ಸೋಮಶೇಖರ ಕೆಎಂಎಫ್ ಪಟ್ಟ ಬಿಡುವುದು ಸುಲಭವಲ್ಲ
ಹಾಗಾದರೆ ಬಂಧನದ ಬಳಿಕ ಆಡಳಿತಾರೂಢ ಬಿಜೆಪಿ ಪಕ್ಷವು ಅವರನ್ನು ಕೆಎಂಎಫ್ ಅಧ್ಯಕ್ಷ ಪಟ್ಟದಿಂದ ಬಿಡುಗಡೆ ಗೊಳಿಸುವುದೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ತಮ್ಮ ಪಕ್ಷದ ಆಂತರ್ಯದಲ್ಲಿ ಏನಿದೆ ಎಂಬುದನ್ನು ನಿನ್ನೆ ಸಚಿವ ಬಿಜೆ ಪುಟ್ಟಸ್ವಾಮಿಯವರೇ ನಾಲಿಗೆ ಹೊರಳಿ ಹೇಳಿದ್ದಾರೆ. ಆದರೆ ಬಂಧನವಾಗುತ್ತಿದ್ದಂತೆ ಸೋಮಶೇಖರ ರೆಡ್ಡಿ ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಸಾಧ್ಯವೇ?
ಆದರೆ ಅದು ಅಷ್ಟು ಸುಲಭವಲ್ಲ. ಕಳೆದ ಸೆಪ್ಟೆಂಬರಿನಲ್ಲಿ ಎರಡನೆಯ ಅವಧಿಗೆ ಕೆಎಂಎಫ್ ಪಟ್ಟ ಕಬಳಿಸಿದ ಸೋಮಶೇಖರ ರೆಡ್ಡಿ ಅವರ ಸೇವಾವಧಿ ಇನ್ನೂ 2014ರ ಮಾರ್ಚ್ ವರೆಗೂ ಇದೆ. ಸೋಮಶೇಖರ ರೆಡ್ಡಿ ಅವರು ಚುನಾವಯಿತರಾಗಿ ಆ ಸ್ಥಾನವನ್ನು ಅಲಂಕರಿಸಿದ್ದಾರೆ.
ಸೋಮಶೇಖರ ರೆಡ್ಡಿ ಅವರು ಒಟ್ಟು 20 ನಿರ್ದೇಶಕರುಗಳಿಂದ ಚುನಾಯಿತರಾದವರು. ಅದರಲ್ಲಿ 13 ಮಂದಿ ಜಿಲ್ಲಾ ಹಾಲು ಮಂಡಳಿಗಳಿಂದ ಚುನಾಯಿತರಾದ ನಿರ್ದೇಶಕರು. ಅದಕ್ಕಿಂತ ಮುಖ್ಯವಾಗಿ, ಅಧ್ಯಕ್ಷರನ್ನು ಅವಿಶ್ವಾಸ ನಿರ್ಣಯದಿಂದ ತೆಗೆದುಹಾಕುವ ಅವಕಾಶ ಮಂಡಳಿಯ ಕಾನೂನಿನಲ್ಲಿ ಇಲ್ಲ.
ಇನ್ನು ರಾಜಕೀಯವಾಗಿ ನೋಡಿದಾಗ, ಪಕ್ಷದ ಇತ್ತೀಚಿನ ಜೈಲು ಇತಿಹಾಸವನ್ನು ಕೆದಕಿದಾಗ ಮಾಜಿ ಸಿಎಂ ಯಡಿಯೂರಪ್ಪ ಅವರೂ ಸೇರಿದಂತೆ ಅನೇಕ ಮಹಾಮಹಿಮರು ಜೈಲಿಗೆ ಹೋಗಿಬಂದಿದ್ದಾರೆ. ಆದರೆ ಅವರು ಯಾರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಲಿ ಅಥವಾ ತಾವು ಅನುಭವಿಸುತ್ತಿರುವ ಲಾಭದಾಯಕ ಹುದ್ದೆಗಳನ್ನು ತೊರೆಯಲಿಲ್ಲ.