ತಪ್ಪು ಮಾಡಿದ್ರೆ ನನ್ನನ್ನು ಗಲ್ಲಿಗೇರಿಸಿ: ನರೇಂದ್ರ ಮೋದಿ
ಉರ್ದು ಪತ್ರಿಕೆಯೊಂದಕ್ಕೆ (ನಯೀ ದುನಿಯಾ) ಪ್ರಥಮ ಸಂದರ್ಶನ ನೀಡಿರುವ ಮೋದಿ ಅವರು, ತಮ್ಮ ಮೇಲಿನ ಅಪವಾದಗಳನ್ನು ತೊಡೆದುಹಾಕುವ ಪ್ರಯತ್ನದಲ್ಲಿ ಮೇಲಿನ ಮಾತನ್ನು ಹೇಳಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ ಮೋದಿ ವಿರೋಧಿಯಾದ ಸಮಾಜವಾದಿ ಪಕ್ಷದ ಮಾಜಿ ರಾಜ್ಯ ಸಭಾ ಸದಸ್ಯ, ಪತ್ರಿಕೆಯ ಸಂಪಾದಕ ಶಾಹಿದ್ ಸಿದ್ದಿಖಿ ಅವರು ಈ ಮುಖಪುಟ ಸಂದರ್ಶನ ಮಾಡಿದ್ದಾರೆ. ಆರು ಪುಟಗಳ ಈ ಲೇಖನದಲ್ಲಿ ಗೂಧ್ರೋತ್ತರ ಘಟನಾವಳಿ, ಗುಜರಾತಿನಲ್ಲಿ ಮುಸ್ಲಿಮರ ಸ್ಥಿತಿಗತಿ ಮತ್ತಿತರ ಸೂಕ್ಷ್ಮ ವಿಷಯಗಳ ಮೇಲೆ ಸಿದ್ದಿಖಿ ಬೆಳಕು ಚೆಲ್ಲಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಮೋದಿ ಅವರ ಕಡು ವಿರೋಧಿ, ಬಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರೇ ಮೋದಿಯ ಸಂದರ್ಶನ ಮಾಡುವಂತೆ ಸಿದ್ದಿಖಿಗೆ ಸೂಚಿಸಿದರಂತೆ. 'ಗೋಧ್ರಾ ನಂತರದ ಘಟನಾವಳಿಗಳು ಮತ್ತು ಗುಜರಾತಿನಲ್ಲಿ ಮುಸ್ಲಿಮರ ಬಗ್ಗೆ ಮೋದಿ ಅವರು ಅದೂ ಉರ್ದು ಪತ್ರಿಕೆಗೆ ಸಂದರ್ಶನ ನೀಡುತ್ತಾರೆ ಎಂದೆಣೆಸಿರಲಿಲ್ಲ' ಎಂದು ಸಂಪಾದಕ ಸಿದ್ದಿಖಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ಗೋಧ್ರಾ ಹತ್ಯಾಕಾಂಡದ ಬಗ್ಗೆ ರಾಷ್ಟ್ರೀಯ ಚಾನೆಲ್ಲೊಂದರಲ್ಲಿ ನೇರ ಸಂದರ್ಶನಕ್ಕೆ ಕುಳಿತಿದ್ದ ಮುಖ್ಯಮಂತ್ರಿ ಮೋದಿ ಅವರು ಸಂದರ್ಶಕ ಅಹಿತಕರ ಪ್ರಶ್ನೆ ಕೇಳಿದಾಗ ಸಿಟ್ಟಿಗೆದ್ದು ಸೀದಾ ಹೊರನಡೆದಿದ್ದರು ಎಂಬುದು ಜ್ಞಾಪಕಾರ್ಹ.
ಇದೇ ಸಂದರ್ಶನವನ್ನು ನೆಪವಾಗಿಸಿಕೊಂಡು ಮೋದಿ-ಮುಲಾಯಂ ಹತ್ತಿರಹತ್ತಿರವಾದರಾ? ಎಂಬ ಪ್ರಶ್ನೆಗೆ ಸಿದ್ದಿಖಿ ನಕಾರಾತ್ಮಕವಾಗಿ ತಲೆಯಾಡಿಸಿದ್ದಾರೆ. ಈ ಸಂದರ್ಶನ ಸಮಾಜವಾದಿ ಪಕ್ಷ ಮತ್ತು ಮೋದಿ ಅವರನ್ನು ಬೆಸೆಯುವದಕ್ಕೆ ಮಾಡಿಲ್ಲ. ಮೊದಲು ನಾನು ಪತ್ರಕರ್ತ. ಆನಂರವಷ್ಟೇ ರಾಜಕೀಯ ಎಂದಿದ್ದು ತಮ್ಮ ಸಂದರ್ಶನದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅಂದಹಾಗೆ, ಸಿದ್ದಿಖಿ ಅವರು ಮೊದಲು ಕಾಂಗ್ರೆಸ್, ನಂತರ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡವರು.