ಎಸಿಬಿ ನೋಟಿಸ್ : ಬಂಧನ ಭೀತಿಯಲ್ಲಿ ಶ್ರೀರಾಮುಲು?
ಬಳ್ಳಾರಿಯಲ್ಲಿ ಬೀಡು ಬಿಟ್ಟಿರುವ ಎಸಿಬಿ ತಂಡ, ಅವಂಭಾವಿಯಲ್ಲಿರುವ ಶ್ರೀರಾಮುಲು ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ಸದಸ್ಯರ ಕೈಗೆ ನೋಟಿಸ್ ಇತ್ತಿದ್ದಾರೆ. ಹೈದರಾಬಾದಿನಲ್ಲಿರುವ ಎಸಿಬಿ ಕೇಂದ್ರ ಕಚೇರಿಗೆ ಮೂರು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಶ್ರೀರಾಮುಲು ಪ್ರತಿಕ್ರಿಯೆ: ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೂ ಧೈರ್ಯವಾಗಿ ವಿಚಾರಣೆಗೆ ಹಾಜರಾಗುತ್ತೇನೆ. ಕಾನೂನು ಪ್ರಕಾರ ಉತ್ತರಿಸುತ್ತೇನೆ. ನೋಟಿಸ್ ಜಾರಿ ಹಾಗೂ ಬಂಧನ ಭೀತಿ ಬಗ್ಗೆ ಮಾಧ್ಯಮಗಳು ಇಲ್ಲಸಲ್ಲದ ವರದಿಗಳನ್ನು ಪ್ರಕಟಿಸುವುದನ್ನು ನಿಲ್ಲಿಸಲಿ. ಸತ್ಯಾಸತ್ಯತೆ ಅರಿತು ವರದಿ ಮಾಡಲಿ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.
ಶ್ರೀರಾಮುಲು ಪ್ಲ್ಯಾನ್ ಮೇಕರ್ : ಕಂಪ್ಲಿ ಶಾಸಕ ಸುರೇಶ್ ಬಾಬು, ಸೋಮಶೇಖರ್ ರೆಡ್ಡಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಹೇಳಿಕೆ ಪಡೆದ ಬಳಿಕ ಶ್ರೀರಾಮುಲುಗೆ ನೋಟಿಸ್ ಜಾರಿ ಮಾಡಲಾಗಿದೆ. ಶ್ರೀರಾಮುಲು ಅವರ ಅಣತಿಯಂತೆ ಬೇಲ್ ಗಾಗಿ ಡೀಲ್ ಕುದುರಿಸಲಾಯಿತು ಎಂದು ಶ್ರೀರಾಮುಲು ಅಳಿಯ ಸುರೇಶ್ ಬಾಬು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಗಾಲಿ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಕೂಡಾ ತಪ್ಪೊಪ್ಪಿಗೆ ನೀಡಿರುವುದರಿಂದ ಎಸಿಬಿ ನೋಟಿಸ್ ಶ್ರೀರಾಮುಲುಗೆ ಉರುಳಾಗುವ ಸಾಧ್ಯತೆಗಳಿದೆ.
ನಾಲ್ಕು ದಿನ ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಸೋಮಶೇಖರ್ ರೆಡ್ಡಿ ಅವರನ್ನು ನಂತರ ಬಂಧಿಸಲಾಗಿತ್ತು. ಈಗ ಅದೇ ರೀತಿಯಲ್ಲಿ ಶ್ರೀರಾಮುಲು ಅವರನ್ನು ಕೂಡಾ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆಗಳಿದೆ.
ರೌಡಿಶೀಟರ್ ಯಾದಗಿರಿ ರಾವ್ ಗೆ 20 ಕೋಟಿ ರು ನೀಡುವಂತೆ ಶ್ರೀರಾಮುಲು ಹೇಳಿದ್ದರು. ನಂತರ ಉದ್ಯಮಿ ಸೂರ್ಯ ಪ್ರಕಾಶ್ ಬಾಬು ಅವರ ಮುಖಾಂತರ ಜಡ್ಜ್ ಗಳ ಸಂಪರ್ಕ ಸಾಧಿಸಲಾಯಿತು. ಯಾದಗಿರಿಗೆ 10 ಕೋಟಿ ರು ಅಡ್ವಾನ್ಸ್ ನೀಡಲಾಗಿತ್ತು.
ಅದರಲ್ಲಿ 3 ಕೋಟಿ ರು ಗಳನ್ನು ಮಾತ್ರ ಜಡ್ಜ್ ಪಟ್ಟಾಭಿಗೆ ನೀಡಿದ್ದ ಉಳಿದ ಹಣವನ್ನು ಜೇಬಿಗಿಳಿಸಿಕೊಂಡಿದ್ದ. 20 ಕೋಟಿ ಡೀಲ್ ಪೈಕಿ ಎಸಿಬಿ ವಶಕ್ಕೆ 6.50 ಕೋಟಿ ರು ಸಿಕ್ಕಿದೆ. ಉಳಿದ ಹಣ ಹಾಗೂ ಡೀಲ್ ಕುದುರಿಸಲು ಹಣ ರವಾನೆ ಮಾಡಿದ ರೀತಿಯ ಬಗ್ಗೆ ಶ್ರೀರಾಮುಲು ಅವರನ್ನು ಎಸಿಬಿ ಪ್ರಶ್ನಿಸಲಿದೆ.