ಈಶ್ವರಪ್ಪಗೆ ಉಪ್ಪು ನೀರು ಕುಡಿಸಿದ ಗ್ರಾಮಸ್ಥರು
ಭಾನುವಾರ (ಜು 22) ಐಮಂಗಲ ಕೆರೆಯ ಬೋರ್ವೆಲ್ ಹಾಗೂ ಕಲ್ಲಹಟ್ಟಿಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ವೀಕ್ಷಿಸಿದ ನಂತರ ಹಿರಿಯೂರು ಪಟ್ಟಣಕ್ಕೆ ತೆರಳುತ್ತಿದ್ದಾಗ ಗ್ರಾಮದ ಮಹಿಳೆಯರು ಈಶ್ವರಪ್ಪ ಅವರಿಗೆ ಮುತ್ತಿಗೆ ಹಾಕಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಕೊಡ, ಲೋಟ, ಚೊಂಬು ಎಲ್ಲದರಲ್ಲೂ ಪ್ರತಿದಿನ ತಾವು ಕುಡಿಯುವ ನೀರನ್ನು ತೋರಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲು ಈ ನೀರನ್ನು ನೀವು ಕುಡಿಯಿರಿ ಬುದ್ದಿ. ಅದರಲ್ಲಿ ವಿಷ ಏನೂ ಹಾಕಿಲ್ಲ. ನಾವು ದಿನಾ ಕುಡಿಯೋ ನೀರು ಇದೆ. ಮೂರು ದಿನಗಳಿಂದ ನೀರು ಬಿಟ್ಟಿಲ್ಲ ಸ್ವಾಮಿಯವ್ರಾ..ಸುಮ್ಕೆ ಮೋಟಾರ್ ಹಾಳಾಗಿದೆ ಅಂತಾ ಕಥೆ ಹೇಳ್ತಾರೆ. ಈಗಾ ನೀವು ಬರ್ತೀರಾಂತ ನೀರು ಬಿಟ್ಟಿದಾರೆ.
ಊರಲ್ಲಿ ಟ್ಯಾಂಕ್ ಇಲ್ಲ. ವಾರಕ್ಕೊಮ್ಮೆ ಟ್ಯಾಂಕರ್ ನಲ್ಲಿ ನೀರು ಬರುತ್ತೆ. ದಿನಾ ಈ ಫ್ಲೋರೈಡ್ ಅಂಶ ಇರೋ ನೀರನ್ನು ಹೇಗೆ ಕುಡಿಯೋದು ನೀವೇ ಹೇಳಿ ಎಂದು ಈಶ್ವರಪ್ಪ ಅವರನ್ನು ಗ್ರಾಮದ ಮಹಿಳೆಯರು ಪ್ರಶ್ನಿದ್ದಾರೆ.
ಇದರಿಂದ ಗಲಿಬಿಲಿಗೊಂಡ ಈಶ್ವರಪ್ಪ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಈಗಾಗಲೇ ಈ ಊರಲ್ಲಿ ನಾಲ್ಕು ಕೊಳವೆ ಬಾವಿಯನ್ನು ಕೊರೆಯಲಾಗಿದೆ.
ಶುದ್ದ ನೀರು ಅಕ್ಕಪಕ್ಕ ಎಲ್ಲೂ ಸಿಗುತ್ತಿಲ್ಲ. ಇಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿ ಸಿಹಿನೀರು ದೊರೆತಿದೆ. ಅಲ್ಲಿಂದ ನೀರು ಸರಬರಾಜು ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂಗೆ ಉತ್ತರಿಸಿದ್ದಾರೆ.
ಅಧಿಕಾರಿಗಳ ಉತ್ತರಕ್ಕೆ ಗ್ರಾಮದ ಮಹಿಳೆಯರು ವಿರೋಧ ವ್ಯಕ್ತ ಪಡಿಸಿದರು. ತಮ್ಮ ಅಹವಾಲುಗಳನ್ನು ಹೇಳುತ್ತಲೇ ಇದ್ದ ಗ್ರಾಮಸ್ಥರನ್ನು ಸಮಾಧಾನ ಪಡಿಸುವಲ್ಲಿ ಅಧಿಕಾರಿಗಳು, ಸಂಸದ ಜನಾರ್ದನ ಸ್ವಾಮಿ ವಿಫಲರಾದರು.
ಆಗ ಜಿಲ್ಲಾಧಿಕಾರಿಗಳಿಂದ ವಿವರಣೆ ಪಡೆದ ಈಶ್ವರಪ್ಪ ಇನ್ಮುಂದೆ ದಿನಕ್ಕೆ ಒಂದು ಬಾರಿಯಂತೆ ಸಿಹಿ ನೀರು ಟ್ಯಾಂಕರ್ ಬರುವ ವ್ಯವಸ್ಥೆ ಆಗುತ್ತೆ. ನಾಳೆಯಿಂದಲೇ ಈ ಕೆಲಸ ಆರಂಭವಾಗುತ್ತೆ ಎಂದು ಭರವಸೆ ನೀಡಿ ಅಲ್ಲಿಂದ ಹೊರಟರು.