ಗಾಯದ ಮೇಲೆ ಉಪ್ಪುಸುರಿದ ಮಂಗಳೂರು ಕಾಲೇಜು
ಬುಧವಾರದಿಂದ ಪ್ರಾರಂಭವಾಗಿರುವ ಮೂರನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗದಿರುವಂತೆ, ಹಿಂದೂ ಜಾಗರಣ ವೇದಿಕೆಯಿಂದ ಹಲ್ಲೆಗೊಳಗಾಗಿರುವ ಹುಡುಗಿಗೆ ಮೌಖಿಕವಾಗಿ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ ಆಡಳಿತ ವರ್ಗ ಸಂದೇಶ ನೀಡಿದೆ. ಇದರಿಂದಾಗಿ ಈಗಾಗಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತಳಾಗಿರುವ ಆ ಹುಡುಗಿಯ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.
ಪರೀಕ್ಷೆಗೆ ಕುಳಿತುಕೊಳ್ಳಲು ಕಾಲೇಜು ತಡೆದದ್ದೇಕೆ ಎಂಬ ಪ್ರಶ್ನೆಗೆ ಕಾಲೇಜು ಆಡಳಿತ ಮಂಡಳಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಕಾಲೇಜಿನ ಈ ಕ್ರಮವನ್ನು ಭಂಡಾರಿ ಫೌಂಡೇಷನ್ ಚೆರ್ಮನ್ ಆಗಿರುವ ಮಂಜುನಾಥ ಭಂಡಾರಿ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ದಾಳಿಗೊಳಗಾಗಿರುವ ವಿದ್ಯಾರ್ಥಿಗಳು ಈಗಾಗಲೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಕಾಲೇಜು ಅವರಿಗೆ ಅವಕಾಶ ನೀಡಿ ಸಂತೈಸಬೇಕೆ ಹೊರತು ಗಾಯವನ್ನು ಮತ್ತಷ್ಟು ಗೀರುವಂತೆ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಶನಿವಾರ ಹುಟ್ಟುಹಬ್ಬದ ಆಚರಣೆ ಮುಗಿದ ನಂತರ ನಡೆದ ದಾಳಿಯಲ್ಲಿ ಹಲ್ಲೆಗೊಳಗಾಗಿರುವ ಮತ್ತೊಬ್ಬನನ್ನು ಆಕೆಯ ಪಾಲಕರು ದೂರದ ರಾಜಸ್ತಾನದಲ್ಲಿರುವ ಸಂಬಂಧಿಕರ ಮನೆಗೆ ಕಳಿಸಿದ್ದಾರೆ. ಪೊಲೀಸರ ವಿಚಾರಣೆ, ಮಂಗಳೂರಿನಲ್ಲಿರುವ ಅವರ ನಿವಾಸದ ಎದಿರು ಮಾಧ್ಯಮಗಳ ಪ್ರತಿನಿಧಿಗಳು ಜಮಾಯಿಸಿ ಸಂದರ್ಶನಕ್ಕೆ ಒತ್ತಾಯಿಸುತ್ತಿರುವುದು ಸಾಕಷ್ಟು ನೋವುಂಟು ಮಾಡಿದೆ ಎಂದು ಆತನ ಪಾಲಕರ ಅನಿಸಿಕೆ.
ಈ ನಡುವೆ, ಮಂಗಳೂರು ನಗರ ಪಾಲಿಕೆ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಗೆ ನೋಟೀಸ್ ಜಾರಿ ಮಾಡಿದ್ದು, ಹೋಂ ಸ್ಟೇಯನ್ನು ನಿವಾಸವಾಗಿ ಬಳಸಲಾಗುತ್ತಿತ್ತೋ ಅಥವಾ ವಾಣಿಜ್ಯ ಕಾರಣಕ್ಕಾಗಿ ಬಳಸಲಾಗುತ್ತಿತ್ತೋ ಎಂಬ ಕುರಿತು ವಿವರಣೆ ನೀಡಬೇಕು ಎಂದು ಕೇಳಿದೆ. ದಾಖಲೆಯ ಪ್ರಕಾರ, ಆ ಕಟ್ಟಡವನ್ನು ವಾಸಕ್ಕಾಗಿ ಬಳಸಲಾಗುತ್ತಿತ್ತು. ಆದರೆ, ಮಾಧ್ಯಮಗ ವರದಿಯ ಪ್ರಕಾರ, ಆ ಕಟ್ಟಡವನ್ನು ದಿನಕ್ಕೆ 10 ಸಾವಿರ ರು.ಯಂತೆ ಬಾಡಿಗೆ ನೀಡಲಾಗುತ್ತಿತ್ತು. ಬಾಡಿಗೆ ನೀಡುತ್ತಿರುವುದು ಸಾಬೀತಾದರೆ ಕಟ್ಟಡದ ಮಾಲಿಕರು ದಂಡ ಕಟ್ಟಬೇಕಾಗುತ್ತದೆ ಮತ್ತು ಶೇ.50ರಷ್ಟು ನೀಡಲಾಗುತ್ತಿದ್ದ ತೆರಿಗೆ ರಿಯಾಯಿತಿಯನ್ನು ರದ್ದು ಮಾಡಬೇಕಾಗುತ್ತದೆ.
ತಣ್ಣಗೆ ಕುಳಿತಿರುವ ಬುದ್ಧಿಜೀವಿಗಳು : ಯಾವುದೋ ಕೋಮಿನ ಮೇಲೆ ಹಲ್ಲೆಯಾಗಿದ್ದರೆ ಹಲ್ಲಾಗುಲ್ಲಾ ಮಾಡಿ ಭೂಮಿ ಆಕಾಶ ಒಂದು ಮಾಡುತ್ತಿದ್ದ ಬೆಂಗಳೂರಿನ ಸೋಕಾಲ್ಡ್ ಬುದ್ಧಿಜೀವಿಗಳು, ಮಂಗಳೂರು ಹೋಂ ಸ್ಟೇ ಮೇಲೆ ಯುವಕ ಯುವತಿಯರ ಮೇಲೆ ಆದ ಹಲ್ಲೆಯ ಬಗ್ಗೆ ಸೊಲ್ಲೆತ್ತದಿರುವುದು ಕನ್ನಡಿಗರನ್ನು ಭಾರೀ ಕೆರಳಿಸಿದೆ. ಕರ್ನಾಟಕ ಹೈಕೋರ್ಟ್ ಕೂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆಯಿಂದ ನಾವೆಲ್ಲರೂ ತಲೆತಗ್ಗಿಸುವಂತಾಗಿದೆ ಎಂದು ಹೇಳಿದೆ. ಆದರೆ, ಬುದ್ಧಿಜೀವಿಗಳು ಮಾತ್ರ ಗಪ್ ಚಿಪ್. ಏನಾಗಿದೆ ನಮ್ಮ ಬುದ್ಧಿಜೀವಿಗಳಿಗೆ?