ಸೊರಬ ಕುಮಾರನ ವಿರುದ್ಧವೇ ನಿಂತರೂ ಗೆಲ್ಲುವೆ: ಮಧು
ಅಂದರೆ 'ಸೊರಬದಲ್ಲಿ ನನ್ನ ವಿರುದ್ಧ ಕುಮಾರ ಬಂಗಾರಪ್ಪ ಸೇರಿದಂತೆ ಯಾರೇ ನಿಂತರೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ಬರುವುದು ನಾನೇ' ಎಂದು ಮಧು ಬಂಗಾರಪ್ಪ ಅವರು ಚುನಾವಣೆ ಪೂರ್ವ ಭವಿಷ್ಯ ಹೇಳಿದ್ದಾರೆ.
ಸೊರಬದಲ್ಲಿ ಜೆಡಿಎಸ್ ಬಂಡಾಯದ ನಡುವೆಯೂ ತಮ್ಮ ಆಯ್ಕೆ ಬಗ್ಗೆ ತುಂಬು ವಿಶ್ವಾಸ ವ್ಯಕ್ತಪಡಿಸಿರುವ ಮಧು ಬಂಗಾರಪ್ಪ ಅವರು, ತಮ್ಮ ವಿರುದ್ಧ ಹಿರಿಯ ಸೋದರ ಕುಮಾರ ಬಂಗಾರಪ್ಪ ಸ್ಪರ್ಧಿಸಿದರೆ ಅದನ್ನು ಕುಟುಂಬ ರಾಜಕಾರಣವನ್ನಾಗಿ ಪರಿಗಣಿಸಬಾರದು.
ಅದು ಪಕ್ಷಗಳ ನಡುವಿನ ಸ್ಪರ್ಧೆಯಾಗಬೇಕು. ಮತದಾರರು ಪ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದು, ಮುಂಬರುವ ಚುನಾವಣೆಯಲ್ಲಿ (ಜೆಡಿಎಸ್) ಪಕ್ಷವು ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಸೊರಬ ತಾಲೂಕಿನಲ್ಲಿ ಬರಗಾಲ ತಾಂಡವವಾಡುತ್ತಿದೆ. ಅದನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರಕಾರ ಸ್ಪಂದಿಸಿಲ್ಲ ಎಂದು ಮಧು ಇದೇ ವೇಳೆ ದೂರಿದರು.
ಬಿಜೆಪಿ ಸರಕಾರವು ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಯಾವೊಂದು ಭರವಸೆಯನ್ನೂ ಸಹ ಈಡೇರಿಸಿಲ್ಲ. ಸ್ವಾರ್ಥ ರಾಜಕಾರಣ ಮಾಡುತ್ತ ಸಾಗಿದೆ. ಈಗ ಬಿಜೆಪಿಯಲ್ಲಿ ಅನೇಕ ಬಣಗಳು ಸೃಷ್ಟಿಯಾಗಿವೆ. ಇದರಿಂದ ಬಿಜೆಪಿಯ ಈ ಬಣಗಳೇ ವಿರೋಧ ಪಕ್ಷಗಳ ಕಾರ್ಯ ನಿರ್ವಹಿಸುತ್ತಿವೆ' ಎಂದು ಮಧು ಕುಟುಕಿದರು.
ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಅವರು ಕೈಗೊಂಡ ಗ್ರಾಮ ವಾಸ್ತವ್ಯ, ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ರೈತರ ಸಾಲ ಮನ್ನಾ, ಭಾಗ್ಯಲಕ್ಷ್ಮಿ ಬಾಂಡ್ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜನ ಮರೆತಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ಗೆ ಒಳ್ಳೆಯ ಭವಿಷ್ಯವಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಬಲಿಷ್ಠಗೊಳಿಸಲಾಗುತ್ತಿದೆ ಎಂದು ಮಧು ಹೇಳಿದರು.