ವಾವ್ : ಸಕ್ರಿಯ ರಾಜಕಾರಣದತ್ತ ಟೀಂ ಅಣ್ಣಾ ಹಜಾರೆ!
ಹೀಗೆಂದು ಹೇಳಿದವರು 9 ದಿನಗಳಿಂದ ಜನ ಲೋಕಪಾಲ ಮಸೂದೆ ಮಂಡನೆಗಾಗಿ ದೆಹಲಿಯ ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿರುವ ಸಮಾಜ ಸೇವಕ ಅಣ್ಣಾ ಹಜಾರೆ. ತಾವು ಸ್ವತಃ ರಾಜಕೀಯಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದರೂ, ಜನರೇ ಬಯಸುವಂತಹ ರಾಜಕೀಯ ಸಂಘಟನೆ ಹುಟ್ಟುಹಾಕಿದರೆ ತಪ್ಪೇನೂ ಇಲ್ಲ ಎಂದು, ಪ್ರಪ್ರಥಮವಾಗಿ ರಾಜಕೀಯ ಸಂಘಟನೆ ಸೃಷ್ಟಿಸುವ ಕುರಿತಾಗಿ ಮಾತನಾಡಿದ್ದಾರೆ.
ಎರಡು ಪ್ರಮುಖ ನಿರ್ಣಯ : ಕೇಂದ್ರ ಸರಕಾರರಿಂದ ಜನ ಲೋಕಪಾಲ ಮಸೂದೆ ಮಂಡಿಸುವುದು ಸಾಧ್ಯವಿಲ್ಲವೆಂಬುದು ಮನವರಿಕೆಯಾಗಿದೆ. ಸರಕಾರ ಏನೇ ಕ್ರಮ ತೆಗೆದುಕೊಳ್ಳಲಿ ಆ.3, ಶುಕ್ರವಾರ ಸಂಜೆ 5 ಗಂಟೆಗೆ ಉಪವಾಸ ಸತ್ಯಾಗ್ರಹವನ್ನು ಕೈಬಿಡಲು ಅಣ್ಣಾ ತಂಡ ನಿರ್ಣಯಿಸಿದೆ. ಕೇಂದ್ರದ ಧೋರಣೆಯಿಂದ ನಿರಾಶವಾಗಿರುವ ಅಣ್ಣಾ ಮತ್ತು ಸಂಗಡಿಗರು ಪರ್ಯಾಯ ರಾಜಕೀಯ ಸಂಘಟನೆ ಕಟ್ಟಲು ಚಿಂತನೆ ನಡೆಸಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನರ ಮೊರೆ ಹೋಗಲು ನಿರ್ಣಯಿಸಿದೆ.
ರಾಜಕೀಯಕ್ಕೆ ಪರ್ಯಾಯವಾದ ಸಂಘಟನೆ ಅಸ್ತಿತ್ವಕ್ಕೆ ಬರಬೇಕಾದರೆ ಹಣ ಎಲ್ಲಿಂದ ಬರುತ್ತದೆ? ದೇಶಕ್ಕೆ ಸರಿಯಾದ ನಾಯಕತ್ವ ದೊರಕಿಸಿಕೊಡಲು ನಮ್ಮಿಂದ ಸಾಧ್ಯವಾಗುವುದೆ? ಜನರು ಅಂಥ ಸಂಘಟನೆಯನ್ನು ಬೆಂಬಲಿಸುವರೆ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಇದರ ನಿರ್ಧಾರವನ್ನು ಜನರಿಗೇ ಬಿಟ್ಟಿದ್ದೇವೆ. ಜನರು ಸರ್ವಾನುಮತದಿಂದ ನಿರ್ಧರಿಸಿದರೆ ಮಾತ್ರ ರಾಜಕೀಯಕ್ಕೆ ಪರ್ಯಾಯವಾದ ಸಂಘಟನೆ ಸಾಧ್ಯ ಎಂದು ಹೇಳಿದ್ದಾರೆ.
ಆದರೆ, ನಿಷ್ಕಳಂಕ ವ್ಯಕ್ತಿಯನ್ನು ಆರಿಸುವ, ದೇಶಪ್ರೇಮ ಹೊಂದಿರುವ, ಜನರ ಸೇವೆಗಾಗಿ ತುಡಿಯುವ, ಭ್ರಷ್ಟ ವಿರೋಧಿ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಬೇಕು. ಆದರೆ ಅಂಥವರನ್ನು ಆರಿಸುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ನಾಲ್ಕನೇ ರಂಗ ಬಂದರೆ 65 ವರ್ಷಗಳಲ್ಲಿ ಮಾಡದಂತಹ ಕೆಲಸವನ್ನು 3 ವರ್ಷಗಳಲ್ಲಿ ಮಾಡುವುದಾಗಿ ಕೇಂದ್ರ ಸರಕಾರಕ್ಕೆ ಸೆಡ್ಡುಹೊಡೆದಿದೆ.