ಪಿತೃತ್ವ ವಿವಾದ: ತಿವಾರಿ-ರೋಹಿತ್ DNA Matched
ಎನ್ ಡಿ ತಿವಾರಿ ಅವರ ಡಿಎನ್ ಎ ಹಾಗೂ ಅರ್ಜಿದಾರ ರೋಹಿತ್ ಶೇಖರ್ ಅವರ ಡಿಎನ್ ಎ ಪಕ್ಕಾ ಹೋಲಿಕೆ ಹೊಂದಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಟ್ವೀಟ್ಟರಿನಲ್ಲಿ ಈ ಸುದ್ದಿ ಹೊರಬಿದ್ದ ಮೇಲೆ ಎನ್ ಡಿತಿವಾರಿ ಹಾಗೂ ರೋಹಿತ್ ಶೇಖರ್ ನೀಡಿರುವ ಐತಿಹಾಸಿಕ ಹೇಳಿಕೆ ಈ ರೀತಿ ಇದೆ:
#NDTiwari's statement: I have the right to live according to my own wishes, no one has the right to look into my private life.
Rohit Shekhar: I am neither happy nor sad, I will take every lawful right I have been given under law. #NDTiwari
ಡೆಹ್ರಾಡೂನಿನಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾ ನ್ಯಾಯಾಧೀಶ ರಾಜ್ ಕೃಷ್ಣಾ, ಜಿಲ್ಲಾ ಸಿವಿಲ್ ಸರ್ಜನ್ ಬಿ ಸಿ ಪಾಠಕ್, ದೆಹಲಿ ಹೈಕೋರ್ಟ್ನ ಜಂಟಿ ರಿಜಿಸ್ಟ್ರಾರ್ ಹಾಗೂ ಮತ್ತಿತರ ವೈದ್ಯರ ತಂಡದ ಮುಂದೆ ತಿವಾರಿ ರಕ್ತದ ಮಾದರಿ ನೀಡಿದ್ದರು.
ಈ ಸಂದರ್ಭದಲ್ಲಿ, ಅರ್ಜಿದಾರ ರೋಹಿತ್ ಶೇಖರ್ ಮತ್ತು ಆತನ ತಾಯಿ ಉಜ್ವಲ ಶರ್ಮಾ ಅವರು ಸಹ ಉಪಸ್ಥಿತರಿದ್ದರು.
ಎನ್.ಡಿ.ತಿವಾರಿ ಅವರನ್ನು ಒತ್ತಾಯಪೂರ್ವಕವಾಗಿ ಡಿಎನ್ಎ ಪರೀಕ್ಷೆಗೆ ಒಳಪಡಿಸಬಹುದು ಎ.ಕೆ.ಸಿಕ್ರಿ ಮತ್ತು ರಾಜೀವ್ ಸಹಾಯ್ ಎಂಡ್ಲಾ ಅವರಿದ್ದ ದೆಹಲಿ ಹೈಕೋರ್ಟ್ ನ್ಯಾಯಪೀಠ ಆದೇಶ ನೀಡಿತ್ತು. ಈ ರಕ್ತದ ಮಾದರಿಯನ್ನು ಡಿಎನ್ಎ ಪರೀಕ್ಷೆಗಾಗಿ ಹೈದರಾಬಾದ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗೋಪ್ಯವಾಗಿ ಕಳುಹಿಸಬೇಕು ಎಂದು ಕೋರ್ಟ್ ಸೂಚಿಸಿತ್ತು.
ಅಲ್ಲದೆ ಈ ವರದಿ ನ್ಯಾಯಲಯದಲ್ಲಿ ಬಹಿರಂಗವಾಗಬೇಕು. ಈ ಪ್ರಕರಣದ ವರದಿಯ ಪ್ರತಿಯನ್ನು ಯಾವುದೇ ರಾಜಕೀಯ ಪಕ್ಷಗಳಿಗೆ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಪಿತೃತ್ವದ ವಿವಾದದಲ್ಲಿ ಸಿಲುಕಿರುವ ಎನ್ ಡಿ ತಿವಾರಿ, ಡಿಎನ್ ಎ ಪರೀಕ್ಷಾ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸಲು ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ, ದೆಹಲಿ ಹೈ ಕೋರ್ಟ್ ತಿವಾರಿ ಅರ್ಜಿಯನ್ನು ಶುಕ್ರವಾರ (ಜು.27) ವಜಾಗೊಳಿಸಿದ ನ್ಯಾ ರೇವಾ ಖೆತ್ರಪಾಲ್ ಅವರು ಡಿಎನ್ ಎ ವರದಿಯನ್ನು ಬಹಿರಂಗ ಪಡಿಸಿ, ರೋಹಿತ್ ಶೇಖರ್ ಅವರು ಉಜ್ವಲಾ ಶರ್ಮ ಹಾಗೂ ಎನ್ ಡಿ ತಿವಾರಿ ಅವರಿಗೆ ಹುಟ್ಟಿದ ಮಗ ಎಂದು ಪರೀಕ್ಷೆ ಮೂಲಕ ತಿಳಿದು ಬಂದಿದೆ ಎಂದು ಘೋಷಿಸಿದರು. ನಂತರ ವರದಿಯನ್ನು ಯಾವುದೇ ಪಕ್ಷ ಅಥವಾ ಸಂಘಟನೆಗಳಿಗೆ ನೀಡದಂತೆ ರೋಹಿತ್ ಗೆ ಕೋರ್ಟ್ ಎಚ್ಚರಿಕೆ ನೀಡಿತು.
ಡಿಎನ್ ಎ ವರದಿ ಗೌಪ್ಯತೆ ಕಾಯ್ದುಕೊಳ್ಳುವಂತೆ ತಿವಾರಿ ಪರ ವಕೀಲ ಮುಕುಲ್ ಗುಪ್ತಾ ಮಾಡಿದ ಮನವಿಗೆ ರೋಹಿತ್ ಅವರ ಪರ ವಕೀಲ ಅಮಿತ್ ಸಿಬ್ಬಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸತ್ಯ ಆದಷ್ಟು ಬೇಗ ಹೊರಬೀಳುವುದರಿಂದ ನ್ಯಾಯಾಲಯದ ಸಮಯ ಉಳಿತಾಯವಾಗುತ್ತದೆ. ಹಾಗೂ ನನ್ನ ಅರ್ಜಿದಾರರಿಗೆ ನ್ಯಾಯ ದೊರೆಕುತ್ತದೆ ಎಂದು ಹೇಳಿದ್ದರು.
2008ರಿಂದ ಕೋರ್ಟ್ ಮೆಟ್ಟಿಲೇರಿದ ಪಿತೃತ್ವ ವಿವಾದ ಕೊನೆಗೂ ಅಂತ್ಯ ಕಂಡಿದೆ. ಡಿಎನ್ ಎ ವರದಿ ಪಾಸಿಟಿವ್ ಆಗಿರುವುದರಿಂದ ಕಾಂಗ್ರೆಸ್ ನಾಯಕ ತಿವಾರಿಗೆ ತೀವ್ರ ಮುಖಭಂಗವಾಗಿದೆ.