ಅನೈತಿಕ ಸಂಬಂಧ ಶಂಕೆ, ಗೃಹಿಣಿ ಕೊರಳು ಕುಯ್ದು ಕೊಲೆ
ಆಂಧ್ರಪ್ರದೇಶದ ಕದ್ರಿ ಮೂಲದ ಮಮತಾ (25) ಕೊಲೆಯಾದ ದುರ್ದೈವಿ. ಬೇಗೂರು ಬಳಿಯ ವಿಶ್ವಪ್ರಿಯ ಬಡಾವಣೆಯ ಮಮತಾ ಅವರ ಕೊಲೆ ನಡೆದಾಗ ಆಕೆ ಪತಿ ಮನೆಯಲ್ಲಿರಲಿಲ್ಲ. ತರಕಾರಿ ಅಂಗಡಿ ಇಟ್ಟುಕೊಂಡಿರುವ ಮೃತಳ ಗಂಡ ಅಂಜನಾ ರೆಡ್ಡಿ, ಎಂದಿನಂತೆ ಮುಂಜಾನೆ ಅಂಗಡಿಗೆ ತರಕಾರಿ ತರಲು ಮಡಿವಾಳ ಮಾರ್ಕೆಟ್ಗೆ ಹೋಗಿದ್ದಾರೆ.
ಅಂಜನಾ ರೆಡ್ಡಿ ಮನೆಗೆ ಮರಳಿ ಬಂದಾಗ ಹೆಂಡತಿಯ ಶವ ಅಡುಗೆ ಮನೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿದ್ದು, ಕೊರಳನ್ನು ಕುಯ್ಯಲಾಗಿತ್ತು. ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಮಹಿಳೆಯನ್ನು ಚಾಕುವಿನಿಂದ ಕುಯ್ಯುವ ಮೊದಲೇ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದೆಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಶಂಕಿಸಿದ್ದಾರೆ.
ನಾಲ್ಕೂವರೆ ವರ್ಷದ ಹಿಂದೆ ಬಾಗೇಪಲ್ಲಿ ಮೂಲದ ಅಂಜನಾರೆಡ್ಡಿ ಅವರನ್ನು ಮಮತಾ ಮದುವೆಯಾಗಿದ್ದರು. ಮಮತಾ ಹಾಗೂ ಅಂಜನಾ ರೆಡ್ಡಿ ದಂಪತಿಗೆ ಒಬ್ಬ ಗಂಡು ಮಗು ಹಾಗೂ ಒಬ್ಬ ಮಗಳು ಇದ್ದಾರೆ. ಘಟನೆ ನಡೆದ ಸಮಯದಲ್ಲಿ ಮಮತಾ ಅವರ ನಾದಿನಿ ಮಗ ಅಶೋಕ್ ಹಾಗೂ ಮಕ್ಕಳು ನಿದ್ರಾವಸ್ಥೆಯಲ್ಲಿದ್ದರು.
ಪತಿ ಮೇಲೆ ಶಂಕೆ?: ಈ ಕೊಲೆಗೆ ಅನೈತಿಕ ಸಂಬಂಧವೇ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಗಂಡ ಅಂಜನಾ ರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಹರ್ಷ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಮತಾರ ಶವಪರೀಕ್ಷೆ ಹಾಗೂ autopsy ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಯಲಿದ್ದು, ಕೊಲೆ ಮಾಡಿದವರ ಬಗ್ಗೆ ಸುಳಿವು ಸಿಗುವ ನಿರೀಕ್ಷೆಯಿದೆ. ಮಮತಾ ಅವರ ಶವ ಇದ್ದ ಪರಿಸ್ಥಿತಿ ಇದ್ದ ನೋಡಿದರೆ ಇದು ತೀರಾ ಗೊತ್ತಿದ್ದವರ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ.
ಅಡುಗೆ ಮನೆಯಲ್ಲಿ ಮಮತಾ ಅವರ ಎದೆ ಮೇಲೆ ಗ್ಯಾಸ್ ಸಿಲೆಂಡರ್ ಅನ್ನು ಅಡ್ಡಡ್ಡಾ ಮಲಗಿಸಲಾಗಿತ್ತು. ಉಸಿರುಗಟ್ಟಿಸಿ ಸಾಯಿಸಿ, ಕೊರಳು ಕುಯ್ದಿರುವ ಗುರುತು ಇತ್ತು. ಈ ದೃಶ್ಯವನ್ನು ಮೊದಲಿಗೆ 10 ವರ್ಷದ ಬಾಲಕ ಅಶೋಕ್ ನೋಡಿ ಹೌಹಾರಿದ್ದಾನೆ. ಘಟನೆ ನಡೆದಾಗ ಮನೆಯಲ್ಲಿದ್ದ ಮಕ್ಕಳಿಗಾಗಲಿ, ನೆರೆ ಮನೆಯವರಿಗಾಗಲಿ ಯಾವುದೇ ಸದ್ದು ಕೇಳಿಸಿಲ್ಲ. ಇದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತದೆ. ತನಿಖೆ ಮುಂದುವರೆದಿದೆ ಎಂದು ಡಿಸಿಪಿ(ಆಗ್ನೇಯ) ಹರ್ಷ ಅವರು ಹೇಳಿದ್ದಾರೆ.