ಗುವಾಹಾಟಿ : 'ಬಾಂಡ್' ಪತ್ತೆ ಹಚ್ಚಿದವರಿಗೆ ಬಹುಮಾನ
ಆದರೆ ಆ ವ್ಯಕ್ತಿ ತಲೆಮರೆಸಿಕೊಂಡಿದ್ದು, ಆತನ ಸುಳಿವು ಅಥವಾ ಅವನನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಆಸ್ಸಾಂ ಸರಕಾರ ಘೋಷಿಸಿದೆ. ಕೆಂಪು ಟಿ-ಶರ್ಟ್ ಧರಿಸಿದ್ದ ಆ ವ್ಯಕ್ತಿಯನ್ನು ಅಮರ್ ಜ್ಯೋತಿ ಕಲಿತ ಎಂದು ಗುರುತಿಸಲಾಗಿದ್ದು, ಆ ಘಟನೆ ನಡೆದಾಗ ಯುವತಿಯ ಮೇಲಂಗಿಯನ್ನು ಕಿತ್ತುಹಾಕಲು ಯತ್ನಿಸಿ ವಿಕೃತ ಆನಂದ ಅನುಭವಿಸಿದ್ದ.
ಯುವತಿಯ ಮೇಲೆ ಲೈಂಗಿಕ ದಬ್ಬಾಳಿಕೆ ನಡೆದ ದಿನದಿಂದಲೇ ಅಮರ್ ಪರಾರಿಯಾಗಿದ್ದಾನೆ. ಆತ ಮುಂಬೈನಲ್ಲಿ ತಲೆಮರೆಸಿಕೊಂಡಿರುವುದು ತಿಳಿದುಬಂದಿದ್ದು, ಪೊಲೀಸರು ಆತನ ಬಂಧನಕ್ಕಾಗಿ ವ್ಯಾಪಕ ಬಲೆ ಬೀಸಿದ್ದಾರೆ ಎಂದು ಆಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು ಹೇಳಿಕೆ ನೀಡಿದ್ದರು.
ದೌರ್ಜನ್ಯಕ್ಕೊಳಗಾದ ಯುವತಿಯನ್ನು ವಿವಸ್ತ್ರಗೊಳಿಸಿ ಅವಮಾನಿಸಿದ ಘಟನೆಯನ್ನು ವಿಡಿಯೋ ಚಿತ್ರೀಕರಿಸಿದ, ಈಗ ಬಂಧಿತನಾಗಿರುವ ಪತ್ರಕರ್ತ ಗೌರವ್ ಜ್ಯೋತಿ ನಿಯೋಗ್ ಪ್ರಮುಖ ಆರೋಪಿ ಅಮರ್ನ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್ ಬುಕ್ ಪುಟದಲ್ಲಿ ಆ ಘಟನೆ ನಡೆದ ದಿನದಂದು ಧರಿಸಿದ ಕೆಂಪು ಟಿ-ಶರ್ಟ್ ಧರಿಸಿರುವ ಫೋಟೋಗಳನ್ನು ಅಮರ್ ಜ್ಯೋತಿ ಕಲಿತ ಲಗತ್ತಿಸಿದ್ದು, ತನ್ನನ್ನು ತಾನು ಬಾಂಡ್ ಎಂದು ಕರೆದುಕೊಂಡಿದ್ದಾನೆ. ತನ್ನನ್ನು ಬಾಂಡ್ ಅಂತ ಕರೆದುಕೊಂಡು ಆತ ಮಾಡಿದ್ದು ಮಾತ್ರ ಹೇಡಿಯಂತಹ ಕೆಲಸ. ಅಮರ್ನ ಸ್ನೇಹಿತ ಪತ್ರಕರ್ತ ಗೌರವ್ನೇ ಯುವತಿಯ ಮೇಲಿನ ಲೈಂಗಿಕ ಹಲ್ಲೆಗೆ ಪ್ರಚೋದನೆ ನೀಡಿದ್ದ ಎಂದು ಆರ್ಟಿಐ ಕಾರ್ಯಕರ್ತ ಆರೋಪಿಸಿದ್ದಾರೆ.
ಆದರೆ, ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಗೌರವ್, ಅಲ್ಲಿ ದೊಡ್ಡ ಗುಂಪಿದ್ದರಿಂದ ಯುವತಿಯನ್ನು ಪಾರು ಮಾಡಲು ಆಗಲಿಲ್ಲ. ಆದರೆ, ಅದನ್ನು ಚಿತ್ರೀಕರಿಸಿದರೆ ಆರೋಪಿಗಳನ್ನು ಹಿಡಿಯಲು ಸಹಾಯವಾಗುತ್ತದೆ ಎಂದು ಅರ್ಧ ಗಂಟೆ ನಡೆದ ಹೇಯ ಕೃತ್ಯವನ್ನು ಚಿತ್ರೀಕರಿಸಿದೆ ಎಂದಿದ್ದಾನೆ.
ಮತ್ತೊಂದು ವಿವಾದ : ಯುವತಿಯನ್ನು ವಿವಸ್ತ್ರಗೊಳಿಸಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಉದ್ಯಮ ಸಚಿವ ಕೈಲಾಶ್ ವಿಜಯವರ್ಗಿಯಾ ಎಂಬುವವರು, ಇಂದಿನ ಕಾಲದಲ್ಲಿ ಯುವತಿಯರು ಕಾಮಪ್ರಚೋದಕ ದಿರಿಸು ಧರಿಸುತ್ತಿರುವುದರಿಂದಲೇ ಇಂತಹ ಘಟನೆಗಳು ಸಂಭವಿಸುತ್ತಿವೆ. ಯುವತಿಯರು ಸಭ್ಯವಾಗಿ ಉಡುಪು ಧರಿಸುವುದನ್ನು ಕಲಿಯಬೇಕು ಎಂದು ಹೇಳಿ ವಿವಾದ ಹುಟ್ಟುಹಾಕಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡಿ ಸಿಕ್ಕುಬಿದ್ದಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲರು ಕೂಡ ಕೆಲ ತಿಂಗಳುಗಳ ಹಿಂದೆ ಇಂತಹುದೇ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಮಹಿಳೆಯರು ಅಶ್ಲೀಲವಾಗಿ ಬಟ್ಟೆ ಧರಿಸುತ್ತಿರುವುದೇ ಅವರ ಮೇಲೆ ಅತ್ಯಾಚಾರ ಎಸಗುವಂತೆ ಯುವಕರನ್ನು ಪ್ರಚೋದಿಸುತ್ತಿದೆ ಎಂದು ಹೇಳಿಕೆ ನೀಡಿ ಕೋಲಾಹಲವನ್ನು ಎಬ್ಬಿಸಿದ್ದರು.
ಗುವಾಹಾಟಿ ಘಟನೆಗೆ ಸಂಬಂಧಿಸಿದಂತೆ ಯುವತಿಯನ್ನು ಭೇಟಿ ಮಾಡಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದ ಅಲ್ಕಾ ಲಾಂಬಾ ಅವರು ಯುವತಿಯ ಹೆಸರನ್ನು ಬಹಿರಂಗಪಡಿಸಿ ವಿವಾದಕ್ಕೆ ನಾಂದಿ ಹಾಡಿದ್ದರು. ನಂತರ ಅವರನ್ನು ಆಯೋಗದಿಂದಲೇ ಕಿತ್ತುಹಾಕಲಾಯಿತು.