ಭ್ರಷ್ಟ ಮಂತ್ರಿಗಳ ಕುರಿತು ಬೇಳೂರು ಗೋಪಾಲಕೃಷ್ಣ
ಇವು, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಪತ್ರಕರ್ತ ಲಕ್ಷ್ಮಣ್ ಹೂಗಾರ್ ನಡೆಸಿಕೊಡುವ ಚಕ್ರವ್ಯೂಹ (ಜು. 23ರ ಸಂಚಿಕೆ) ಕಾರ್ಯಕ್ರಮದಲ್ಲಿ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉದುರಿಸಿರುವ ನುಡಿಮುತ್ತುಗಳು. ನನಗೆ ಪಕ್ಷದ ಎಲ್ಲಾ ಮುಖಂಡರು ಒಂದೇ. ನಾನು ಯಾವ ಬಣಕ್ಕೂ ಸೇರಿದವನಲ್ಲ. ಪಕ್ಷದ ಮುಖಂಡರ ಮನೆಗೆ ಊಟಕ್ಕೂ, ತಿಂಡಿಗೋ ಹೋದರೆ ನಾನು ಆ ಬಣದವನೆಂದು ಹೇಳಲಾಗದು ಎಂದು ತಮ್ಮ ರಾಜಕೀಯ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕಾಮುಕ ಎನ್ನುವ ಪದವನ್ನು ನಿರ್ದಿಷ್ಟವಾಗಿ ಯಾರನ್ನೂ ಗುರಿಯಾಗಿ ಇಟ್ಟುಕೊಂಡು ಹೇಳಿದ್ದಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನನ್ನ ಸಹದ್ಯೋಗಿಗಳು ಯಾಕೆ ನೋಡುತ್ತಾರೋ ನನಗೆ ತಿಳಿಯದು. ನನ್ನ ಬೇಡಿಕೆ ಇಷ್ಟೇ, ಕಳಂಕಿತ ಸಚಿವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ಸಿಗಬಾರದು. ನನ್ನ ಬೇಡಿಕೆ ಈಡೇರುವವರೆಗೂ ಕೇಂದ್ರದ ವರಿಷ್ಠರ ಎದುರಲ್ಲಿ ನಾನು ಹೋರಾಟ ನಡೆಸುತ್ತೇನೆ ಎಂದು ಬೇಳೂರು ಎಚ್ಚರಿಸಿದ್ದಾರೆ.
ಸಚಿವ ರಾಮದಾಸ್ ಭಿನ್ನಮತೀಯ ಚಟುವಟಿಕೆಗೆ ತುಪ್ಪ ಸುರಿದವನು. ಪಕ್ಷದ ಭಿನ್ನಮತೀಯ ಚಟುವಟಿಕೆ ತಾರಕಕ್ಕೇರಿದ್ದ ಸಮಯದಲ್ಲಿ ಎಲ್ಲಾ ಬಣಗಳನ್ನು ಭೇಟಿ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ಅಂಥವರಿಂದ ನಾನು ರಾಜಕೀಯ ಪಾಠ ಕಲಿಯಬೇಕಾಗಿಲ್ಲ ಎಂದು ಸಚಿವರನ್ನು ಬೇಳೂರು ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ರಾಜಕೀಯ ಗುರುಗಳು ಬಂಗಾರಪ್ಪನವರು. ಅವರಿಂದ ನಾನು ರಾಜಕೀಯ ಕಲಿತೆ ಮತ್ತು ಇಷ್ಟು ಎತ್ತರಕ್ಕೆ ಬೆಳೆತೆ. ಯಡಿಯೂರಪ್ಪನವರು ಸೇರಿ ನಮ್ಮ ಪಕ್ಷದ ಎಲ್ಲಾ ಹಿರಿಯ ಮುಖಂಡರು ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕಾಗಿತ್ತು. ಅವರು ಒಬ್ಬ ಸಜ್ಜನ ರಾಜಕಾರಿಣಿ. ಕರಾವಳಿ ಭಾಗದಲ್ಲಿ ಉತ್ತಮ ಹೆಸರನ್ನು ಹೊಂದಿದವರು, ಅವರ ರಾಜೀನಾಮೆ ವೈಯಕ್ತಿಕವಾಗಿ ನೋವು ತಂದಿದೆ ಎಂದು ಬೇಳೂರು ಅಭಿಪ್ರಾಯಪಟ್ಟಿದ್ದಾರೆ.
ಹೊಸಬರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಿರುವುದಕ್ಕೆ ನನ್ನ ತೀವ್ರ ವಿರೋಧವಿದೆ. ಪುಟ್ಟಸ್ವಾಮಿಯವರಿಗೆ ಯಾಕೆ ಸ್ಥಾನ ನೀಡಿದರು? ಇದು ನಮ್ಮ ಪಕ್ಷ ಮಾಡಿದ ದೊಡ್ಡ ತಪ್ಪು. ಬೇರೆ ಯೋಗ್ಯರಿರಲಿಲ್ಲವೇ? ಎಂದು ಪ್ರಶ್ನಿಸಿರುವ ಅವರು, ಸದಾನಂದ ಗೌಡ ಅವರನ್ನು ಸ್ಥಾನದಿಂದ ಕೆಳಗಿಳಿಸಿರುವುದು ಸಾರ್ವಜನಿಕವಾಗಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಸದಾನಂದ ಗೌಡರಿಗೆ ರಾಜ್ಯಾದ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ನನ್ನ ಆಗ್ರಹ ಎಂದು ಬೇಳೂರು ವಾದ ಮಂಡಿಸಿದ್ದಾರೆ.