ರಾಷ್ಟ್ರಪತಿ ಭವನ, ಅಧ್ಯಕ್ಷ ಮಹೋದಯರ ಭವ್ಯ ರೆಸಾರ್ಟ್
ಭಾರತ ಸ್ವಾತಂತ್ರ್ಯ ಪಡೆದ ನಂತರ 13 ರಾಷ್ಟ್ರಾಧ್ಯಕ್ಷರನ್ನು ಕಂಡಿರುವ ದೇಶದ ಪ್ರಜಾಪ್ರಭುತ್ವದ ದ್ಯೋತಕವಾಗಿರುವ, ಭಾರತ ಮತ್ತು ಯುರೋಪ್ ಸಂಸ್ಕೃತಿಯನ್ನು ಕಣಕಣದಲ್ಲಿ ಬಿಂಬಿಸುತ್ತಿರುವ ರಾಷ್ಟ್ರಪತಿ ಭವನ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಅವರನ್ನು ಸ್ವಾಗತಿಸಲು ಬಾಗಿಲು ತೆರೆದಿದೆ.
ಕರ್ನಾಟಕದ ಮೂಡುಬಿದಿರೆಯ ಕಂಬಗಳಲ್ಲಿರುವ ಗಂಟೆಗಳಿಂದ ಸ್ಫೂರ್ತಿಪಡೆದು ರಾಷ್ಟ್ರಪತಿ ಭವನದ ಕಂಬಕಂಬಗಳಲ್ಲಿ ಕಟ್ಟಲಾಗಿರುವ ಗಂಟೆಗಳು ಅದೇ ರೀತಿಯಲ್ಲಿ ನಿನಾದಗೈಯುತ್ತಿವೆ.
ಇಂಡಿಯಾ ಗೇಟ್ನ ಪಶ್ಚಿಮ ಭಾಗದಲ್ಲಿ, ರೈಸಿನಾ ಹಿಲ್ಸ್ ಮೇಲೆ 2 ಲಕ್ಷ ಚದರಡಿಯ ಪ್ರದೇಶದಲ್ಲಿ, 7 ಸಾವಿರ ಲಕ್ಷ ಇಟ್ಟಿಗೆ, 30 ಲಕ್ಷ ಸೈಜುಗಲ್ಲುಗಳ ಸಹಾಯದಿಂದ, ನಾಲ್ಕು ಅಂತಸ್ತುಗಳಲ್ಲಿ, 340 ಕೋಣೆಗಳಿರುವ ಪೂರ್ವಾಭಿಮುಖವಾಗಿರುವ ರಾಷ್ಟ್ರಪತಿ ಭವನದ ಸೌಂದರ್ಯವನ್ನು ಕೆಲಪದಗಳಲ್ಲಿ ಬಣ್ಣಿಸಲು ಅಸಾಧ್ಯ.
ಬ್ರಿಟಿಷ್ ವೈಸ್ರಾಯ್ಗಳಿಗಾಗಿ ಎಡ್ವಿನ್ ಲ್ಯಾಂಡ್ಸೀರ್ ಲ್ಯುಟೆನ್ ಪರಿಕಲ್ಪನೆಯಲ್ಲಿ 1929ರಲ್ಲಿ ನಿರ್ಮಾಣವಾದ ಈ 'ಅರಮನೆ', ಭಾರತ ಗಣರಾಜ್ಯವಾದ ಮೇಲೆ 1950ರಿಂದ ರಾಷ್ಟ್ರಪತಿಗಳಿಗೆ ಅಧಿಕೃತ ನಿವಾಸವಾಗಿದೆ.
ಮುಘಲ್ ಗಾರ್ಡನ್ : ಮುಘಲರ ಶೈಲಿಯಲ್ಲಿ, ಸಾಂಚಿ ಸ್ತೂಪದ ರೀತಿಯಲ್ಲಿ ನಿರ್ಮಿಸಲಾಗಿರುವ ಗುಮ್ಮಟದ ಸೌಂದರ್ಯ ಒಂದು ಬಗೆಯದಾದರೆ, 320 ಎಕರೆ ಜಮೀನಿನಲ್ಲಿ ರಾಷ್ಟ್ರಪತಿ ಭವನ ನಿರ್ಮಿಸಲು ವ್ಯಯಿಸಲಾಗಿರುವ ಖರ್ಚಿಗಿಂತ ಹೆಚ್ಚು ಹಣ ವ್ಯಯಿಸಿ ನಿರ್ಮಿಸಲಾಗಿರುವ ಮುಘಲ್ ಗಾರ್ಡನ್ ಸೌಂದರ್ಯ ಮತ್ತೊಂದು ಬಗೆಯದು. ಒಂದು ಅಂದಾಜಿನ ಪ್ರಕಾರ, ರಾಷ್ಟ್ರಪತಿ ಭವನವನ್ನು ಅಂದಿನ ಕಾಲದಲ್ಲಿ 12.8 ಮಿಲಿಯನ್ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದರೆ, ಮುಘಲ್ ಗಾರ್ಡನ್ ಮತ್ತು ಸ್ಟಾಫ್ ಕ್ವಾರ್ಟರ್ಸ್ ನಿರ್ಮಿಸಲು 14 ಮಿಲಿಯನ್ ರುಪಾಯಿ ವೆಚ್ಚ ಮಾಡಲಾಗಿತ್ತು.
ಮುಘಲರ ರಾಜರ ರುಚಿಗೆ ತಕ್ಕಂತೆ ಮತ್ತು ಬ್ರಿಟಿಷ್ ಶೈಲಿಯಲ್ಲಿ, ರಾಷ್ಟ್ರಪತಿ ಭವನದ ಹಿಂಭಾಗದಲ್ಲಿ 6 ಹೆಕ್ಟೇರು ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಮುಘಲ್ ಗಾರ್ಡನ್ ಭಾರತದ ಏಳು ಅದ್ಭುತಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ. ಮೈಸೂರಿನ ಬೃಂದಾವನ ಗಾರ್ಡನ್, ಆಗ್ರಾದ ತಾಜ್ ಮಹಲ್, ಲಾಹೋರದ ಶಾಲಿಮಾರ್ ಗಾರ್ಡನ್ ಸಂಗಮದಂತಿರುವ ಈ ಉದ್ಯಾನವನ ಅಕ್ಷರಶಃ ಸ್ವರ್ಗವನ್ನೇ ಧರೆಗಿಳಿಸಿದಂತಿದೆ. ಈ ಉದ್ಯಾನವನ ರಾಷ್ಟ್ರಪತಿ ಭವನದ ಆಕರ್ಷಣೆಯ ಕೇಂದ್ರಬಿಂದು. ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರಿಗೆ ಮುಘಲ್ ಗಾರ್ಡನ್ಸ್ ತೆರೆಯಲಾಗುತ್ತದೆ.
ಅದ್ಭುತ ಹೂತೋಟ : ಹಚ್ಚಹಸಿರಿನ ಹೊದಿಕೆ ಹೊದ್ದಂತಿರುವ ಉದ್ಯಾನವನದಲ್ಲಿ ವಿಶಿಷ್ಟ ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. 250 ಬಗೆಯ ಗುಲಾಬಿ ಗಿಡಗಳಿರುವ ರೋಸ್ ಗಾರ್ಡನ್ ವಿಶ್ವದಲ್ಲೇ ಅತ್ಯುತ್ತಮವಾದ ತೋಟಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಪ್ಪು ಬಿಳುಪು ಸೇರಿದಂತೆ ಕಾಮನಬಿಲ್ಲಿನ ಎಲ್ಲ ಬಣ್ಣಗಳಲ್ಲಿರುವ ರೋಸ್ಗಳು ರಾಷ್ಟ್ರಪತಿ ಭವನದ ಅಂದವನ್ನು ಹೆಚ್ಚಿಸಿವೆ. ಪ್ರತಿಯೊಂದಕ್ಕೂ ಬೇರೇಬೇರೆ ಹೆಸರುಗಳನ್ನು ಇಡಲಾಗಿದೆ. ಮದರ್ ತೆರೇಸಾ, ಅರ್ಜುನ, ಭೀಮ, ರಾಜಾ ರಾಮ್ ಮೋಹನ್ ರಾಯ್, ಜವಾಹರ್, ಜಾನ್ ಎಫ್ ಕೆನಡಿ, ಕ್ವೀನ್ ಎಲಿಜಬೆತ್ ಹೆಸರಿನಿಂದ ಹಿಡಿದು ಫಸ್ಟ್ ಪ್ರೈಸ್, ಜಂತರ್ ಮಂತರ್ ಮುಂತಾದ ವಿಶಿಷ್ಟ ಹೆಸರುಗಳಿಂದ ಅವನ್ನು ಕರೆಯಲಾಗುತ್ತದೆ.
ಈ ಬೊಟ್ಯಾನಿಕಲ್ ಗಾರ್ಡನ್ನಲ್ಲಿ ನಿರ್ಮಿಸಿರುವ ಬೋನ್ಸಾಯ್ ಗಾರ್ಡನ್ ವಿಶ್ವದಲ್ಲಿಯೇ ಅತ್ಯುತ್ತಮವಾದುದು ಎಂದು ಪರಿಗಣಿಸಲಾಗಿದೆ. ವರ್ಷದ ಎಲ್ಲ ಋತುಗಳಲ್ಲಿ ವಿಶಿಷ್ಟ ಬಗೆಯ ಹೂವುಗಳು ಒಂಟಿ ಕಾಲ ಮೇಲೆ ನರ್ತನ ಮಾಡುತ್ತಲೇ ಇರುತ್ತವೆ. ಅನೇಕ ಬಗೆಯ ಗಿಡಮೂಲಿಕೆಗಳು ಇರುವ ಮುಘಲ್ ಗಾರ್ಡನ್ ನೋಡಲು ಎರಡು ಕಣ್ಣು ಸಾಲದು. ಅಧಿಕಾರ ಸ್ವೀಕರಿಸಿದ ಮೇಲೆ ವಿದೇಶ ಪ್ರವಾಸ, ನಾನಾ ಕಾರ್ಯಕ್ರಮಗಳ ಉದ್ಘಾಟನೆ, ವಿದೇಶಿ ರಾಯಭಾರಿಗಳನ್ನು ಬರಮಾಡಿಕೊಳ್ಳುವಿಕೆ, ಆರೋಪಿಗಳಿಗೆ ನೀಡಿರುವ ಮರಣದಂಡನೆ ಶಿಕ್ಷೆ ಕ್ಷಮಾದಾನ ಅರ್ಜಿಯ ವಿಲೇವಾರಿ ಮತ್ತಿತರ ಆಡಳಿತಾತ್ಮಕ ಕೆಲಸಗಳ ನಡುವೆ ಕಣ್ಮನ ಸೆಳೆಯುವ ಈ ಉದ್ಯಾನವನದಲ್ಲಿ ವಿಹರಿಸಲು ರಾಷ್ಟ್ರಪತಿಗೆ ಸಮಯವಾದರೂ ಸಿಗುತ್ತದಾ?