ಐಎಎಸ್ ಶ್ರೀಲಕ್ಷ್ಮಿಗೆ ಮತ್ತೆ ಜಾಮೀನು ನಿರಾಕರಣೆ
ಇದರೊಂದಿಗೆ ಜನಾ ರೆಡ್ಡಿ ಸೇರಿದಂತೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಯಾರೊಬ್ಬರಿಗೂ ಇದುವರೆಗೂ ಜಾಮೀನು ದೊರೆತಿಲ್ಲ. ಎಲ್ಲರೂ ಜೈಲು ಬಂಧಿಯಾಗಿದ್ದುಕೊಂಡೇ ಈ ಬಾರಿ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕಾಗಿದೆ.
'ಆರೋಪಿಯು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಅವರನ್ನು ಹೊರಗೆ ಬಿಟ್ಟರೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸುತ್ತಾರೆ. ಇದರಿಂದ ಪ್ರಕರಣದ ತನಿಖೆಗೆ ಧಕ್ಕೆಯಾಗುತ್ತದೆ' ಎಂದು ಸಿಬಿಐ ಪರ ನ್ಯಾಯವಾದಿಯು ಪ್ರತಿ ವಾದ ಮಂಡಿಸಿದ್ದರಿಂದ ಐಎಎಸ್ ಶ್ರೀಲಕ್ಷ್ಮಿ ಅವರ ಜಾಮೀನು ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ಸಹ ಶ್ರೀಲಕ್ಷ್ಮಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಶ್ರೀಲಕ್ಷ್ಮಿಗೆ ಜೈಲು ವೈರಾಗ್ಯ, ಮಕ್ಕಳೂ ಬೇಡವಾಗಿದ್ದಾರೆ: ಎಂಟು ತಿಂಗಳಿನಿಂದ ಚಂಚಲಗೂಡ ಜೈಲಿನಲ್ಲಿರುವ ಐಎಎಸ್ ಶ್ರೀಲಕ್ಷ್ಮಿ ಅವರನ್ನು ವೈರಾಗ್ಯ ಆವರಿಸಿದೆ. ಅವರು ತಮ್ಮ ಪತಿ ಐಪಿಎಸ್ ಅಧಿಕಾರಿ ಗೋಪಿಕೃಷ್ಣ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿ ಮಾಡಿಲ್ಲ.
ತಮ್ಮ ಪುತ್ರಿಯರನ್ನೂ ಭೇಟಿ ಮಾಡಲು ಅವರು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ ವಿಐಪಿಗಳು ಜೈಲುಪಾಲಾಗುತ್ತಿದ್ದಂತೆ ಗಣ್ಯ ವ್ಯಕ್ತಿಗಳ ದಂಡು ಜೈಲಿಗೆ ದೌಡಾಯಿಸುತ್ತದೆ. ಆದರೆ ಶ್ರೀಲಕ್ಷ್ಮಿ ಯಾರನ್ನೂ ಭೇಟಿಯಾಗಲು ಇಚ್ಛಿಸುತ್ತಿಲ್ಲ.
ಜತೆಗೆ, ಸಾದಾ ಜೈಲು ಕೊಠಡಿಯಲ್ಲೇ ಇದ್ದಾರೆ. ಸಾಯಂಕಾಲ ತಪ್ಪದೆ ವಾಕಿಂಗ್ ಮಾಡುತ್ತಿದ್ದಾರೆ. ದಿನಪತ್ರಿಕೆಗಳು, ಆಧ್ಯಾತ್ಮಿಕ ಪುಸ್ತಕಗಳನ್ನು ತಿರುವಿಹಾಕುತ್ತಿದ್ದಾರೆ. ದೇವರ ಪ್ರಾರ್ಥನೆಯಲ್ಲೂ ದಿನದೂಡುತ್ತಿದ್ದಾರೆ. ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರ ಡಿಸೆಂಬರ್ 1ರಂದು ಐಎಎಸ್ ಶ್ರೀಲಕ್ಷ್ಮಿ ಅವರನ್ನು ಸಿಬಿಐ ಲಕ್ಷ್ಮಿನಾರಾಯಣ ಬಂಧಿಸಿದ್ದರು.