ಮೊಯ್ಲಿಗೆ 1500MW ಶಾಕ್ ಕೊಟ್ಟ ಶೋಭಾ
ವಿದ್ಯುತ್ ಪೂರೈಕೆ ಮಿತಿಯ ಬಗ್ಗೆ ಅರಿವಿಲ್ಲದೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಮಾತನಾಡಿದ್ದಾರೆ. 1500 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿರುವುದು ಹಸಿ ಸುಳ್ಳು ಎಂದು ಶೋಭಾ ಅವರು ಹೇಳಿದರು.
'ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಒಂದು ವಾರದೊಳಗೆ ಕೇಂದ್ರದಿಂದ 1500 ಮೆಗಾವಾಟ್ ವಿದ್ಯುತ್ ಪೂರೈಸಲು ಸಿದ್ಧ ಎಂದು ನಗರದ 'ಯವನಿಕಾ' ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಕೇಂದ್ರದ ಇಂಧನ ಹಾಗೂ ಕಂಪೆನಿ ವ್ಯವಹಾರಗಳ ಸಚಿವ ವೀರಪ್ಪ ಮೊಯ್ಲಿ ಭರವಸೆ ನೀಡಿದ್ದರು.
ವಿದ್ಯುತ್ ವಿತರಣೆ ರಾಜ್ಯ ಸರಕಾರದ ಜವಾಬ್ದಾರಿ. ಅದನ್ನು ಸಮರ್ಪಕವಾಗಿ ಪೂರೈಸುವಂತೆ ನೋಡಿಕೊಳ್ಳಬೇಕು. ಲಿಂಗನಮಕ್ಕಿಯಿಂದ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆದಿದ್ದರೆ ಶೇ.90ರಷ್ಟು ವಿದ್ಯುತ್ ಸಮಸ್ಯೆ ಪರಿಹಾರವಾಗುತ್ತಿತ್ತು ರಾಜ್ಯದ ವಿದ್ಯುತ್ ಪ್ರಸರಣ ನಿಗಮಗಳ ಜೊತೆ ಸಭೆ ನಡೆಸಲು ಮುಂದಾಗಿದ್ದೇನೆ ಎಂದು ಮೊಯ್ಲಿ ಹೇಳಿದ್ದರು.
ವಿದ್ಯುತ್ ಪೂರೈಕೆ ಮಾಡುವ ಕಾರಿಡಾರ್ ನ ಮಿತಿ ಬಗ್ಗೆ ಕೇಂದ್ರ ಇಂಧನ ಸಚಿವರಿಗೆ ಗೊತ್ತಿಲ್ಲ ಎಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಇಂಧನ ಸಮಸ್ಯೆ ಬಗೆಹರಿಸಲು ಸಹಕರಿಸುವ ಬದಲು ಈ ರೀತಿ ಹಾಸ್ಯಾಸ್ಪದ ಹೇಳಿಕೆ ನೀಡುವುದು ಅವರಿಗೆ ಥರವಲ್ಲ.
ಉತ್ತರ ಭಾರತ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವಾಗ ರಾಜ್ಯಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಪೂರೈಕೆ ಮಾಡಲು ಹೇಗೆ ಸಾಧ್ಯ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಉತ್ತರ ಭಾರತದಿಂದ ವಿದ್ಯುತ್ ಒದಗಿಸಲು ಇರುವ ಕಾರಿಡಾರ್ ನ ಗಾತ್ರ ತೀರಾ ಸಣ್ಣದಾಗಿದೆ.
ಆದರೆ, ಇರುವ ಕಾರಿಡಾರ್ ಮೂಲಕ ಕೇವಲ 750 ಮೆಗಾವ್ಯಾಟ್ ವಿದ್ಯುತ್ ನ್ನು ಮಾತ್ರ ಪೂರೈಸಬಹುದು. ವೀರಪ್ಪ ಮೊಯ್ಲಿ ಅವರು ಕರ್ನಾಟಕಕ್ಕೆ 1500 ಮೆಗಾವ್ಯಾಟ್ ವಿದ್ಯುತ್ ಪೂರೈಸಿದರೆ ನನಗಂತೂ ತುಂಬಾ ಖುಷಿಯಾಗುತ್ತದೆ. ಆದರೆ, ವಾಸ್ತವದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ.
ಮೊದಲು ವಿದ್ಯುತ್ ಪೂರೈಕೆಗೆ ಅಗತ್ಯವಾದ ಕಾರಿಡಾರ್ ನಿರ್ಮಾಣವಾಗಬೇಕು. ಆನಂತರ ಹೆಚ್ಚುವರಿಯಾಗಿ 1500 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಸಾಧ್ಯತೆ ಬಗ್ಗೆ ಯೋಚಿಸಬಹುದು ಎಂದು ಶೋಭಾ ಹೇಳಿದರು.
ಬಿಎಚ್ ಇಎಲ್ ಗೆ ದಂಡ: ಸರ್ಕಾರಿ ಸ್ವಾಮ್ಯದ ಬಿಎಚ್ ಇಎಲ್ ಸಂಸ್ಥೆ ಕರ್ನಾಟಕ ಸರ್ಕಾರ 250 ಕೋಟಿ ರು ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ. ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಕೆ ಕಳಪೆ ವಿದ್ಯುತ್ ಉತ್ಪಾದಕ ಯಂತ್ರಗಳನ್ನು ಪೂರೈಸಿದ ಆರೋಪ ಬಿಎಚ್ ಇಎಲ್ ಮೇಲೆ ಹೊರೆಸಲಾಗಿದೆ ಎಂದು ಸಚಿವೆ ಶೋಭಾ ಹೇಳಿದರು.
ಆರ್ ಟಿಪಿಎಸ್ ನ 8 ಘಟಕಗಳಿಗೆ ಯತ್ರೋಪಕರಣ ಪೂರೈಕೆ ಮಾಡುವ ಹೊಣೆಯನ್ನು ಬಿಎಚ್ ಇಎಲ್ ಒಪ್ಪಿಕೊಂಡಿತ್ತು. ಆದರೆ, ಕಳಪೆ ಯಂತ್ರಗಳು ಪದೇ ಪದೇ ಕೆಟ್ಟು ಹೋಗುತ್ತಿದ್ದು, ರಿಪೇರಿ ಮಾಡಲು ವಿಳಂಬವಾಗುತ್ತಿದೆ. ವಿದ್ಯುತ್ ಸರಬರಾಜು ವ್ಯತ್ಯಯದಿಂದ ಉಂಟಾಗಿರುವ ನಷ್ಟವನ್ನು ಸಹಾ ಬಿಎಚ್ ಇಎಲ್ ಭರಿಸುವಂತೆ ಕೇಳುವುದಾಗಿ ಶೋಭಾ ಹೇಳಿದರು.