ಕಾಂಗ್ರೆಸ್ಸಿನತ್ತ ಗುಳೆ ಹೊರಟ ಬಿಜೆಪಿ ಜೆಡಿಎಸ್ ಶಾಸಕರು
ಇದು ಆಡಳಿತಾರೂಢ ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಕೆಲವು ಸಚಿವರೂ ಸೇರಿದಂತೆ ಸುಮಾರು ಹದಿನೈದಿಪ್ಪತ್ತು ಶಾಸಕರು ಈಗಾಗಲೇ ಕಾಂಗ್ರೆಸ್ ಪಕ್ಷದ ಬಾಗಿಲು ಬಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಿ ಸಾಕು. ಸ್ವಂತ ಸಾಮರ್ಥ್ಯದ ಮೇಲೆ ಗೆದ್ದು ಬರುತ್ತೇವೆ ಎಂಬುದು ಹೀಗೆ ಗುಳೆ ಹೊರಟ ಶಾಸಕರ ವರಾತ.
ಕುತೂಹಲದ ಸಂಗತಿಯೆಂದರೆ ಇಂತಹ ಶಾಸಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಯಾರೆಲ್ಲ ತಮ್ಮ ತಮ್ಮ ಪಕ್ಷಗಳನ್ನು ಬಿಟ್ಟು ಬರಲಿದ್ದಾರೆ? ಯಾರಿಗೆಲ್ಲ ಮುಂದಿನ ಚುನಾವಣೆಯಲ್ಲೂ ಖಚಿತವಾಗಿ ಗೆಲ್ಲುವ ಸಾಮರ್ಥ್ಯವಿದೆ? ಗೆದ್ದರೂ ಗೆಲ್ಲಬಹುದಾದ ಸಂಶಯದ ಲಾಭದಲ್ಲಿರುವ ಶಾಸಕರೆಷ್ಟು? ಮುಖ್ಯವಾಗಿ ಯಾವ ಜಾತಿಯರವರು?
ಅದರಿಂದ ತನಗೆ ಯಾವ ರಾಜಕೀಯ ಲಾಭವಾಗುವುದು? ಇದರಿಂದ ರಾಜಕೀಯವಾಗಿ ತನಗೆ ಎದುರಾಗುವ ಸಂಕಷ್ಟಗಳೇನು? ಹೀಗೆ ಪ್ರಶ್ನೆಗಳ ಮೂಟೆಯನ್ನು ಹೊತ್ತು ಕಾಂಗ್ರೆಸ್ ಚಿಂತಾಕ್ರಾಂತವಾಗಿದೆ.
ಹೀಗೆ, ಬಯಸದೆ ಬಂದ ಭಾಗ್ಯದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗಾಗಿ 224 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ತುಸು ತ್ರಾಸದಾಯಕವಾಗಲಿದೆ ಎಂದು ಆಪ್ತ ಮೂಲಗಳು ಹೇಳುತ್ತಿವೆ. 'ಈ ಹಂತದಲ್ಲಿ ಹೆಸರುಗಳನ್ನು ಬಹಿರಂಗಪಡಿಸುವ ದುಸ್ಸಾಹಸಕ್ಕೆ ಹೋಗುವುದಿಲ್ಲ.
ಆದರೆ ಅನೇಕ ಶಾಸಕರು ಮತ್ತು ಕೆಲವು ಸಚಿವರು ನಮ್ಮೊಂದೊಗೆ ಸಂರ್ಕದಲ್ಲಿರುವುದು ನಿಜ' ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಿಗೂಢವಾಗಿ ಪ್ರತಿಕ್ರಿಯಿಸಿದ್ದಾರೆ.
ಹೈ-ಕಗೆ ವಿಶೇಷ ಸ್ಥಾನಮಾನ ಕಲ್ಪಿಸಬಹುದಾದ ಸುವರ್ಣಾವಕಾಶವನ್ನು ಗಳಿಸಿಕೊಂಡಿರುವ ಕಾಂಗ್ರೆಸ್ ಅತ್ಯುತ್ಸಾಹದಲ್ಲಿದೆ. 'ಆಡಳಿತ ಪಕ್ಷಕ್ಕೆ ಸೇರಿದ ಉತ್ತರ ಕರ್ನಾಟಕದ ಮಂದಿಯಂತೂ ಕಾಂಗ್ರೆಸ್ಸಿನತ್ತ ಗುಳೇ ಬರಲು ಭಾರಿ ಉತ್ಸುಕರಾಗಿದ್ದಾರೆ. ಬಿಜೆಪಿ ಬಗ್ಗೆ ಅವರಿಗೆಲ್ಲ ಭ್ರಮನಿರಸನವಾಗಿದೆ.
ಆ ಭಾಗದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿರುವುದನ್ನು ಅರಿತಿರುವ ಈ ಶಾಸಕ/ ಸಚಿವರು ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವುದು ಖಚಿತ. ಬರೀ ಉತ್ತರ ಕರ್ನಾಟಕ ಭಾಗದವರೇ ಅಲ್ಲ. ಇನ್ನೂ ಅನೇಕ ಮಂದಿ ನನ್ನನ್ನು ಸಂಪರ್ಕಿಸಿದ್ದಾರೆ' ಎಂದು ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ.