ಯಡಿಯೂರಪ್ಪ ನಿಮ್ ಸರ್ಟಿಫಿಕೇಟ್ ನನ್ಗೆ ಬೇಕಿಲ್ಲ:ಸದಾನಂದ
ಹೌದು, 'ತಮ್ಮದೇ ಸರಕಾರ ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ' ಎಂದು ನಿನ್ನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸುಮಾರು 1 ಗಂಟೆ ಕಾಲ ಅಧಿವೇಶನದ ವೇಳೆ ಹರಿಹಾಯ್ದರು.
ಭುಜಮುಟ್ಟಿ ನೋಡಿಕೊಂಡ ಸದಾನಂದ: ಆದರೆ ಭುಜಮುಟ್ಟಿ ನೋಡಿಕೊಂಡಿರುವ ಡಿವಿ ಸದಾನಂದ ಗೌಡರು ' ರಾಜ್ಯದ ಬರ ಪರಿಸ್ಥಿತಿಯನ್ನು ನನ್ನ ಅವಧಿಯಲ್ಲಿ ಸಮರ್ಥವಾಗಿ ನಿರ್ವಹಿಸಿದ್ದೇನೆ. ಈ ಬಗ್ಗೆ ಕೇಂದ್ರ ಸರಕಾರವೇ (ವಿಜಯಕುಮಾರ್ ಹಾಗೂ ಶರ್ಮಾ ನೇತೃತ್ವದ ಎರಡು ಅಧ್ಯಯನ ತಂಡಗಳು) ಸೈ ಎಂದಿದೆ. ಅಂತಹುದರಲ್ಲಿ ಇನ್ನೊಬ್ಬರ ಹೇಳಿಕೆಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಯಡಿಯೂರಪ್ಪ ಪ್ರಲಾಪಕ್ಕೆ ತಿರುಗೇಟು ನೀಡಿದ್ದಾರೆ.
ಇಲ್ಲಿನ ಸರಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ರಾಜ್ಯದ 123 ತಾಲೂಕುಗಳಲ್ಲಿ ತಲೆದೋರಿದ ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ನೆಮ್ಮದಿ ತನಗಿದೆ' ಎಂದು ಬೆನ್ನುತಟ್ಟಿಕೊಂಡರು.
ಅಷ್ಟಕ್ಕೇ ಸಮಾಧಾನವಾಗದ ಡಿವಿಎಸ್, 'ಮುಖ್ಯಮಂತ್ರಿ ಸ್ಥಾನ ಬಯಸದೇ ಬಂದ ಭಾಗ್ಯ. ತನಗೆ ದೊರಕಿದ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ನಿರ್ವಹಿಸಿದ್ದೇನೆ. ಇದರ ಮೌಲ್ಯ ಮಾಪನವನ್ನು ಜನರು ಮಾಡಬೇಕೇ ವಿನಃ ಒಬ್ಬ ಜನಪ್ರತಿನಿಧಿಯಲ್ಲ (ಅಂದರೆ ಯಡಿಯೂರಪ್ಪ). ಅತ್ಯಂತ ಅಲ್ಪಾವಧಿಯಲ್ಲಿ ಅನುಷ್ಠಾಣಗೊಂಡ 'ಸಕಾಲ' ಯೋಜನೆ ಅಧಿಕಾರಿಗಳ ಭ್ರಷ್ಟಾಚಾರ ತಡೆಗೆ ರಾಮಬಾಣ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನಸ್ನೇಹಿ ಯೋಜನೆಯ ಪ್ರತಿರೂಪ' ಎಂದು ಸಂತಸದಿಂದ ನುಡಿದರು.
ಗಮನಾರ್ಹವೆಂದರೆ ಯಡಿಯೂರಪ್ಪ ಅವರು 'ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದು ಪದೇ ಪದೇ ದೆಹಲಿಯತ್ತ ಬೆರಳು ತೋರಿಸಲಾಗುತ್ತಿದೆ. ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರಕ್ಕೆ, ಸಂಕಷ್ಟದಲ್ಲಿರುವ ರೈತರಿಗಾಗಿ ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ಏನು ಧಾಡಿ' ಎಂದು ನೇರವಾಗಿ ಸದಾನಂದರನ್ನೇ ತರಾಟೆಗೆ ತೆಗೆದುಕೊಂಡಂತಿತ್ತು.
ಇದಂತೂ, ಮಹತ್ವಾಕಾಂಕ್ಷಿ ಲಕ್ಷ ಕೋಟಿ ರುಪಾಯಿ ಬಜೆಟ್ ಅನ್ನು ತಾನು ಮಂಡಿಸಲಿಲ್ಲವಲ್ಲಾ ಎಂಬ ದುಃಖದೊಂದಿಗೆ ಯಡಿಯೂರಪ್ಪ ಸದಾನಂದರ ಮೇಲೆ ದಾಳಿ ಮಾಡಿದರು ಎಂಬುದು ಸುಸ್ಪಷ್ಟ. ಒಟ್ಟಿನಲ್ಲಿ, 'ಸದಾನಂದ ಗೌಡರ 343 ದಿನಗಳ ಆಡಳಿತ ವೈಖರಿಯನ್ನು' ಝಾಡಿಸುವ ಒಳಮರ್ಮದೊಂದಿಗೆ ಯಡಿಯೂರಪ್ಪ ಬರದ ಸ್ಥಿತಿಗತಿಯನ್ನು ನೆಪವಾಗಿಸಿಕೊಂಡರು ಎಂಬುದು ಸುಸ್ಪಷ್ಟವಾಗಿದೆ.
ಈ ಮಧ್ಯೆ, 'ರಾಷ್ಟ್ರಪತಿ ಚುನಾವಣೆ ವೇಳೆ ಅಡ್ಡ ಮತದಾನ, ಅದಕ್ಕೂ ಮುನ್ನ ಉಪ ಚುನಾವಣೆಗಳಲ್ಲಿ ಸೋತಿದ್ದು ಸೇರಿದಂತೆ ನಿಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಅಪವ್ಯಸನ/ಅಚಾತುರ್ಯಗಳಾಗಿವೆ. ಹೀಗಾಗಿ, ವಸಿ ವಿಚಾರಿಸ್ಕೋ ಬೇಕು ಬನ್ನಿ' ಎಂದು ಸದಾನಂದಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ಆದ್ದರಿಂದ ಸದಾನಂದರು ಇಂದು ಬೆಳಗ್ಗೆ ದೆಹಲಿ ವಿಮಾನ ಹತ್ತಿದ್ದಾರೆ. ಆದರೆ 'ವರಿಷ್ಠರ ಬುಲಾವ್ ಮೇರೆಗೆ ತಾನು ದಿಲ್ಲಿಗೆ ಹೋಗುತ್ತಿಲ್ಲ. ಕರ್ನಾಟಕ ಭವನದಲ್ಲಿರುವ ನನ್ನ ಲಗೇಜ್ ತರಲು ಹೋಗುತ್ತಿದ್ದೇನೆ ಅಷ್ಟೇ ಎಂದಿರುವುದು' ಸಾಕಷ್ಟು ಕುತೂಹಲ ಕೆರಳಿಸಿದೆ. ನಿತಿನ್ ಗಡ್ಕರಿ, ಧರ್ಮೇಂದ್ರ ಪ್ರಧಾನ್ ಅಡ್ವಾಣಿ ಮುಂತಾದ ನಾಯಕರನ್ನು ಸದಾನಂದರು ಸಾಲುಸಾಲಾಗಿ ಭೇಟಿ ಮಾಡಲಿದ್ದಾರೆ.