ಶಾಲಾ ಶಿಕ್ಷಕಿ ವರ್ಗಾವಣೆ; ವಿದ್ಯಾರ್ಥಿಗಳ ರಕ್ತಪ್ರತಿಭಟನೆ
ಇಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ 5, 6 ಹಾಗೂ 7ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕಿ ರಮಣಿ ಎಂಬುವವರನ್ನು ಬಹಳ ಹಚ್ಚಿಕೊಂಡಿದ್ದರು. ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈಕೆಯನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು.
ತಮ್ಮ ಅಚ್ಚುಮೆಚ್ಚಿನ ಶಿಕ್ಷಕಿ ವರ್ಗಾವಣೆಯಾಗಿದ್ದು ಇಲ್ಲಿನ ವಿದ್ಯಾರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿತ್ತು. ತಮಗೆ ಅದೇ ಶಿಕ್ಷಕಿ ಬೇಕು ಎಂದು ರಚ್ಚೆಹಿಡಿದ ವಿದ್ಯಾರ್ಥಿಗಳು ಪಾಲಕರ ಗಮನಕ್ಕೂ ತರದೆ ಜಾಮಿಟ್ರಿ ಬಾಕ್ಸ್ ನಲ್ಲಿದ್ದ ಕೈವಾರ ತೆಗೆದು ಕೈಗಳಿಗೆ ಪರಪರ ಎಂದು ಗೀಚಿಕೊಂಡಿದ್ದಾರೆ.
ಬಳಿಕ ಈ ಘಟನೆ ಶಾಲಾ ಮುಖ್ಯೋಪಾದ್ಯಾಯರ ಗಮನಕ್ಕೆ ಬಂದು ವಿಚಾರಿಸಿದಾಗ, ವಿದ್ಯಾರ್ಥಿಗಳು ರಮಣಿ ಶಿಕ್ಷಕಿಯನ್ನು ಮತ್ತೆ ಇದೇ ಶಾಲೆಗೆ ಹಾಕಿಸಬೇಕು ಎಂದು ತಿಳಿಸಿದ್ದಾಗಿ ಹೇಳಿದ್ದಾರೆ. ಈ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಅವರ ಕಿವಿಗೂ ಬಿದ್ದು ಅವರೂ ಶಾಲೆ ಭೇಟಿ ನೀಡಿ ವಿಚಾರಿಸಿದ್ದಾರೆ.
ಬಹಳವಾಗಿ ಹಚ್ಚಿಕೊಂಡಿದ್ದ ತಮ್ಮ ಟೀಚರ್ ಒಬ್ಬರು ವರ್ಗವಾಗಿ ಹೋದಾಗ ಇವರು ಈ ರೀತಿ ಮಾಡಿಕೊಂಡಿದ್ದಾರೆ ಎಂಬುದು ಅವರ ಗಮನಕ್ಕೂ ಬಂದಿದೆ. ಇದರಲ್ಲಿ ಯಾರದೇ ಕೈವಾಡ ಇಲ್ಲ ಎನ್ನಲಾಗಿದೆ. ಮುಗ್ಧ ವಿದ್ಯಾರ್ಥಿಗಳ ಈ ರಕ್ತ ಪ್ರತಿಭಟನೆಗೆ ರಮಣಿ ಟೀಚರ್ ಮತ್ತೆ ಇದೇ ಶಾಲೆಗೆ ಬರುತ್ತಾರೋ ಇಲ್ಲವೋ ಕಾದು ನೋಡಬೇಕು.
ಈ ಮುಗ್ಧ ಮಕ್ಕಳ ಪರಿಸ್ಥಿತಿ ನೋಡಿದರೆ ಬೇಡಬೇಡ ಎಂದರೂ ಕನ್ನಡದ ಜನಪ್ರಿಯ ಶಿಶುಗೀತೆ ಮತ್ತೆಮತ್ತೆ ನೆನಪಾಗುತ್ತದೆ. "ಬಹಳ ಒಳ್ಳೇರು ನಮ್ಮಿಸ್ಸು ಏನ್ ಹೇಳಿದ್ರು ಎಸ್ಸೆಸ್ಸು...ನಗ್ತಾ ನಗ್ತಾ ಮಾತಾಡಿಸ್ತಾರೆ ಸ್ಕೂಲಿಗೆಲ್ಲಾ ಪೇಮಸ್ಸು...ಸ್ಕೂಲಿಗೆಲ್ಲಾ ಪೇಮಸ್ಸು...ಆಟಕ್ಕೆ ಬಾ ಅಂತಾರೆ ಆಟದ ಸಾಮಾನ್ ಕೊಡ್ತಾರೆ ಆಟದ್ ಜೊತೆ ಗೊತ್ತಿಲ್ದಂಗೆ.. ಪಾಟನೂ ಕಲಿಸ್ತಾರೆ..."(ಏಜೆನ್ಸೀಸ್)