ಶಿಕ್ಷಣ ಕೊಡ್ಸಲಿಲ್ಲ ಅಂತ ರೈಲು ಕೆಳಗೆ ಬಿದ್ದು ಸತ್ತಳು
ನಮ್ಮ ದೇಶಕ್ಕೆ ಇಂತಹ ಹೆಣ್ಣುಮಗುವಿನ ಬಗ್ಗೆ ಕನಿಷ್ಠ ಯೋಚಿಸುವಷ್ಟಾದರೂ ವ್ಯವಧಾನವಿದೆಯಾ? ಹೀಗೆ, ಉನ್ನತ ಶಿಕ್ಷಣಕ್ಕೆ ಅವಕಾಶ ನೀಡಲಿಲ್ಲವೆಂದು ನಮ್ಮ ಮಡಿವಂತಿಕೆಯ ಸಮಾಜಕ್ಕೆ ಸಡ್ಡು ಹೊಡೆದು ಪ್ರಾಣಾರ್ಪಣ ಮಾಡಿರುವುದು 19 ವರ್ಷದ ಪೂಜಾ ಕುಮಾವತ್.
'ಪೂಜಾ ಕುಮಾವತ್ ಪಿಯುಸಿಯಲ್ಲಿ ಶೇ. 84ರಷ್ಟು ಅಂಕ ಗಳಿಸಿದ್ದಳು. ಆಕೆಗೆ IIT ಮತ್ತು AIEEE ಪಾಸು ಮಾಡುವ ಆಸೆ ಬಹಳಷ್ಟಿತ್ತು. ಆದರೆ ಅದಕ್ಕಾಗಿ ದೊಡ್ಡ ನಗರಕ್ಕೆ ಆಕೆಯನ್ನು ಒಬ್ಬಳೇ ಕಳಿಸುವ ಇಚ್ಛೆ ನಮಗಿರಲಿಲ್ಲ.
ಅವಳ ಸುರಕ್ಷೆತಯ ದೃಷ್ಟಿಯಿಂದ ಉನ್ನತ ವ್ಯಾಸಂಗ ಬೇಡ ಮಗಳೇ ಎಂದು ಆಕೆಗೆ ತಿಳಿಯ ಹೇಳಿದ್ದೆವು. ಆದರೂ ಪೂಜಾ...' ಎಂದು ಹಾಲು ಮಾರುವ ಉದ್ಯೋಗ ಮಾಡುವ ಪೂಜಾಳ ಅಪ್ಪ ಪೃಥ್ವಿ ಸಿಂಗ್ ಕುಮಾವತ್ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಇಲ್ಲಿ ತಪ್ಪು ಯಾರದು?
ಭೋಜಾಸರ ಗ್ರಾಮದ ಈ ನಿರ್ಭಾಗ್ಯ ಪೋಷಕರು ಸಮೀಪದಲ್ಲೇ ಇರುವ ಶ್ಯಾಮ್ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಪೂಜಾಳನ್ನು 5 ದಿನಗಳ ಹಿಂದೆ ಬಿಎಸ್ಸಿಗೆ ಸೇರಿಸಿದ್ದರು. ನಿರುತ್ಸಾಹಗೊಂಡ ಪೂಜಾ ಮರಳಿ ಬಾರದ ಲೋಕಕ್ಕೆ ಹೋಗೇ ಬಿಟ್ಟಳು ಎಂದು ಖಾಸಗಿ ಕಾಲೇಜಿನ ಲೆಕ್ಚರರ್ ಮಹೇಂದ್ರ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
'ಬೆಳಗ್ಗೆ 7.30ಕ್ಕೆಲ್ಲ ಎಂದಿನಂತೆ ಕಾಲೇಜಿಗೆ ಬಂದಿದ್ದಳು. ಆದರೆ ತನ್ನ ತಾತನಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ, ಲೀವ್ ತೆಗೆದುಕೊಂಡು ಹೊರಟಳು. ಆದರೆ ಸೀದಾ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಳು' ಎಂದು ಮಹೇಂದ್ರ ಕುಮಾರ್ ಹೇಳಿದ್ದಾರೆ.
'ಹಮೇಶಾ ಲಡ್ಕೋ ಕೋ ಹೀ ಆಪರ್ಚುನಿಟಿ ಕ್ಯೊ ಮಿಲ್ತಿ ಹೈ? ಮೈ ಲಡ್ಕಿ ಹೂ ಇಸ್ ಲಿಯೇ ಮುಝೆ ಮೌಕಾ ನಹೀ ಮಿಲಾ? ಜಿಂದಗಿ ಕೆ ಸಪ್ನೆ ಪೂರೆ ನ ಹೋ ತೊ, ಜಿಂದಗಿ ಕಾ ಕ್ಯಾ ಫಾಯಿದಾ? ಬಿಎಸ್ಸಿ ಮೇರಿ ಮಜಬೂರಿ ಹೈ. ಬ್ಯಾಡ್ ಲಕ್. ಅಪನಿ ಮರ್ಜಿ ಸೆ ಜಾನ್ ದೆ ರಹೀ ಹೂ' ಎಂದು ಪತ್ರ ಬರೆದಿಟ್ಟ ಪೂಜಾ, 10 ಗಂಟೆಗೆಲ್ಲ ರೈಲಿಗೆ ಸಿಕ್ಕಿ ಸತ್ತಿದ್ದಾಳೆ.