ಮಳೆಗಾಗಿ ಪೂಜೆ ಸರ್ಕಾರದ ನಯಾ ಪೈಸೆ ಖರ್ಚಿಲ್ಲ
ಭಾನುವಾರ(ಜು.22) ಮಣಿಪಾಲದ ಜಿಲ್ಲಾ ಕಚೇರಿಗಳ ಸಂಕೀರ್ಣ ರಜತಾದ್ರಿಯಲ್ಲಿ ಸಚಿವರ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸ ಪೂಜಾರಿ, 'ಮಳೆ ಪೂಜೆಗಾಗಿ ಸರಕಾರ 17 ಕೋಟಿ ರೂ. ಬಿಡುಗಡೆ ಮಾಡುತ್ತಿವೆ ಎಂಬ ವಿಚಾರ ಸುಳ್ಳು. ಇಲ್ಲಿ ಯಾವುದೇ ಆಡಂಬರದ ರಾಜಕಾರಣ ಮಾಡುತ್ತಿಲ್ಲ.ವಿಪಕ್ಷ ನಾಯಕರು ಈ ಬಗ್ಗೆ ವೃಥಾ ಆರೋಪಿಸುವುದನ್ನು ನಿಲ್ಲಿಸಲಿ ಎಂದರು.
ರಾಜ್ಯದಲ್ಲಿ ಒಟ್ಟು 34,266 ದೇವಳಗಳಿದ್ದು, ಅವುಗಳಲ್ಲಿ ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವ 155 ಹಾಗೂ 5 ರಿಂದ 25 ಲಕ್ಷ ರೂ. ಆದಾಯ ಇರುವ 185 ದೇವಳಗಳಿವೆ. ಉಳಿದ 33,900 ದೇವಸ್ಥಾನಗಳು 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವಂತಾಗಿದೆ. ಒಟ್ಟಾರೆ 25,000 ದೇಗುಲಗಳು ಉತ್ತಮ ಆದಾಯ ಹೊಂದಿದೆ.
ಆದ್ದರಿಂದ ಆಯಾ ದೇವಸ್ಥಾನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ 5 ಸಾವಿರ ರೂ. ಮೀರದಂತೆ ವ್ಯಯಿಸಿ ಮಳೆಗಾಗಿ ವಿಶೇಷ ಪೂಜೆ ಮಾಡಲು ಸೂಚಿಸಲಾಗಿದೆ. ಆದರೆ, ಇದರಲ್ಲಿ ಯಾವುದೇ ಒತ್ತಡವಿಲ್ಲ. ಒಲ್ಲದ ಮನಸ್ಸಿನಿಂದ ಒತ್ತಾಯಕ್ಕೆ ಪೂಜೆ ಸಲ್ಲಿಸುವುದು ಬೇಕಿಲ್ಲ ಎಂದು ಪೂಜಾರಿ ಹೇಳಿದರು.
ಕಡಲ್ಕೊರೆತಕ್ಕೆ ಹಣ: ಬೆಂಗಳೂರಿನಲ್ಲಿ ಮಂಗಳವಾರ ಬಂದರು ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಕಡಲ್ಕೊರೆತಕ್ಕೆ ಎಡಿಬಿ ಅನುದಾನದಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಪ್ರಸ್ತಾವ ಇರುವುದರಿಂದ ಸದ್ಯ ತಾತ್ಕಾಲಿಕ ಪರಿಹಾರಕ್ಕೆ ಹಣ ಬಿಡುಗಡೆ ಯಾಗುತ್ತಿಲ್ಲ. ಸದ್ಯಕ್ಕೆ ತಾತ್ಕಾಲಿಕ ಪರಿಹಾರಕ್ಕೆ ಅನುದಾನ ಬಿಡುಗಡೆ ಗೊಳಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಟ್ಟಿಗೆ ಚರ್ಚಿಸುವೆ ಎಂದು ಸಚಿವ ಪೂಜಾರಿ ತಿಳಿಸಿದರು.
ವಾರದಲ್ಲಿ ಎರಡು ಅರ್ಧ ದಿನ ಅಥವಾ ಒಂದು ದಿನ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಆ.4ರಂದು ಜಿಲ್ಲಾ ಪ್ರಗತಿ ಪರಿಶೀಲನ ಸಭೆಯನ್ನು ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಸಹಿತ ಜನ ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ಜಿಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ತಾಪಂ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸೋಮಶೇಖರ್ ಭಟ್ ಮೊದಲಾ ದವರು ಉಪಸ್ಥಿತರಿದ್ದರು.