ಮಂಗಳೂರು ದಾಳಿಯ ವಿರುದ್ಧ ದನಿಯೆತ್ತಿದ ಯುಆರ್ಎ
ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಹಿಂದೂ ಜಾಗರಣ ಸಮಿತಿಯ ಕಾರ್ಯಕರ್ತರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯವಕ, ಯುವತಿಯರ ಮೇಲೆ ಜುಲೈ 28ರ ಸಂಜೆ ಆದ ದಾಳಿಗೆ ಕುರಿತಂತೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಪ್ರಪ್ರಥಮ ಬಾರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದಾನೊಂದು ಕಾಲದಲ್ಲಿ ಮಂಗಳೂರು ಅತ್ಯಂತ ಸುರಕ್ಷಿತ ನಗರವಾಗಿತ್ತು. ಚಿಕ್ಕವನಾಗಿದ್ದಾಗ ಅಲ್ಲಿ ಹೋಗುವುದೇ ಸಂತೋಷದ ವಿಷಯವಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ, ಮಂಗಳೂರಿನ ಚಿತ್ರಣವೂ ಬದಲಾಗಿದೆ. ಮಂಗಳೂರಿನಲ್ಲಿ ಮೇಲಿಂದ ಮೇಲೆ ಯುವಜನತೆಯ ಮೇಲೆ ದಾಳಿಗಳಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ, ಹಿಂದೂ ಸಂಸ್ಕೃತಿಯ ನಿಜವಾದ ಪ್ರತಿನಿಧಿಯಂತಿರುವ ಸಾಹಿತಿ ವೈದೇಹಿ ವಿರುದ್ಧವೇ ದಾಳಿ ಮಾಡಲಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಮಂಗಳೂರು ದಾಳಿಯ ಕುರಿತಂತೆ ದಾಳಿಗೊಳಗಾದ ಕುಟುಂಬದವರ ಆಕ್ಷೇಪವಿಲ್ಲದಿದ್ದರೆ ಮಾತ್ರ ಮಹಿಳಾ ಆಯೋಗ ಮತ್ತು ಸಾರ್ವಜನಿಕರು ಮೂಗು ತೂರಿಸಬೇಕು. ಈಗ ಆಗಿರುವುದೇನೆಂದರೆ, ತಮಗೆ ಹೇಗೆ ಬೇಕೋ ಅವರವರು ಹಾಗೆ ಹೇಳಿಕೆ ನೀಡುತ್ತಿದ್ದಾರೆ. ಈಗ ಆಗುತ್ತಿರುವ ವಿದ್ಯಮಾನ ಏನು ಸೂಚಿಸುತ್ತದೆಂದರೆ, ಈ ಘಟನೆಯ ವಿರುದ್ಧ ದನಿ ಎತ್ತಲು ದಾಳಿಗೊಳಗಾದವರ ಕುಟುಂಬಕ್ಕೆ ಆಸಕ್ತಿಯಿಲ್ಲ, ಅಥವಾ ಈ ಘಟನೆಯ ಹಿಂದೆ ಏನೋ ಅಜೆಂಡಾ ಇದ್ದಹಾಗಿದೆ ಎಂದು ಅವರು ನುಡಿದಿದ್ದಾರೆ.
ಇಂದಿನ ಕಾಲದಲ್ಲಿ ಮಹಿಳೆ ಒಂದು ದಿನ ಜೀನ್ಸ್ ತೊಡಲು ಮರುದಿನ ಸೀರೆ ತೊಡಲು ಎಲ್ಲ ಸ್ವಾತಂತ್ರ್ಯ ಹೊಂದಿದ್ದಾಳೆ. ಜೀನ್ಸ್ ಮತ್ತು ಸೀರೆ ಸಂಸ್ಕೃತಿಗಳು ಒಟ್ಟಾಗಿ ಸಾಗುತ್ತಿವೆ. ಮಂಗಳೂರಿನಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಲು ಕೂಡ ಯವಕ, ಯುವತಿಯರಿಗೆ ಎಲ್ಲ ಹಕ್ಕಿದೆ. ತಮಗೆ ಹೇಗೆ ಬೇಕೋ ಹಾಗೆ ಜೀವನ ಸಾಗಿಸಲು ಅವರಿಗೆ ಎಲ್ಲ ಹಕ್ಕಿದೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಮೂರ್ತಿಗಳು ಖಾರವಾದ ಮಾತುಗಳನ್ನಾಡಿದ್ದಾರೆ.
ಶಾಲೆ, ಕಾಲೇಜಿಗೆ ಹೋಗುವ ಮಕ್ಕಳು ಕೂಡ ತಮ್ಮದಲ್ಲದ ಜಾತಿ ಮತ್ತು ಧರ್ಮದವರ ಜೊತೆ ಗೆಳೆತನ ಬೆಳೆಸುತ್ತಿದ್ದಾರೆ. ಇದು ಧನಾತ್ಮಕ ಬೆಳವಣಿಗೆ. ಆದರೆ, ಇದನ್ನು ವಿರೋಧಿಸುತ್ತಿರುವ ಉಗ್ರರು ಭಾರತವನ್ನು ತಾಲೀಬಾನೀಕರಣ ಮಾಡಲು ಹೊರಟಿದ್ದಾರೆ. ಇದು ನಮ್ಮ ತಾಳ್ಮೆ ಮತ್ತು ಭಾವೈಕ್ಯತೆಯ ಮೇಲೆ ಆಗುತ್ತಿರುವ ದಬ್ಬಾಳಿಕೆ ಎಂದು ಅನಂತಮೂರ್ತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.