ರೆಡ್ಡಿಗೆ ಹತ್ತು ಸಿಬಿಐ ಲಕ್ಷ್ಮಿನಾರಾಯಣಗೆ ಒಂದೇ ವರ್ಷ!
ಧರಿದ್ರದ ಪ್ರಶ್ನೆ: ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಅಂದರೆ ಇಂದು ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ಸುದ್ದಿಗಾರರು 'ಸಾರ್ ಸೋಮಶೇಖರ್ ರೆಡ್ಡಿ ಅವರ ಬಂಧನವಾಗಿದೆ. ಅದರ ಬಗ್ಗೆ ಏನು ಹೇಳುತ್ತೀರಿ?' ಎಂದು ಕೇಳಿದ್ದೇ ತಡ, ಶಿವಮೊಗ್ಗದ ರಾಜಕೀಯ ಧುರೀಣ ಈಶ್ವರಪ್ಪನವರು 'ಅಂತಹ ಧರಿದ್ರ ಪ್ರಶ್ನೆ ಕೇಳಬೇಡಿ' ಎಂದು ಪ್ರತಿಕ್ರಿಯಿಸಿದ್ದಾರೆ.
ಅದೇನೇ ಇರಲಿ ಬಳ್ಳಾರಿ ಸಾಮ್ರಾಜ್ಯ ಕಟ್ಟಿದ್ದು ಮತ್ತು ಅದು ಬಿದ್ದಿದ್ದು... ಹೀಗೆ ಎಲ್ಲವೂ ಅಕ್ರಮ ಗಣಿಗಾರಿಕೆಯ ಫಲವೇ. ಗಣಿ ಧಣಿಗಳ ಅಕ್ರಮ ಗಣಿಗಾರಿಕೆ ಒಂದು ತೂಕದ್ದಾದರೆ ಈ ಜಾಮೀನಿಗಾಗಿ ಜಡ್ಜುಗಳಿಗೆ ಲಂಚ ತಿನ್ನಿಸಿದ ಪ್ರಕರಣ ಮತ್ತೊಂದು ತೂಕದ್ದು. ಮತ್ತು very interesting also.
ಜಾಮೀನು ಕೊಟ್ಟು ಬಿಡಿಸಿಕೊಂಡು ಬರೋಣವೆಂದು ಹೋದವರೆಲ್ಲ Bermuda Triangle ಉಸುಕಿನಲ್ಲಿ ಸಿಕ್ಕಿ ಒದ್ಲಾಡುತ್ತಿದ್ದಾರೆ. ಭಾರತದಲ್ಲಿ ಹೀಗೆ ಇಡೀ ಕುಟುಂಬವೇ ಜೈಲುಪಾಲಾಗುವುದು ಬರ್ಮುಡಾ ಟ್ರಿಯಾಂಗಲ್ ನಂತೆ ವಿಶ್ವ ಸೋಜಿಗವೇ ಸರಿ.
ಸಾಮಾನ್ಯ ಪೊಲೀಸ್ ಪೇದೆಯೊಬ್ಬರ ಮಗನಾಗಿ ಏನೂ ಇಲ್ಲದೆ ಜನಾರ್ದನ ರೆಡ್ಡಿಗೆ ತಮ್ಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ಒಂದು ದಶಕಕ್ಕಿಂತ ಹೆಚ್ಚು ಕಾಲ ಹಿಡಿಸಿತ್ತು. ಆದರೆ ಆ ಸಿಬಿಐ ಲಕ್ಷ್ಮಿನಾರಾಯಣಗೆ ಒಂದೇ ವರ್ಷ ಸಾಕಾಯ್ತು ಅದನ್ನೆಲ್ಲ ಛಿದ್ರಗೊಳಿಸಲು!
ರೆಡ್ಡಿ ಜೈಲುಪಾಲಾಗಿ ಇನ್ನೇನು ಒಂದು ವರ್ಷ ತುಂಬುತ್ತಿರುವ ವೇಳೆಯಲ್ಲಿ (ಸೆ. 5) ಸಾಲುಸಾಲಾಗಿ ಅವರ ಆಪ್ತೇಷ್ಟರೆಲ್ಲ ಜೈಲುಪಾಲಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಕೊನೆಗೆ, ರೆಡ್ಡಿಯ ಆಪ್ತ ಪ್ರಕಾಶ್ ರೆಡ್ಡಿಗೂ ಸೋಮಶೇಖರ ರೆಡ್ಡಿ ಮುಳುಗುನೀರು ತಂದಿದ್ದಾರೆ.
ಅತ್ತ ಜೈಲು ಜನಾರ್ದನ ಆದಿಯಾಗಿ ಬಳ್ಳಾರಿಯ ಅಕ್ರಮ ಧಣಿಗಳು ಜೈಲು ಸೇರುತ್ತಿದ್ದಂತೆ ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಸಹೋದರರ ಹಿಡಿತ ಸಡಿಲಗೊಳ್ಳುತ್ತಿದೆ. ಬಳ್ಳಾರಿ ಸೇರಿದಂತೆ ರಾಜ್ಯದ ಜನತೆಗೂ 'ಕ್ಷಿಪ್ರಗತಿಯಲ್ಲಿ ಗುಡ್ಡೆ ಹಾಕಿದ ಕೀರ್ತಿ, ಸಂಪತ್ತು ಬಹುಕಾಲ ಉಳಿಯುವುದಿಲ್ಲ' ಎಂಬ ಸರಳ, ಸಾಮಾನ್ಯ ಸತ್ಯದ ದರುಶನವಾಗಿದೆ.
ಸದ್ಯದ ಮಟ್ಟಿಗೆ A1 ಜನಾರ್ದನ ರೆಡ್ಡಿ ಒಂದು ವರ್ಷ ಜೈಲುವಾಸ ಪೂರೈಸುವುದು ನಿಶ್ಚಿತವಾಗಿದೆ. ಏಕೆಂದರೆ ಹೈಕೋರ್ಟು ಮತ್ತು ಸಿಬಿಐ ಕೋರ್ಟುಗಳು (ಆಂಧ್ರ ಮತ್ತು ಕರ್ನಾಟಕ) ಜನಾ ರೆಡ್ಡಿಗೆ ಇದುವರೆಗೆ ಜಾಮೀನು ನೀಡುವ ಗೋಚಿಗೆ ಹೋಗಿಲ್ಲ.
ಒಟ್ಟಾರೆಯಾಗಿ ಗಣಿ ಜಿಲ್ಲೆಯಲ್ಲಿ ರಾಜಕೀಯದಲ್ಲಿ ಪ್ರಭುತ್ವ ಸಾಧಿಸಿ, ಇಡಿಇಡಿಯಾಗಿ ಅಧಿಕಾರದ ಸವಿಯುಂಡಿದ್ದ ರೆಡ್ಡಿ ಸಹೋದರರು ಹಾಗೂ ಅವರ ಆಪ್ತರು ಈಗ ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿ, ಬಹುತೇಕ ಆಡಳಿತವನ್ನು ತಮ್ಮ ಕೈಯಲ್ಲೇ ಇರಿಸಿಕೊಂಡಿದ್ದ ಕೆಎಂಎಫ್ ಅಧ್ಯಕ್ಷ, ಬಳ್ಳಾರಿ ನಗರ ಕ್ಷೇತ್ರದ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ಬಂಧನದಿಂದಾಗಿ ರೆಡ್ಡಿ ಸಹೋದರರು ನಗರದ ರಾಜಕೀಯದ ಮೇಲೆ ಹೊಂದಿದ್ದ ಪ್ರಾಬಲ್ಯ ಸಾವಕಾಶವಾಗಿ ಕೈಜಾರುತ್ತ ಸಾಗಿರುವುದು ಸ್ಪಷ್ಟವಾಗಿದೆ.
ಇದೆಲ್ಲದರ ಹೊರತಾಗಿಯೂ ಹೊಸ ಪಕ್ಷ ಸ್ಥಾಪಿಸಿ ಹೊಸ ರಾಜಕೀಯ ಅಸ್ತಿತ್ವವನ್ನೇ ಕಂಡುಕೊಳ್ಳಲು ಹವಣಿಸಿದ ಶ್ರೀರಾಮುಲುಗೂ ಸಂಕಷ್ಟದ ಸರಮಾಲೆ ಎದುರಾಗಿದೆ. ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೇ ಸೆಡ್ಡು ಹೊಡೆದು, ರಾಮುಲು ಗೆಲುವು ಸಾಧಿಸಿದ್ದು ಬಿಟ್ಟರೆ ರಾಜಕೀಯವಾಗಿ ಬಳ್ಳಾರಿ ಸೋದರರು ಪತನದ ಅಂಚಿನಲ್ಲಿದ್ದಾರೆ ಎಂದೇ ಹೇಳಬಹುದು.
ಇದೀಗ ಸುರೇಶ್ ಬಾಬು ಮತ್ತು ಸೋಮಶೇಖರ ರೆಡ್ಡಿ ಬಂಧನ, ಮುಂದೆ ಇನ್ನೂ ಹಲವು ಬಂಧನಗಳ ಸಮ್ಮುಖದಲ್ಲಿ ದಿಢೀರ್ ಬೆಳಕಿಗೆ ಬಂದ ರೆಡ್ಡಿ ಸೋದರರ ಮೇಲಾಟ ಅಂತ್ಯ ಕಾಣಲಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗಿದೆ.