ವಿದ್ಯಾರ್ಥಿ ಬಸ್ ಪಾಸ್ ದರದಲ್ಲಿ ಭಾರೀ ಇಳಿಕೆ
ಇದರ ಲಾಭ 14.65 ಲಕ್ಷ ವಿದ್ಯಾರ್ಥಿಗಳಿಗೆ ಆಗಲಿದೆ. ಪಾಸ್ ದರವನ್ನು ಇಳಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಭಾನುವಾರದ ದಿನದಂದು ಕೂಡ ವಿದ್ಯಾರ್ಥಿ ಬಸ್ ಪಾಸ್ ಬಳಸಲು ಅನುವು ಮಾಡಿಕೊಡಲಾಗಿದೆ. ಇನ್ನು ಮುಂದೆ ರಜಾ ದಿನಗಳಂದು ಕೂಡ ವಿದ್ಯಾರ್ಥಿಗಳು ಬಸ್ ಪಾಸ್ ಬಳಸಬಹುದಾಗಿದೆ.
ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. ದಿನನಿತ್ಯ ಬಳಸುವ ಆಹಾರಧಾನ್ಯಗಳ ಬೆಲೆಗಳು ಕೂಡ ಗಗನಕ್ಕೇರಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಪಾಸ್ ದರವನ್ನು ಇಳಿಸಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿತು ಎಂದು ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಆರ್ ಅಶೋಕ್ ಹೇಳಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 20 ಕೋಟಿ ರು. ಹೊರೆ ಬೀಳಲಿದೆ ಎಂದು ಅವರು ನುಡಿದರು.
ಈ ದರ ಇಳಿತದಿಂದಾಗಿ ಶಾಲಾ ವಿದ್ಯಾರ್ಥಿನಿಯರ ಬಸ್ ಪಾಸ್ (10 ತಿಂಗಳು) ದರ 525 ರು.ನಿಂದ 400 ರು.ಗೆ ಇಳಿಯಲಿದೆ. ವಿದ್ಯಾರ್ಥಿಗಳ ಬಸ್ ಪಾಸ್ ದರ 700 ರು.ನಿಂದ 600 ರು.ಗೆ ಇಳಿದಿದೆ. ಬೆಂಗಳೂರಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅದೇ ಪಾಸ್ ಬಳಸಿ ಪುಷ್ಪಕ್ನಲ್ಲಿ ಸಂಚರಿಸಬಹುದಾದರೂ ಎಸಿ ಬಸ್ ಬಳಸುವಂತಿಲ್ಲ.
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬಸ್ ಪಾಸ್ ದರ 1,320 ರು.ನಿಂದ 1,100 ರು.ಗೆ ಇಳಿಯಲಿದೆ. ಸಂಜೆ ಕಾಲೇಜುಗಳ ವಿದ್ಯಾರ್ಥಿಗಳ ಬಸ್ ಪಾಸ್ ದರ 1,680 ರು.ನಿಂದ 1,480 ರು.ಗೆ ಇಳಿಯಲಿದೆ. ಹಾಗೆಯೆ, ಐಐಟಿ, ಡಿಪ್ಲೋಮಾ ಮತ್ತು ಬಿಎಡ್ ವಿದ್ಯಾರ್ಥಿಗಳ ಬಸ್ ಪಾಸ್ ದರ 1,350 ರು.ನಿಂದ 1,150 ರು.ಗೆ ತಗ್ಗಲಿದೆ.
ನಾಲ್ಕು ಸರಕಾರಿ ಮಾಲಿಕತ್ವದ ಸಾರಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿಗಳಿಗೆ ಶೇ.10ರಷ್ಟು ವೇತನವನ್ನು ಪರಿಷ್ಕರಿಸಲಾಗಿದ್ದರೂ, ಬಸ್ ಪ್ರಯಾಣ ದರವನ್ನು ಏರಿಸುವ ಉದ್ದೇಶವನ್ನು ಅಶೋಕ್ ತಳ್ಳಿಹಾಕಿದರು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ದರ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು. ವಿದ್ಯಾರ್ಥಿಗಳಿಗೆ ವಾಹನ ಕಲಿಕಾ ಲೈಸೆನ್ಸ್ ನೀಡಲು ಕಾಲೇಜು ಆವರಣದಲ್ಲಿಯೇ ಕ್ಯಾಂಪ್ ನಡೆಸಲಾಗುವುದು ಎಂದೂ ಅವರು ತಿಳಿಸಿದರು.