ರಾಮುಲು ಸ್ವಾಭಿಮಾನದ ಉತ್ತರವೇನು?: ಎಚ್ಕೆ ಪಾಟೀಲ್
ಈ ಹಿಂದೆ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ 'ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತೆಂದು ಬೊಬ್ಬೆಯಿಟ್ಟು ರಾಜೀನಾಮೆ ನೀಡಿದ ಶ್ರೀರಾಮುಲು ಅವರೇ ಈಗ ರೆಡ್ಡಿ ಜಾಮೀನಿಗಾಗಿ 20 ಕೋಟಿ ರೂ. ಲಂಚ ಪ್ರಕರಣ ಕುದುರಿಸಿದ ಪ್ರಕರಣದಲ್ಲಿ ತಮ್ಮ ಹೆಸರೂ ಕೇಳಿಬಂದಿದೆ.
ಖುದ್ದು ನಿಮ್ಮ ಅಳೀಮಯ್ಯನೇ (ಕಂಪ್ಲಿ ಶಾಸಕ ಸುರೇಶ್ ಬಾಬು) ನಿಮ್ಮ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರ. ಸೋ. ಈಗ ನಿಮ್ಮ ನಿರ್ಧಾರವೇನು? ಈಗ ಯಾವ ಪಕ್ಷ ಬಿಡುತ್ತೀರಿ? ಇದು ಜನತೆಗೆ ತಿಳಿಯಬೇಕಾಗಿದೆ' ಎಂದು ಎಚ್ಕೆ ತುಸು ಮೊನಚಾಗಿಯೇ ಪ್ರಶ್ನಿಸಿದ್ದಾರೆ.
'ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎದುರಿಗೆ ಸ್ವತಃ ರಾಮುಲು ಅವರ ಸೋದರಳಿಯ ಕಂಪ್ಲಿ ಬಾಬು ಅವರು ಜನಾರ್ದನ ರೆಡ್ಡಿ ಬೇಲ್ ಡೀಲ್ ನಲ್ಲಿ ಶ್ರೀರಾಮುಲು ಹೆಸರು ಪ್ರಸ್ತಾಪಿಸಿರುವುದರಿಂದ ನಾಡಿನ ಜನತೆ ಶ್ರೀರಾಮುಲು ಮುಂದಿನ ನಡೆ ತಿಳಿಯಲು ಕಾತರರಾಗಿದ್ದಾರೆ' ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಮೋಡಗಳು ಯಾರಿಗೂ ಕಾಯುವುದಿಲ್ಲ: ಮೋಡ ಬಿತ್ತನೆ ಅವಶ್ಯಕತೆ ಕುರಿತು ತಾವು ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ಗೆ ಬರೆದ ಪತ್ರಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಆದರೆ ಮೋಡ ಬಿತ್ತನೆ ಮಾತ್ರ ಬೇಗ ಆಗಬೇಕು. ಸರಕಾರದ ಕಡತಗಳು ಮಂತ್ರಿಗಳ ಸಹಿಗಾಗಿ ಕಾಯಬಹುದು. ಆದರೆ ಆಕಾಶದಲ್ಲಿ ಅಪರೂಪವಾಗುತ್ತಿರುವ ಮೋಡಗಳು ಯಾರಿಗೂ ಕಾಯುವುದಿಲ್ಲ. ಸರಕಾರ ಮೋಡ ಬಿತ್ತನೆ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಎಚ್.ಕೆ. ಪಾಟೀಲರು ಇದ ಇದೇ ವೇಳೆ ಆಗ್ರಹಿಸಿದ್ದಾರೆ.
ಮೋಡ ಬಿತ್ತನೆ ಹೆಚ್ಚು ಫಲಪ್ರದವಾಗುವುದಿಲ್ಲ ಎಂಬ ಕೆಲವರ ವಾದವನ್ನು ಅಲ್ಲಗಳೆದಿರುವ ಪಾಟೀಲರು, ಇದನ್ನು ರಾಜ್ಯದಲ್ಲಿ ಈ ಹಿಂದೆ 2003 ಹಾಗೂ 2008 ರಲ್ಲಿ ನಡೆಸಿ ಸಕಾರಾತ್ಮಕ ಫಲಿತಾಂಶ ಕಂಡ ದಾಖಲೆಗಳು ಕೂಡ ಸರಕಾರದ ಮುಂದಿವೆ. ಮುಖ್ಯಮಂತ್ರಿಗಳು ದಿಟ್ಟ ಇಚ್ಛಾಶಕ್ತಿ ಪ್ರಕಟಿಸಿ ಮೋಡ ಬಿತ್ತನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.