ಕೇವಲ ಐದೇ ಜಿಲ್ಲೆಗಳಲ್ಲಿ ಉತ್ತಮ ಮಳೆ
ಅದರಲ್ಲೂ ನೈಋತ್ಯ ಮುಂಗಾರು ಐದು ಜಿಲ್ಲೆಗಳಲ್ಲಷ್ಟೇ ವಾಡಿಕೆಯಂತೆ ಸಾಮಾನ್ಯವಾಗಿತ್ತು. 25 ಜಿಲ್ಲೆಗಳಲ್ಲಿ ತೀರಾ ಕ್ಷೀಣವಾಗಿತ್ತು. ಎರಡೇ ಜಿಲ್ಲೆಗಳಲ್ಲಿ ಈ ಮಳೆ ಧೋ ಎಂದು ಬಿರುಸಾಗಿ ಸುರಿದಿದೆ. 17 ಜಿಲ್ಲೆಗಳಲ್ಲಿ ತುಂಬಾ ತೆಳುವಾದ ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ (ಮಂಗಳವಾರಕ್ಕೆ) ಶೇ. 25 ಹೋಬಳಿಗಳಲ್ಲಿ 2.5 ಮಿಮೀ ಮಳೆಯಾಗಿದೆಯಷ್ಟೆ. ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರದಲ್ಲಿ ಗರಿಷ್ಠ 77.5 ಮಿಮೀ ಮಳೆಯಾಗಿದೆ ಎಂದು ರಾಜಧಾನಿಯಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ (KSNDMC) ತಿಳಿಸಿದೆ.
ಉತ್ತರ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಸಾಧಾರಣದಿಂದ ಭರ್ಜರಿ ಮಳೆಯಾಗಿದೆ. ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ತುಸು ಹೆಚ್ಚೇ ಅನಿಸುವಷ್ಟು ವ್ಯಾಪಕ ಮಳೆಯಾಗಿದೆ. ದಾವಣಗೆರೆ ಮತ್ತು ಬೀದರಿನಲ್ಲಿ ಸಾಧಾರಣ, ತುಂತುರು ಮಳೆಯಾಗಿದೆ.
ಬಿಜಾಪುರ, ಗುಲ್ಬರ್ಗಾ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ಯಾದಗಿರಿ, ಬೆಳಗಾವಿ, ಧಾರವಾಡ, ಚಿತ್ರದುರ್ಗ, ರಾಯಚೂರು, ತುಮಕೂರು ಮತ್ತು ಗದಗದಲ್ಲಿ ಹೆಚ್ಚು ಮಳೆಯಾಗಿದೆ. ಜೂನ್ 1 ರಿಂದ ಜುಲೈ 23ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಶೇ. 39ರಷ್ಟು ಕೊರತೆ ಮಳೆಯಾಗಿದೆ. 412 ಮಿಮೀ ಮಳೆಯಾಗಬೇಕಿದ್ದ ಕಡೆ 251 ಮಿಮೀ ಮಾತ್ರವೇ ಮಳೆಯಾಗಿದೆ.