ಕೆಎಂಎಫ್ ಸೋಮಶೇಖರ ರೆಡ್ಡಿ ಎಲ್ಲೇ ಇದ್ದರೂ ಬಂಧನ
'ತಾವು ಕರ್ನಾಟಕದ ಘನತೆವೆತ್ತ ಶಾಸಕರು. ಅದರಲ್ಲೂ ಬಿಜೆಪಿಯ ಶಾಸಕರು. ಈ ಮಧ್ಯೆ ಬಿಜೆಪಿ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪೂರಕ ಬಜೆಟ್ ಗೆ ಅನುಮೋದನೆ ಕೋರಿರುವುದರಿಂದ ಪಕ್ಷವು ಬಿಜೆಪಿ ಶಾಸಕರಿಗೆಲ್ಲ ವಿಪ್ ನೀಡಿದೆ. ಹಾಗಾಗಿ ವಿಧಾನಸಭೆಯಲ್ಲಿ ತಮ್ಮ ಉಪಸ್ಥಿತಿ ಅತ್ಯಂತ ಜರೂರಾಗಿದೆ. ಹಾಗಾಗಿಯೇ ACB ಮುಂದೆ ಗೈರು ಹಾಜರಾಗುತ್ತಿರುವುದಾಗಿ' ನೆಪ ಹೇಳುತ್ತಿರುವ ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಯನ್ನು ಕಂಡಲ್ಲಿ ವಶಕ್ಕೆ ತೆಗೆದುಕೊಳ್ಳಲು ACB ನಿರ್ಧರಿಸಿದೆ.
ಅದರೊಂದಿಗೆ ಬಹುಶಃ ಸದ್ಯಕ್ಕೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನೂ ಬಂಧಿಸಿದಂತಾಗುತ್ತದೆ. ಏಕೆಂದರೆ ಪ್ರಕರಣದಲ್ಲಿ ಬಂಧನವಾಗದೆ ಉಳಿದಿರುವ ಏಕೈಕ ಆರೋಪಿ ಅಂದರೆ ಸೋಮಶೇಖರ ರೆಡ್ಡಿ ಮಾತ್ರವೇ. ಅಂದಹಾಗೆ ನಿನ್ನೆ ಸಂಜೆ ನಾಟಕೀಯ ಬೆಳವಣಿಗೆಯೊಂದರಲ್ಲಿ ACB ಪೊಲೀಸರು ಶಾಸಕ ಕಂಪ್ಲಿ ಬಾಬುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಕಂಪ್ಲಿ ಬಾಬು ಜೈಲುಪಾಲಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಸದ್ಯಕ್ಕೆ ಈ ಪ್ರಕರಣಗಳಲ್ಲಿ ನ್ಯಾಯಾಲಯಗಳ ಪರಿಸ್ಥಿತಿ ಹೇಗಿದೆಯೆಂದರೆ...
'ಒಂದು ವೇಳೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ಆರೋಪಿ ಜಾಮೀನಿಗೆ ಅರ್ಹವಾಗಿದ್ದರೂ ಇಲ್ಲದ ಊಸಾಬರಿ ನಮಗ್ಯಾಕೆ ಎಂದು ಆರೋಪಿಗಳು ಒಂದಷ್ಟು ದಿನ ಜೈಲಿನಲ್ಲಿರಲಿ ಬಿಡಿ. ಹೋಗೋದೇನು?' ಎಂಬ ತೀರ್ಮಾನಕ್ಕೆ ಕೋರ್ಟುಗಳು ಬಂದಂತಿವೆ. 'ಆಮೇಲೆ ಪ್ರಕರಣವು ಒಂದು ತಾರ್ಕಿಕ ಅಂತ್ಯಕ್ಕೆ ಬಂದಾಗ ನೋಡಿಕೊಂಡರಾಯಿತು. ಈಗ ಸುಮ್ಮ ಸುಮ್ಮನೆ ಜಾಮೀನು ನೀಡುವುದು... ಆ ಮೇಲೆ, ದುಡ್ ತಗೊಂಡು ಜಾಮೀನು ಕೊಟ್ಟವ್ರೆ ಅನ್ನಿಸಿಕೊಂಡು ಈಗಾಗಲೇ ಜೈಲಿನಲ್ಲಿರುವ ಮೂವರು ಮಹಾಮಹಿಮ ಜಡ್ಜುಗಳ ಪಕ್ಕದ ಜೈಲಿನಲ್ಲಿ ನಾವೇಕೆ ಬಂಧಿಯಾಗಬೇಕು' ಎಂಬ ತೀರ್ಮಾನಕ್ಕೆ ಬಂದಂತಿದೆ ಈ ACB, CBI ಕೋರ್ಟುಗಳು.
ಮತ್ತೆ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿಷಯಕ್ಕೆ ಬರುವುದಾದರೆ ಅವರ ಬಂಧನ ಈಗಾಗಲೇ ವಿಳಂಬವಾಗಿದೆಯಾದರೂ ಸಮಯ ಸಾಧಿಸಿ, ಆತನನ್ನು ಪ್ರಕರಣದಲ್ಲಿ 10ನೆಯವರಾಗಿ ಬಂಧಿಸಲು ACB ಸಜ್ಜಾಗಿದೆ. ಏಕೆಂದರೆ... ಪ್ರಕರಣದ A1 ಆರೋಪಿ ಲಂಚ ತಿಂದು ಜಾಮೀನು ನೀಡಿದ ಜಡ್ಜ್ ಪಟ್ಟಾಭಿ. ಹಾಗೆಯೇ, ಅಷ್ಟೇ ಗುರುತರ ಆರೋಪವಿರುವುದು ಲಂಚ ನೀಡಿದ ವ್ಯಕ್ತಿಯ ಮೇಲೆ. ACB ಮೂಲಗಳ ಪ್ರಕಾರ ಈ ಅಷ್ಟೂ ಲಂಚದ ಹಣವನ್ನು ಹೊಂದಿಸಿದ್ದು ಕೆಎಂಎಫ್ ಸೋಮಶೇಖರ ರೆಡ್ಡಿ. ಈ ನೆಲದ ಕಾನೂನು ಏನು ಹೇಳುತ್ತದೆ ಅಂದರೆ - ಲಂಚ ತೆಗೆದುಕೊಳ್ಳುವುದು ಮತ್ತು ಲಂಚ ನೀಡುವುದು ಸಮಾನ ಅಪರಾಧಗಳು.
ಸದ್ಯಕ್ಕೆ ಸೋಮಶೇಖರ ರೆಡ್ಡಿ ACB ಕಣ್ಣಿಗೆ ಬೀಳದೆ ತಲೆಮರೆಸಿಕೊಂಡಿದ್ದಾರೆ. ಹಾಗೆ ನೋಡಿದರೆ ಕಂಪ್ಲಿ ಬಾಬು ಮತ್ತು ಶಾಸಕ ಸೋಮಶೇಖರ ರೆಡ್ಡಿ ಇಬ್ಬರೂ ಮರೆಯಾಗಿದ್ದರು. ಆದರೆ ತಂತ್ರ ಬದಲಿಸಿದ ಶಾಸಕ ಸೋಮಶೇಖರ ರೆಡ್ಡಿ ಮೊದಲು ಕಂಪ್ಲಿ ಬಾಬುಗೆ ಶರಣಾಗುವಂತೆ ಸೂಚಿಸಿದ್ದಾರೆ. ಅವರ ಬಂಧನವಾದ ತಕ್ಷಣ ಏನೆಲ್ಲ ಬೆಳವಣಿಗೆಗಳಾಗುತ್ತದೋ ನೋಡಿಕೊಂಡು ತಾನೂ ಶರಣಾಗುವುದು ಆತನ ಲೆಕ್ಕಾಚಾರವಾದಂತಿದೆ.
ಅದರೊಂದಿಗೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಾ CBI ಕೋರ್ಟಿನಲ್ಲಿ ಜನಾರ್ದನ ರೆಡ್ಡಿಯನ್ನು 'ಆರ್ಥಿಕ ಭಯೋತ್ಪಾದಕ' ಎಂದು ಬಣ್ಣಿಸಿರುವ CBI ಲಕ್ಷ್ಮಿನಾರಾಯಣ ಅವರ ಕೆಲಸ ಮತ್ತಷ್ಟು ಸಲೀಸಾಗುತ್ತದೆ.