ಆಂಜನೇಯ ದೇಗುಲ ಹುಂಡಿ ತೆರೆಯಲು ಮುಹೂರ್ತ
ಪ್ರಸನ್ನ ಆಂಜನೇಯ ಸ್ವಾಮಿ ಟ್ರಸ್ಟ್ನ ಅಧ್ಯಕ್ಷ ಎಸ್.ವಿ.ಕೃಷ್ಣ ಮೂರ್ತಿ ಮತ್ತು ಸದಸ್ಯರು ಸಲ್ಲಿಸಿದ ರಿಟ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್ ಶಾಂತನ ಗೌಡರ್ ನೇತೃತ್ವದ ಏಕಸದಸ್ಯ ಪೀಠ ಈ ರೀತಿ ಆದೇಶ ನೀಡಿದೆ.
ಜು.28 ರ ಬೆಳಗ್ಗೆ 10 ಘಂಟೆಗೆ ಹೈಕೋರ್ಟ್ ನೇಮಿಸಿದ ವಿಶೇಷ ಆಯುಕ್ತರಾದ ಜಯಕುಮಾರ್ ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ತುಂಬಿರುವ 3 ಹುಂಡಿ ಹಾಗೂ ತುಂಬುತ್ತಿರುವ 4 ಹುಂಡಿ ಸೇರಿದಂತೆ ಒಟ್ಟು 7 ಹುಂಡಿಗಳನ್ನು ತೆರೆಯಬೇಕು. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಹಾಗೂ ಮಹಾಲಕ್ಷ್ಮೀ ಬಡಾವಣೆಯ ಕರ್ನಾಟಕ ಬ್ಯಾಂಕ್ನ ಸಿಬ್ಬಂದಿ ಉಪಸ್ಥಿತರಿರಬೇಕು.
ಹುಂಡಿಯಲ್ಲಿ ಸಿಗುವ ಹಣವನ್ನು ಕರ್ನಾಟಕ ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿಯಾಗಿ ಇಡಬೇಕು. ಎಲ್ಲಾ ಹುಂಡಿಗಳ ಬೀಗದ ಕೀ ಗಳನ್ನು ಟ್ರಸ್ಟ್ ನಿಂದ ವಾಪಾಸ್ ಪಡೆದುಕೊಳ್ಳಬೇಕು. ಈ ಕಾರ್ಯ ನಿರ್ವಹಿಸುವ ಜಯಕುಮಾರ್ ಎಸ್. ಪಾಟೀಲ್ ಅವರಿಗೆ 30 ಸಾವಿರ ರು. ನೀಡಬೇಕು ಹಾಗೂ ಪ್ರಗತಿ ವರದಿಯನ್ನು ಹೈಕೋರ್ಟ್ಗೆ ನೀಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ: ವಾರ್ಷಿಕವಾಗಿ ಸುಮಾರು 1 ಕೋಟಿ ರು.ಗೂ ಅಧಿಕ ಆದಾಯವನ್ನು ಪ್ರಸನ್ನ ವೀರಾಂಜನೇಯ ದೇಗುಲ ಹೊಂದಿದೆ. 22 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಅನೇಕ ಚಲನಚಿತ್ರಗಳಲ್ಲೂ ರಾರಾಜಿಸಿದೆ. 1973ರಲ್ಲಿ ಜಾರಿಗೆ ಬಂದ ದೇಗುಲದ ಟ್ರಸ್ಟ್ 13 ಎಕರೆ ಪ್ರದೇಶ ಸೇರಿದಂತೆ ಇತರೆ ಕಟ್ಟಡಗಳ ನಿರ್ವಹಣೆ ಮಾಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೂಡಾ ಟ್ರಸ್ಟಿಯಾಗಿದ್ದಾರೆ.
1970ರ ಅವಧಿಯಲ್ಲಿ ಮಹಾಲಕ್ಷ್ಮೀ ಬಡಾವಣೆಯಲ್ಲಿ 30 ಅಡಿ ಎತ್ತರದ ಆಂಜನೇಯ ಸ್ವಾಮಿ ಆಕೃತಿಯ ಬಂಡೆ ಸೃಷ್ಟಿಯಾಗಿತ್ತು. ಮುಂದಿನ ದಿನಗಳಲ್ಲಿ ಆ ಬಂಡೆ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನವಾಯಿತು. 1989ರಲ್ಲಿ ಪ್ರಸನ್ನ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಹುಟ್ಟಿಕೊಂಡಿತು.
ದೇವಸ್ಥಾನದ ಎಲ್ಲಾ ಉಸ್ತುವಾರಿಯನ್ನು ಈ ಟ್ರಸ್ಟ್ ನೋಡಿಕೊಳ್ಳುತ್ತಿತ್ತು. ಈ ಟ್ರಸ್ಟ್ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಏ.13 ರಂದು ಟ್ರಸ್ಟ್ ಕಮಿಟಿ ವಿಸರ್ಜಿಸಲಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿ ಹಿರೇಮಠ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಒಂದು ಸುತ್ತೋಲೆ ಹೊರಡಿಸುತ್ತಾರೆ.
ಇದರ ಪ್ರಕಾರ ಪ್ರಸನ್ನ ಆಂಜನೇಯ ಸ್ವಾಮಿ ಯಾವುದೇ ಟ್ರಸ್ಟ್ನ ಆಳ್ವಿಕೆಗೆ ಒಳಪಡುವುದಿಲ್ಲ. ಅದು ಮುಜರಾಯಿ ಇಲಾಖೆಗೆ ಸೇರಿದ್ದು. ಆದ್ದರಿಂದ, ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮುಜರಾಯಿ ಇಲಾಖೆಗೆ ನೀಡುವಂತೆ ಸೂಚಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಟ್ರಸ್ಟ್ ಅಧ್ಯಕ್ಷ ಎಸ್.ವಿ.ಕೃಷ್ಣ ಹಾಗೂ ಸದಸ್ಯರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.