ಮೆಕ್ಕಾಗೆ ಹೋಗಬೇಕಿದ್ದವ ಕೊತ್ತನೂರು ಮಸಣ ಸೇರಿದ
ತನ್ನ ಪತ್ನಿಯೊಂದಿಗೆ ಕೆ ನಾರಾಯಣಪುರ ನಿವಾಸಿಯಾಗಿದ್ದ ಎಸ್ ಟಿಡಿ ಬಾಬು(50) ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅನ್ವರ್ (32) ಎಂಬಾತ ಸಿಟ್ಟಿಗೆದ್ದು ಬಾಬುರನ್ನು ಕೊಂದಿದ್ದಾನೆ. ಈ ಸಂದರ್ಭದಲ್ಲಿ ಬಾಬು ಜೊತೆಗಿದ್ದ ಅನ್ವರ್ ಪತ್ನಿಗೂ ಪೆಟ್ಟು ಬಿದ್ದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಬಾಬು ಹಾಗೂ ಅನ್ವರ್ ಪತ್ನಿ ಹಜೀರಾ ಇಬ್ಬರು ಒಟ್ಟಿಗೆ ತನ್ನ ಮನೆಯಲ್ಲಿ ಕೂತಿರುವ ಸುದ್ದಿ ಅನ್ವರ್ ಗೆ ಸಿಕ್ಕಿದೆ. ಮಾರಾಕಾಸ್ತ್ರಗಳನ್ನು ಸಂಪಾದಿಸಿಕೊಂಡು ಮನೆಗೆ ನುಗ್ಗಿದ್ದ ಅನ್ವರ್ ನೇರವಾಗಿ ಬಾಬು ಮೇಲೆ ಹಲ್ಲೆ ಮಾಡಿದ್ದಾನೆ. ಅಡ್ಡ ಬಂದ ಪತ್ನಿ ಹಜೀರಾ ಮೇಲೂ ಹಲ್ಲೆ ಮಾಡಿದ್ದಾನೆ. ನೆರೆ ಮನೆಯವರು ಸಹಾಯಕ್ಕೆ ಬರದಿದ್ದರೆ ಅಜೀರಾ ಕೂಡಾ ಹೆಣವಾಗುತ್ತಿದ್ದಳು ಎನ್ನಲಾಗಿದೆ.
ಹೆಗಡೆ ನಗರದ ವಕ್ಫ್ ಬೋರ್ಡ್ ಕಾರ್ಯದರ್ಶಿ ಬಾಬು ಅವರು ಅನ್ವರ್ ಪತ್ನಿ ಹಜೀರಾ ನಡುವೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮೆಕ್ಕಾಗೆ ಹೋಗುವ ಆಸೆ ಇಟ್ಟುಕೊಂಡಿದ್ದ ಬಾಬು, ಮಂಗಳವಾರ ಮೆಕ್ಕಾಗೆ ಹೋಗಲು ಎಲ್ಲಾ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.
ಮೆಕ್ಕಾ ಪವಿತ್ರ ಯಾತ್ರೆಗೂ ಮುನ್ನ ತನ್ನ ಪ್ರಿಯತಮೆ ಹಜೀರಾಳನ್ನು ನೋಡಿಕೊಂಡು ಹೋಗಲು ಬಾಬು ಬಂದಿದ್ದ.
ವಯಸ್ಸಿನಲ್ಲಿ ತನ್ನ ಪತ್ನಿಗಿಂತ ಬಾಬು ತುಂಬಾ ದೊಡ್ಡವನಾದ್ದರಿಂದ ಆಗಾಗ ಮನೆಗೆ ಬಂದು ಹೋಗಿ ಮಾಡುವುದರಲ್ಲಿ ತಪ್ಪೇನಿದೆ. ಮಸೀದಿಯಲ್ಲಿ ನೆಲೆಸಿರುವ ವ್ಯಕ್ತಿ ಪಾಪ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಅನ್ವರ್ ನಂಬಿದ್ದ. ರಂಜಾನ್ ಮಾಸದ ಉಪವಾಸ ನಿರತನಾಗಿದ್ದ ಬಾಬು ಬಗ್ಗೆ ಒಳ್ಳೆ ಹೆಸರಿತ್ತು. ಬಾಬು ಹಾಗೂ ಪತ್ನಿ ಹಜೀರಾ ಬಗ್ಗೆ ಇತರರು ಕಿವಿ ಕಚ್ಚಿದ್ದರೂ ಅನ್ವರ್ ನಂಬಿರಲಿಲ್ಲ.
ಆದರೆ, ಸೋಮವಾರ ತನ್ನ ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದ ಅನ್ವರ್ ಗೆ ಬೆಡ್ ರೂಮ್ ನಲ್ಲಿ ಬಾಬು ಹಾಗೂ ಹಜೀರಾ ಇರುವುದು ಖಾತ್ರೆಯಾಗುತ್ತಿದ್ದಂತೆ ಅನ್ವರ್ ಮಾರಾಕಾಸ್ತ್ರಗಳನ್ನು ಕೊಂಡು ತಂದು ಮನೆ ಯಲ್ಲಿ ಅಟ್ಟಾಡಿಸಿಕೊಂಡು ಬಾಬುವನ್ನು ಕೊಂದು ಹಾಕಿದ್ದಾನೆ. ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.