ಅನ್ಯಧರ್ಮ ಪ್ರೇಮ ವಿವಾಹ, ಕೊಲೆಯಲ್ಲಿ ಅಂತ್ಯ
ಮನೆಯವರ ಒಪ್ಪಿಗೆ ಇಲ್ಲದ ಪ್ರೀತಿಸಿದ ಹುಡುಗಿಯ ಕೈ ಹಿಡಿದಿದ್ದ ಲೋಳಸೂರ ಗ್ರಾಮದ ಕುರುಬ ಜನಾಂಗದ ವಿಠ್ಠಲ ಗಂಗಪ್ಪಾ ಕುರಿ (26) ಮತ್ತು ನೇತ್ರಾ (20) ಅವರನ್ನು ಯುವತಿಯ ಮನೆ ಕಡೆಯವರು ಬರ್ಬರವಾಗಿ ಕೊಲೆಗೈದಿದ್ದಾರೆ.
ಪಿಯುಸಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನೇತ್ರಾಳನ್ನು ವರ್ಷದ ಹಿಂದೆ ವಿಠಲ ಪ್ರೀತಿಸಿ ಮದುವೆಯಾಗಿದ್ದ. ಮರಾಠಾ ಸಮಾಜದ ಬಾಗಾಯಿ ಮನೆತನದ ಹುಡುಗಿ, ಕುರುಬ ಜನಾಂಗದ ಹುಡುಗನನ್ನು ಪ್ರೀತಿಸಿದ್ದು, ಬಾಗಾಯಿ ಕುಟುಂಬದವರನ್ನು ಕೆರಳಿಸಿತ್ತು.
ಹಿರಿಯರ ಮಧ್ಯಸ್ಥಿಕೆಯಿಂದ ಇತ್ತೀಚೆಗೆ ಮತ್ತೆ ಗ್ರಾಮಕ್ಕೆ ಆಗಮಿಸಿದ್ದ ದಂಪತಿ ಗೊಂಬಿಗುಡಿ ಹತ್ತಿರದ ಗೋಡಖಿಂಡಿ ಚಾಳದಲ್ಲಿ ಸಂಸಾರ ಹೂಡಿದ್ದರು. ಎಸ್ಪಿ ಸಂದೀಪ್ ಪಾಟೀಲ್ ಕೂಡಾ ಎರಡು ಕಡೆ ಕುಟುಂಬಕ್ಕೆ ಬುದ್ಧಿವಾದ ಹೇಳಿದ್ದರು. ನಂತರ ದಂಪತಿಗೆ 8 ತಿಂಗಳ ಹೆಣ್ಣು ಮಗು ಕೂಡ ಜನಿಸಿತ್ತು. ಮಗುವಿಗೆ ವಿನಂತಿ ಎಂಬ ಹೆಸರಿಟ್ಟಿದ್ದರು.
ಬಾಗಾಯಿ ಕುಟುಂಬ ಮಾತ್ರ ವರ್ಷದಿಂದ ಪ್ರತಿಕಾರದ ಜ್ವಾಲೆಯಲ್ಲೇ ಬೇಯುತ್ತಿತ್ತು. ಸೋಮವಾರ ಇಬ್ಬರನ್ನೂ ಹತ್ಯೆ ಮಾಡಿ ರಕ್ತದೋಕುಳಿಯಲ್ಲಿ ಮಿಂದೆದ್ದಿದ್ದಾರೆ.
ಮೃತನ ತಂದೆ ಲಕ್ಷ್ಮಣ ಗಂಗಪ್ಪ ಕುರಿ ಅವರು ಯುವತಿಯ ತಂದೆ ಜ್ಯೋತೆಪ್ಪ ಕಲ್ಲಪ್ಪ ಬಾಗಾಯಿ ಹಾಗೂ ಅವರ ಕುಟುಂಬದ ವಿರುದ್ಧ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆ ನಡೆದ 12 ಗಂಟೆಗಳೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.
ಮೊದಲಿಗೆ ನೇತ್ರಾ ಅವರ ಕಸಿನ್ಸ್ ವಿಠಲ್ ಬಾಗಾಯ್ ಹಾಗೂ ಯಮನಪ್ಪ ನೇತ್ರಾ ಅವರ ಮನೆಗೆ ನುಗ್ಗಿದ್ದಾರೆ. ನಮ್ಮ ಸಮಾಜದ ಗೌರವ ಕಳೆದು ಬಿಟ್ಟೆ. ನಿನಗೆ ತಕ್ಕ ಶಾಸ್ತಿ ಕಾದಿದೆ ಎಂದು ಬೆದರಿಸಿದ್ದಾರೆ. ನಂತರ ಆಕೆ ತಂದೆ ಹಾಗೂ ಇತರೆ ಸಂಗಡಿಗರು ಬಂದು ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ.
ಮಣ್ಣಿಗೂ ಬರಲಿಲ್ಲ: ಏನೇ ದ್ವೇಷ ಇದ್ದರೂ ಸಾವಿನ ಸಂದರ್ಭದಲ್ಲಿ ಒಂದು ಗಳಿಗೆ ಬಂದು ನೋಡುವುದು ವಾಡಿಕೆ. ಆದರೆ, ಮಂಗಳವಾರ ಅಂತಿಮ ಸಂಸ್ಕಾರಕ್ಕೆ ನೇತ್ರಾ ಮನೆ ಕಡೆಯವರು ಯಾರೂ ಬಂದಿರಲಿಲ್ಲ. ವಿಠಲನ ತಾಯಿ ಕುರುಮವ್ವ ಅವರ ರೋದನ ಮುಗಿಲು ಮುಟ್ಟಿತ್ತು.