ಶಾಸಕ ವಿಶ್ವನಾಥ್ ಅಕ್ರಮ ಆಸ್ತಿ ಗಳಿಕೆ ಸಾಬೀತು: ಲೋಕಾ
ಶಾಸಕ ವಿಶ್ವನಾಥ್ ಅಕ್ರಮ ಆಸ್ತಿ ಸಂಪಾದಿಸಿರುವುದು ಸಾಬೀತಾಗಿದೆ. ಮುಖ್ಯವಾಗಿ ಎಚ್ಎಎಲ್ ನಲ್ಲಿ ಉದ್ಯೋಗಿಯಾಗಿದ್ದುಕೊಂಡು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಸುಳ್ಳು ಮಾಹಿತಿ ನೀಡಿ 'ಜಿ' ಕೆಟಗರಿ ಸೈಟ್ ಪಡೆದಿದ್ದಾರೆ. ವಿಶ್ವಾನಾಥ್ ಸುಮಾರು 40 ಕೋಟಿ ರು. ಆಸ್ತಿವಂತರಾಗಿದ್ದಾರೆ.
ಇನ್ನು, ಪತ್ನಿಯ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಮತ್ತಿತರ ಆಸ್ತಿ ಮಾಡಿದ್ದಾರೆ. ಬೇನಾಮಿಯಾಗಿ ವಿದೇಶಿ ಕಾರು ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಾವು ಸಲ್ಲಿಸಿರುವ 5 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ. ಲೊಕಾಯುಕ್ತ ನ್ಯಾಯಾಲಯ ಪ್ರಕರಣವನ್ನು ಆಗಸ್ಟ್ 31ಕ್ಕೆ ಮುಂದೂಡಿದೆ.
ಪ್ರಕರಣದ ಸಂಬಂಧ ಅಂತಿಮ ಆರೋಪಪಟ್ಟಿ ದಾಖಲಿಸಲು ಲೋಕಾಯುಕ್ತ ಪೊಲೀಸರು ಕಳೆದ ತಿಂಗಳು ಕಾಲಾವಕಾಶ ಕೋರಿದ್ದರಿಂದ ಲೋಕಾಯುಕ್ತ ಕೋರ್ಟ್ ವಿಚಾರಣೆಯನ್ನು ಇಂದಿಗೆ (ಆಗಸ್ಟ್ 4) ಮುಂದೂಡಿತ್ತು.
ಈಗಾಗಲೇ, ಪ್ರಕರಣದ ಸಂಬಂಧ ಶಾಸಕ ವಿಶ್ವನಾಥರನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಕೋರಿ ಲೋಕಾಯುಕ್ತ ಪೊಲೀಸರು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ವಿರುದ್ಧ ಒಟ್ಟು ಮೂರು ದೂರುಗಳು ದಾಖಲಾಗಿವೆ.
ಕಳೆದ ಫೆಬ್ರವರಿಯಲ್ಲಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪನವರ ಪರಮಾಪ್ತ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರ ಬಂಧು ಬಳಗ, ಸ್ನೇಹಿತರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.
ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ವಿ.ಶಶಿಧರ್ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲದಯಲ್ಲಿ ಅಧಿಕಾರ ದುರುಪಯೋಗ ಹಾಗೂ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುಧೀಂದ್ರರಾವ್ರವರು ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯಕ್ತ ಪೊಲೀಸರಿಗೆ ಆದೇಶಿಸಿದ್ದರು.