ಗುಟ್ಕಾ ನಿಷೇಧಿಸಿದರೆ ಸಾಲದು; ಸಿಗರೇಟು ನಿಷೇಧಿಸಿ
ವಿಷಯ ಏನಪಾ ಅಂದರೆ, ಪಾನ್ ಮಸಾಲಾ, ಗುಟ್ಕಾ ಮುಂತಾದ ತಂಬಾಕು ಸೇವನೆ ಪದಾರ್ಥಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ವಿತರಣೆಯ ಮೇಲೆ ನಿಷೇಧ ಹೇರುವಂತೆ ಕೋರಿ ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಸಲಾಗಿದೆ. ಈ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಹಾಗಾಗಿ, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡವೆಂದು ಸರಕಾರಕ್ಕೆ ಕ್ಯಾಂಪ್ಕೊ ಮನವಿ ಮಾಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ (ಮಾರಾಟದ ಮೇಲೆ ನಿಷೇಧ ಮತ್ತು ನಿಯಂತ್ರಣ)-2011ರ ಅನುಸಾರ ಮಧ್ಯ ಪ್ರದೇಶ ಸರಕಾರ ಮತ್ತು ಕೇರಳ ಸರಕಾರಗಳು ತನ್ನ ಅಧಿಕಾರವನ್ನು ಬಳಸಿ ಈ ಉತ್ಪನ್ನಗಳನ್ನು ನಿಷೇಧಿಸಿವೆ.
ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಪಾನ್ ಪಸಾಲಾದಲ್ಲಿ ತಂಬಾಕು ಅಂಶ ಇರುವುದಿಲ್ಲ. ಇನ್ನು ಗುಟ್ಕಾದಲ್ಲಿ ಶೇ. 80ರಷ್ಟು ಅಡಿಕೆ ಇರುತ್ತದೆ. ಅಂತಹುದರಲ್ಲಿ ಸಿಗರೇಟ್, ಬೀಡಿ ಮತ್ತು ಚುಟ್ಟಾವನ್ನು ನಿಷೇಧಿಸದ ಹೊರತು ಕೇವಲ ಪಾನ್ ಮಸಾಲಾ ಮತ್ತು ಗುಟ್ಕಾವನ್ನು ನಿಷೇಧಿಸುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟರು.
ತಂಬಾಕು ಆರೋಗ್ಯಕ್ಕೆ ಹಾನಿಕರವಾಗಿದ್ದರೆ ಗುಟ್ಕಾದಿಂದ ಆ ಅಂಶವನ್ನು ತೆಗೆದುಹಾಕುವುದು ಸೂಕ್ತ. ಅದನ್ನು ಬಿಟ್ಟು ಇಡೀ ಗುಟ್ಕಾವನ್ನೇ ಒಂದೇ ಏಟಿಗೆ ನಿಷೇಧಿಸಿದರೆ ಹೇಗೆ? ಒಂದು ವೇಳೆ ಗುಟ್ಕಾ ನಿಷೇಧ ಅನಿವಾರ್ಯವೇ ಆದಲ್ಲಿ ಮೊದಲು ತಂಬಾಕು ಬೆಳೆಗಾರರಿಗೆ ಸಮಂಜಸ ಪರಿಹಾರ ಪ್ಯಾಕೇಟಜ್ ವಿತರಿಸಿ, ಅವರನ್ನು ಸಂರಕ್ಷಿಸಿದ ನಂತರ ಹಂತ ಹಂತವಾಗಿ ನಿಷೇಧಿಸುವುದು ಒಳಿತು ಎಂದೂ ಕೊಂಕಾಡಿ ಪದ್ಮನಾಭ ಅವರು ಆಗ್ರಹಿಸಿದ್ದಾರೆ.
ರೈತರ ಗಮನಕ್ಕೆ: ಕ್ಯಾಂಪ್ಕೊ ಸಂಸ್ಥೆಯು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ನವೆಂಬರ್ 2 ರಿಂದ 4 ರವರೆಗೆ ಕೃಷಿ ಯಂತ್ರ ಮೇಳವನ್ನು ಆಯೋಜಿಸುತ್ತಿದೆ. ಕರ್ನಾಟಕ ಮತ್ತು ಕೇರಳದಿಂದ ಸುಮಾರು 50,000 ರೈತರು ಈ ಮೂರು ದಿನಗಳ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.