ಪುರುಷತ್ವ ಪರೀಕ್ಷೆಗೆ Time please ಎಂದ ನಿತ್ಯಾನಂದ
ಇದರಿಂದ ಜುಲೈ 30ರಂದು ಬಹುನಿರೀಕ್ಷಿತ ನಿತ್ಯಾನಂದ ಸ್ವಾಮಿಯ ಮೆಡಿಕಲ್ ಟೆಸ್ಟ್ ನಡೆಸುವುದು ಅನುಮಾನವಾಗಿದ್ದು, ನಿತ್ಯಾನಂದ ಸ್ವಾಮಿಯ ಲೀಲೆಗಳ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟಿವೆ.
'ನಿಮ್ಮ ಪುರುಷತ್ವ ಇತ್ಯರ್ಥಪಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಇದೇ 30 ರಂದು ನಗರದ ವಿಕ್ಟೋರಿಯಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿ' ಎಂದು ಪ್ರಕರಣವೊಂದರ ಬೆನ್ನುಹತ್ತಿರುವ ಸಿಐಡಿ ಪೊಲೀಸರು ನಿತ್ಯಾನಂದ ಸ್ವಾಮಿಗೆ ಆಜ್ಞಾಪಿಸಿದ್ದರು. ಇದಕ್ಕೆ ರಾಜ್ಯ ಹೈಕೋರ್ಟ್ ಸಹ ಅನುಮತಿ ನೀಡಿತ್ತು. ಆದರೆ ಸ್ವಾಮಿಗಳು ಈಗ...
'ಆಗಸ್ಟ್ 25ರ ನಂತರ ಯಾವುದೇ ದಿನವಾದರೂ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಸಿದ್ಧವಿದ್ದೇನೆ. ಹಾಗಾಗಿ ನೋಟಿಸ್ ಗೆ ಹೊಸ ದಿನಾಂಕ ನಿಗದಿಪಡಿಸಿ ನಾನು ಹಾಜರಾಗುವೆ' ಎಂದು ಸ್ವಾಮಿಗಳು ಜಿಲ್ಲಾ ಸಿಜೆಎಂ ನ್ಯಾಯಾಲಯಕ್ಕೆ ನಿನ್ನೆ ಅವಲತ್ತುಕೊಂಡಿದ್ದಾರೆ.
ಆಗಸ್ಟ್ 2 ರಂದು ಕೋರ್ಟ್ ಉತ್ತರ: ನಟಿ ರಂಜಿತಾ ಜತೆ ರಾಸಲೀಲೆ ನಡೆಸಿದ ದೂರಿಗೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮಿ, 'ತನ್ನ ದೇಹ ಬೆಳೆದಿದ್ದರೂ ಮನಸ್ಸು ಮತ್ತು ನಡವಳಿಕೆ 6 ವರ್ಷದ ಬಾಲಕನ ರೀತಿಯಲ್ಲಿದೆ. ಇದರಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ತನಗೆ ಸಾಧ್ಯವಿಲ್ಲ' ಎಂದು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿಯ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಅವಕಾಶ ಕೋರಿ ಸಿಐಡಿ ಪೊಲೀಸರು ಕೋರ್ಟ್ ಮೊರೆಹೋಗಿದ್ದರು.
ಟೆಸ್ಟ್ ತಪ್ಪಿಸಿಕೊಳ್ಳಲು ಕೈಲಾಸ ಯಾತ್ರೆ: ಈ ಮಧ್ಯೆ ತಾವು ವೈದ್ಯಕೀಯ ಪರೀಕ್ಷೆಗೀಡಾಗಬೇಕಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗಳು ನಾಳೆ ನಾಳಿದ್ದರಲ್ಲಿ ಕೈಲಾಸ ಯಾತ್ರೆಗೆ ತೆರಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ತಾನು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿದ್ದು, ಜುಲೈ 30ರಂದು ಕೈಲಾಸ ಪರ್ವತದಲ್ಲಿ ತೀರ್ಥಯಾತ್ರೆಯಲ್ಲಿರುವುದರಿಂದ ಅಂದು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದು. ಆಗಸ್ಟ್ 25ವರೆಗೆ ತಮಗೆ ಕಾಲಾವಕಾಶ ನೀಡಬೇಕು. ನಂತರ ಯಾವುದೇ ದಿನಾಂಕವನ್ನು ನಿಗದಿಪಡಿಸಿದರೂ ಅಂದು ಪರೀಕ್ಷೆಗೆ ಹಾಜರಾಗುವುದಾಗಿ ನಿತ್ಯಾನಂದ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಈ ಅರ್ಜಿಯನ್ನು ಆಗಸ್ಟ್ 2 ರಂದು ಕೈಗೆತ್ತಿಕೊಳ್ಳಲಿದೆ.