕವಿತಾ ಎಂದಿನಂತೆ ತನ್ನ ತಂಗಿ ಕಾವ್ಯಾಳೊಂದಿಗೆ ಶಾಲೆಗೆ ತೆರಳುತ್ತಿದ್ದಳು. ಮಾರ್ಗ ಮಧ್ಯೆ, ಕಲ್ಲು ಬಂಡೆಗಳ ಸಮೀಪ ಬಂದಾಗ ಕವಿತಾ, ಕಾವ್ಯಾಳನ್ನು ಮುಂದೆ ಹೋಗುವಂತೆ ಹೇಳಿ, ತಾನು ಬಹಿರ್ದೆಸೆಗೆ ಹೋಗಿದ್ದಾಳೆ. ಈ ವೇಳೆ ಸ್ಥಳದಲ್ಲಿ ಹೊಂಚು ಹಾಕುತ್ತಿದ್ದ ಮೂವರು ಮಂದಿ ಮುಸುಕುಧಾರಿಗಳು, ಏಕಾಏಕಿ ಕವಿತಾಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಇದನ್ನು ಕೇಳಿದ ದಾರಿಹೋಕನೊಬ್ಬ ಧಾವಿಸಿದಾಗ ಚರ್ಮವೆಲ್ಲ ಸುಟ್ಟ ಸ್ಥಿತಿಯಲ್ಲಿ ಕವಿತಾ ಕಂಡು ಬಂದಿದ್ದು, ಸಮೀಪದಲ್ಲೇ ಸೀಮೆಎಣ್ಣೆ ಡಬ್ಬ, ಬೆಂಕಿ ಪೊಟ್ಟಣ ಕಂಡು ಬಂದಿದೆ. ಮೂವರು ಮುಸುಕುಧಾರಿಗಳು ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾದರೆಂದು ಕವಿತಾ ತಿಳಿಸಿದ್ದಾಳೆ.

ಹುಳಿಮಾವು ಠಾಣೆಯ ನೂತನ ಇನ್‌ಸ್ಪೆಕ್ಟರ್‌ ಮೋಹನ್‌ ಅವರು ತನಿಖೆ ಆರಂಭಿಸಿದ್ದು, ಶ್ರೀನಿವಾಸ್, ಹರೀಶ್ ಮತ್ತು ಪುಟ್ಟರಾಜು ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೂವರೂ ಈ ಹಿಂದೆ ಬಾಲಕಿಯ ತಂದೆ ವೆಂಕಟೇಶ್ ಜತೆಗೆ ಜಗಳವಾಡಿದ್ದರು. ದ್ವೇಷದಿಂದ ದುಷ್ಕೃತ್ಯ ಎಸಗಿರುವ ಶಂಕೆ ಇದೆ ಎಂದು ಇನ್‌ಸ್ಪೆಕ್ಟರ್‌ ಸುರೇಶ್ ತಿಳಿಸಿದ್ದಾರೆ.

ಮತ್ತೊಂದರಲ್ಲಿ, ಲೋಕಾಯುಕ್ತ ಪೊಲೀಸರ ವಾಸನೆ ಬಡಿದು ಇನ್‌ಸ್ಪೆಕ್ಟರ್‌ ಮಹಾಶಯನೊಬ್ಬ ಲಂಚ ಪಡೆಯಲು ಹಿಂದೇಟು ಹಾಕುತ್ತಾನೆ. ಆದರೆ ಆತನ ಶಿಷ್ಯಪೇದೆ ಅದ್ಯಾವೊದೂ ಮಾಯದಲ್ಲಿ ಬರೋಬ್ಬರಿ 5 ಲಕ್ಷ ರೂಪಾಯಿ ಲಂಚದ ಗಂಟನ್ನು ಅಕ್ಷರಶಃ ಕಳ್ಳನಂತೆ ಕಸಿದು ಪರಾರಿಯಾಗುತ್ತಾನೆ.

ಘಟನೆಗೆ ಸಾಕ್ಷಿಯಾದ ಲೋಕಾಯುಕ್ತ ಪೊಲೀಸರೇ ಅರೆ ಕ್ಷಣ ದಂಗುಬಡಿಯುತ್ತಾರೆ. ಜತೆಗೆ ಅವರಿಗೆ, ಆರೆಂಟು ತಿಂಗಳ ಹಿಂದೆ ಪಕ್ಕದ ಸರಹದ್ದಿನ ಠಾಣೆಯ ಇನ್‌ಸ್ಪೆಕ್ಟರ್‌ ರತ್ನಾಕರ ಶೆಟ್ಟಿ ಸಾಹೇಬರು ಇದೇ ರೀತಿ ಲೋಕಾಯುಕ್ತ ಪೊಲೀಸರನ್ನು ಕಂಡೊಡನೆ ಪೇರಿ ಕಿತ್ತಿದ್ದು ಜ್ಞಾಪಕಕ್ಕೆ ಬಂದಿರಲೂಬಹುದು.

Interesting ಅಂದರೆ ಆ ಇನ್‌ಸ್ಪೆಕ್ಟರ್‌ ಮಹಾಶಯ ಅದಾಗಲೇ 2 ಲಕ್ಷ ರೂ. ಲಂಚ ಪಡೆದಿರುತ್ತಾನೆ. ಮತ್ತು ಮತ್ತೆ 5 ಲಕ್ಷ ರೂ. ಗೆ ಕೈಯೊಡ್ಡಿರುತ್ತಾನೆ. ಲೋಕಾಯುಕ್ತ ಪೊಲೀಸರು ಈಗ ಇನ್‌ಸ್ಪೆಕ್ಟರ್‌ ಮತ್ತು ಕಾನ್‌ಸ್ಟೇಬಲ್ ವಿರುದ್ಧ ಭ್ರಷ್ಟಾಚಾರದ ಜತೆಗೆ ದರೋಡೆ ಕೇಸನ್ನೂ ಜಡಿದಿದ್ದಾರೆ.

ಏನಾಗಿತ್ತೆಂದರೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನವೀನ್‌ ಕುಮಾರ್ ಎಂಬುವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬಾಬು ಎಂಬುವರನ್ನು ವಿಚಾರಣೆಗಾಗಿ ಕರೆತಂದಿದ್ದ ಪೊಲೀಸರು ಐದು ದಿನಗಳಾದರೂ ಅವರನ್ನು ಬಿಡುಗಡೆ ಮಾಡಿರುವುದಿಲ್ಲ. ಬಂಧನವನ್ನೂ ಖಚಿತಪಡಿಸಿರಲಿಲ್ಲ. ಬಾಬು ಅವರನ್ನು ಬಿಡುಗಡೆ ಮಾಡಲು ಠಾಣೆಯ ಇನ್‌ಸ್ಪೆಕ್ಟರ್ ಪುರುಷೋತ್ತಮ್ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಡಾ. ಗಿರೀಶ್ ಎಂಬುವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಬೆಳಿಗ್ಗೆಯಷ್ಟೇ ದೂರು ನೀಡಿರುತ್ತಾರೆ.

ಗುರುವಾರ ಸಂಜೆ ಡಾ. ಗಿರೀಶ್ ಐದು ಲಕ್ಷ ರೂಪಾಯಿ ನಗದು ಸಮೇತ ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿದ್ದರು. ಅವರ ಹಿಂದೆಯೇ ಬೆಂಗಳೂರು ನಗರ ಲೋಕಾಯುಕ್ತ ಡಿವೈ.ಎಸ್‌ಪಿಗಳಾದ ಅಬ್ದುಲ್ ಅಹದ್, ಎಸ್.ಗಿರೀಶ್, ಇನ್‌ಸ್ಪೆಕ್ಟರ್ ಶಿವಶಂಕರ್ ಮತ್ತು ಕೆ. ಅಂಜನ್‌ಕುಮಾರ್ ತೆರಳಿದ್ದರು. ಆಗಲೇ ಮಂಜುನಾಥ್ ಎಂಬ ಕಾನ್‌ಸ್ಟೇಬಲ್ ಬೈಕಿನಲ್ಲಿ ಬಂದು ಐದು ಲಕ್ಷ ರೂಪಾಯಿ ಕಿತ್ತುಕೊಂಡು ಪರಾರಿಯಾದ ಪ್ರಹಸನ ನಡೆಯುವುದು.

ಲೋಕಾಯುಕ್ತ ಪೊಲೀಸರ ತಂಡ ಆತನನ್ನು ಬೆಂಬತ್ತಿದ್ದರೂ ಹಿಡಿಯಲು ಸಾಧ್ಯವಾಗಿಲ್ಲ. ಬಳಿಕ ಠಾಣೆಯಲ್ಲಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು ಬಾಬುನನ್ನು ಲಾಕಪ್‌ನಲ್ಲಿ ಇಟ್ಟಿರುವುದು ಪತ್ತೆ ಹಚ್ಚಿದ್ದಾರೆ. ಗಮನಾರ್ಹವೆಂದರೆ, ಬಾಬುನನ್ನು ವಶಕ್ಕೆ ಪಡೆದಿರುವ ಕುರಿತು ಪೊಲೀಸರು ಠಾಣೆಯ ದಿನಚರಿ ಪುಸ್ತಕದಲ್ಲಿ ನಮೂದಿಸಿಲ್ಲ.

English summary
Bangalore Kothanur police constable snaches Rs 5 lakh bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X