ರಾಜ್ಯಾದ್ಯಂತ ಸರ್ಕಾರಿ ವೈದ್ಯರ ಸಾಮೂಹಿಕ ರಾಜೀನಾಮೆ
ತಮ್ಮ ವಿವಿಧ ಬೇಡಿಕೆಗಳನ್ನು ಆ.8ರ ಒಳಗೆ ಈಡೇರಿಸಬೇಕು ಎಂದು ವೈದ್ಯರು ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ. ವೇತನ ತಾರತಮ್ಯ, ವೈದ್ಯರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳ ರದ್ದುಗೊಳಿಸಬೇಕು ಎಂಬ ವಿವಿಧ ಹತ್ತು ಬೇಡಿಕೆಗಳನ್ನು ವೈದ್ಯರು ಸರ್ಕಾರದ ಮುಂದಿಟ್ಟಿದ್ದಾರೆ.
2010ರಿಂದಲೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ಸರ್ಕಾರ ತಮ್ಮ ಈ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷಿಸುತ್ತಾ ಬರುತ್ತಿದೆ. ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗಲೂ ಸಲ್ಲಿಸಿದ್ದೆವು ಎಂದಿದ್ದಾರೆ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ.
ವೈದ್ಯರ ಸಾಮೂಹಿಕ ರಾಜೀನಾಮೆ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರು, " ಆಗಸ್ಟ್ 9ರಂದು ಮುಖ್ಯಮಂತ್ರಿಗಳೊಂದಿಗೆ ವೈದ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುತ್ತದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತದೆ" ಎಂದಿದ್ದಾರೆ.
ಈಗಾಗಲೆ ವೈದ್ಯ ಸಂಘದ ಪದಾಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೇವೆ. ಜನರಿಗೆ ತೊಂದರೆ ಮಾಡುವುದು ಬೇಡ. ದಯವಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಅರವಿಂದ ಲಿಂಬಾವಳಿ ವಿನಂತಿಸಿದರು. ವೈದ್ಯರು ರಾಜೀನಾಮೆ ಸಲ್ಲಿಸಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿರುವುದಾಗಿ ಅವರು ತಿಳಿಸಿದರು.
ಆದರೆ ಈಗಾಗಲೆ ಹಾವೇರಿ ಜಿಲ್ಲೆಯಲ್ಲಿ 99, ಕೊಡಗು ಜಿಲ್ಲೆಯಲ್ಲಿ 48, ಬೆಳಗಾವಿ ಜಿಲ್ಲೆಯಲ್ಲಿ 50, ಬೀದರ್ ಜಿಲ್ಲೆಯಲ್ಲಿ 89, ಮೈಸೂರಿನಲ್ಲಿ 202, ರಾಯಚೂರು ಜಿಲ್ಲೆಯಲ್ಲಿ 60 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 89 ಮಂದಿ ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಈಗಾಗಲೆ ಮಾರಕ ಚಿಕುನ್ ಗುನ್ಯಾ, ಡೆಂಗ್ಯೂ ರೋಗಗಳು ವ್ಯಾಪಿಸಿದ್ದು ವೈದ್ಯರ ಸಾಮೂಹಿಕ ರಾಜೀನಾಮೆಯಿಂದ ಬಡ ರೋಗಿಗಳು ಪರದಾಡುವಂತಾಗಿದೆ. (ಒನ್ ಇಂಡಿಯಾ ಕನ್ನಡ)