ಪದೇ ಪದೇ ಸಿಎಂ ಬದಲಾವಣೆ, ಕೋಟಿಗಟ್ಟಲೆ ಖರ್ಚು
ಬೆಂಗಳೂರು, ಜು.24: ಪದೇ ಪದೇ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುವುದರಿಂದ ರಾಜ್ಯದ ಜನತೆಗೆ ಮುಜುಗರ ತಂದರೆ, ಸರ್ಕಾರಿ ಅಧಿಕಾರಿಗಳಿಗಂತೂ ಬಲು ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಬದಲಾಗುತ್ತಿದ್ದಂತೆ ಕಚೇರಿ, ಸಾರಿಗೆ, ಜಾಹೀರಾತು ಎಲ್ಲವೂ ಬದಲಾಗಬೇಕಾಗುತ್ತದೆ. ಅದು ಆದಷ್ಟು ಬೇಗ ಮುಗಿಯಬೇಕು ಇಲ್ಲದಿದ್ದರೆ, ಅಲ್ಲಿ ಹೋರ್ಡಿಂಗ್ ನೋಡಿದೆ ಇನ್ನೂ ಹಳೆ ಸಿಎಂ ಫೋಟೋನೇ ಇದೆ ಎಂದು ಜನ ನಗೆಯಾಡುತ್ತಾರೆ. ಇದರ ಪರಿಣಾಮ ಸರ್ಕಾರಿ ಅಧಿಕಾರಿಗಳ ಮೇಲೆ ಬೀಳುತ್ತದೆ.
ಉದಾಹರಣೆಗೆ ವಾರ್ತಾ ಇಲಾಖೆ ಈಗ ಡಿವಿ ಸದಾನಂದ ಗೌಡರ ಭಾವಚಿತ್ರ ಬದಲಿಸಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಲಗತ್ತಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಈ ಕಾರ್ಯಕ್ಕೆ ಏನಿಲ್ಲವೆಂದರೂ ಸುಮಾರು 5 ಕೋಟಿ ರು ಖರ್ಚಾಗುತ್ತದೆ.
ರಾಜ್ಯದೆಲ್ಲೆಡೆ ಸುಮಾರು 1,721 ಸರ್ಕಾರಿ ಹೋರ್ಡಿಂಗ್ ಜಾಹೀರಾತುಗಳಿದೆ. ಈ ಹೋರ್ಡಿಂಗ್ ಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಬದಲಾಯಿಸಲು ಸ್ವಲ್ಪ ಕಾಲಾವಧಿ ಹಿಡಿಯುತ್ತದೆ. ಬರೀ ಹೋರ್ಡಿಂಗ್ ಬದಲಾವಣೆಗೆ ಸುಮಾರು 1.25 ಕೋಟಿ ರು ತಗುಲುತ್ತದೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ವಿಶು ಕುಮಾರ್ ಹೇಳಿದ್ದಾರೆ.
ಇದಲ್ಲದೆ ಸರ್ಕಾರಿ ಕಡತ, ಪುಸ್ತಕ, ಪಾಂಪ್ಲೇಟ್, ಯೋಜನೆಗಳ ಜಾಹೀರಾತುಗಳಲ್ಲಿ ಸಿಎಂ ಭಾವಚಿತ್ರ ಹಾಗೂ ಮಾಹಿತಿ ಬದಲಾಗಬೇಕಾಗುತ್ತದೆ. ಇದಕ್ಕೆ ಪ್ರತ್ಯೇಕ ಸಿಬ್ಬಂದಿಯಾಗಲಿ, ಸಮಯವಾಗಲಿ ಮೀಸಲಿರುವುದಿಲ್ಲ. ಇರುವ ಸಿಬ್ಬಂದಿಗಳು ಹಾಗೂ ಸಹಾಯಕರ ನೆರವಿನಿಂದ ಬದಲಾವಣೆ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಈ ಕಾರ್ಯ ವಿಳಂಬವಾದರೆ ಇಲಾಖೆ ಹಾಗೂ ಸರ್ಕಾರ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ವಿಶು ಕುಮಾರ್ ಹೇಳಿದರು.
ಇದು ಕೇವಲ ಒಂದು ಇಲಾಖೆಯ ಅನುಭವ. ಉಳಿದಂತೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಕೃಷಿ ಇಲಾಖೆಗಳಲ್ಲಿ ಕೂಡಾ ಭಿತ್ತಿಚಿತ್ರ, ಭಾವ ಚಿತ್ರ ಹಾಗೂ ದಾಖಲಾತಿ ಬದಲಾವಣೆಯಾಗಬೇಕಾಗುತ್ತದೆ. ಜಾಹೀರಾತು ಫಲಕಗಳನ್ನು ಬದಲಿಸಬಹುದಾದರೂ, ಪುಸ್ತಕ ಹಾಗೂ ಹಲವು ಕಡತಗಳನ್ನು ಮರು ಮುದ್ರಣ ಮಾಡಲೇಬೇಕು ಇದರ ಅಂದಾಜು ವೆಚ್ಚ 5 ಕೋಟಿ ರು ಮೀರುತ್ತದೆ.
ಈ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಟೆಂಡರ್ ಕರೆಯಲಾಗುತ್ತದೆ. ಸಿಎಂ ಸೀಟು ಬದಲಾಯಿಸಿದ್ದಷ್ಟು ಸುಲಭವಾಗಿ ಅವರ ಭಾವಚಿತ್ರ ಬದಲಿಸಲು ಬರುವುದಿಲ್ಲ. ಬದಲಾವಣೆಯಾದರೂ ಅದರ ವೆಚ್ಚ ಕೋಟಿ ರು ದಾಟುತ್ತದೆ ಎಂಬುದು ನಂಬಲೇಬೇಕಾದ ಸತ್ಯ.